
ಬೆಂಗಳೂರು: ವಿಭಿನ್ನ ಹಿನ್ನೆಲೆಯ ಎಸ್ಎಂ ಕೃಷ್ಣ ಮತ್ತು ಎಚ್ಡಿ ದೇವೇಗೌಡರು ಕರ್ನಾಟಕ ರಾಜಕೀಯದಲ್ಲಿ ವಿಶಿಷ್ಟ ಉದಾಹರಣೆಯಾಗಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಇಬ್ಬರು ದಿಗ್ಗಜರ ನಡುವೆ ಹೋಲಿಕೆ ಸಾಧ್ಯವಾದರೆ ಅದು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಮತ್ತು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ನಡುವೆ ಮಾತ್ರ, ಈ ಇಬ್ಬರು ಹಳೆಯ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಸಮಕಾಲೀನರು.
ವೈವಿಧ್ಯಮಯ ಹಿನ್ನೆಲೆಯಿಂದ ಬಂದ ಕೃಷ್ಣ ವಿದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾವಂತ. ಗುತ್ತಿಗೆದಾರರಾಗಿ ಸಿವಿಲ್ ಇಂಜಿನಿಯರ್ ಆಗಿದ್ದ ದೇವೇಗೌಡ ಅವರು ತಮ್ಮದೇ ಆದ ಗುಣಲಕ್ಷಣಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ರಂಗದಲ್ಲಿ ಉನ್ನತ ದರ್ಜೆಯ ನಾಯಕರಾಗಿ ಹೊರಹೊಮ್ಮಿದರು. ಇಬ್ಬರೂ ಕ್ರಮವಾಗಿ ಮದ್ದೂರು ಮತ್ತು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರರಾಗಿ ಆಯ್ಕೆಯಾಗಿದ್ದರು. ನಂತರ ಪಿಎಸ್ಪಿಯೊಂದಿಗೆ ಗುರುತಿಸಿಕೊಂಡ ಕೃಷ್ಣ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅನುಸರಿಸಿ ಕಾಂಗ್ರೆಸ್ ಪಕ್ಷದೊಂದಿಗೆ ರಾಜಿ ಮಾಡಿಕೊಂಡರು. ಮನಮೋಹನ್ ಸಿಂಗ್ ಕ್ಯಾಬಿನೆಟ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಎತ್ತರಕ್ಕೆ ಏರಲು ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದರು.
ಇನ್ನೂ ಬಿಡುಗಡೆಯಾಗಬೇಕಿರುವ ಅವರ ಆತ್ಮಚರಿತ್ರೆಯಲ್ಲಿ ಕೃಷ್ಣ ಅವರು 2004ರಲ್ಲಿ ಪ್ರಧಾನಿ ಹುದ್ದೆಗೆ ತಮ್ಮ ಹೆಸರನ್ನು ಪರಿಗಣಿಸಲಾಗಿತ್ತು ಎಂದು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಕೃಪ ಕಟಾಕ್ಷದಲ್ಲಿದ್ದ ಅವರಿಗೆ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ ಗೌಡರು ರಾಜ್ಯದಲ್ಲಿ ಜನತಾ ಪರಿವಾರದ ಪ್ರಮುಖ ನಾಯಕರಾಗುವ ಮೂಲಕ ಯಶಸ್ವಿಯಾದರು ಮತ್ತು ಕ್ರಮೇಣ ಅಧಿಕಾರಕ್ಕಾಗಿ ಚೌಕಾಶಿ ಮಾಡುವ ಗುಣ ಬೆಳೆಸಿಕೊಂಡರು, ಅದು ಅವರಿಗೆ ವೈಯಕ್ತಿಕವಾಗಿ ಬೆಳೆಯಲು ಸಹಾಯ ಮಾಡಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಜೂನ್.1, 1996 ರ ಅವರು ಪ್ರಧಾನಿಯಾಗುವ ವೇಳೆಗೆ ದೇವೇಗೌಡರು ಪ್ರಬಲ ಪ್ರಾದೇಶಿಕ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು, ಇದು ಹಳೆಯ ಮೈಸೂರು ಪ್ರದೇಶದ ಒಕ್ಕಲಿಗ ಸಮುದಾಯದೊಂದಿಗಿನ ಅವರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿತು ಎಂದು ಹಿರಿಯ ಪತ್ರಕರ್ತ ಡಿ ಉಮಾಪತಿ ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ಲೇಖಕ ಆರ್.ಕೆ. ಜೋಶಿ ಅವರು ಗೌಡ ಮತ್ತು ಕೃಷ್ಣ ಇಬ್ಬರೂ ಒಕ್ಕಲಿಗ ಸಮುದಾಯದ ಸಂಪೂರ್ಣ ಬೆಂಬಲ ಪಡೆಯಲು ಪರಸ್ಪರ ಯುದ್ಧ ನಡೆಸಿದರು ಆದರೆ ಎಸ್ ಎಂ ಕೃಷ್ಣ ಅವರಿಗಿಂತ ರಾಜಕೀಯದಲ್ಲಿ ದೇವೇಗೌಡರು ಹೆಚ್ಚು ಚಾಣಾಕ್ಷರಾಗಿದ್ದರಿಂದ ಯಶಸ್ವಿಯಾದರು ಎಂದು ಹೇಳಿದ್ದಾರೆ.
ಯಾವುದೇ ಚುನಾವಣೆಯಾಗಲಿ, ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅಥವಾ ಉಪಚುನಾವಣೆಯೇ ಆಗಿರಲಿ ದೇವೇಗೌಡರು ಟೊಂಕಕಟ್ಟಿ ಹೋರಾಡುತ್ತಿದ್ದರು ಅವರು ಹೇಳಿದ್ದಾರೆ. 2004 ರಲ್ಲಿ ಕೃಷ್ಣ ದೇವೇಗೌಡರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದರು, ಕಾಂಗ್ರೆಸ್-ಜೆಡಿ (ಎಸ್) ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಲು ಬಯಸಿದ್ದರು ಮತ್ತು ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಕಾರ್ಯಕ್ರಮಗಳನ್ನು ಮುಂದುವರಿಸಲು ಬಯಸಿದ್ದರು. ಆದರೆ ದೇವಗೌಡರು ಮತ್ತೊಬ್ಬ ಒಕ್ಕಲಿಗ ನಾಯಕನನ್ನು ಸಿಎಂ ಮಾಡಿದರೆ ತಮ್ಮ ರಾಜಕೀಯ ಪ್ರಭಾವಕ್ಕೆ ಅಪಾಯವಿದೆ ಎಂದು ತಿಳಿದು ಒಪ್ಪಂದವನ್ನು ಸ್ಪಷ್ಟವಾಗಿ ತಿರಸ್ಕರಿಸಿದರು. ದೇವೇಗೌಡರು ಈ ಒಪ್ಪಂದಕ್ಕೆ ಸಮ್ಮತಿಸಿದ್ದರೇ ಎಸ್ ಎಂ ಕೃಷ್ಣ ಈ ಭಾಗದ ನಿರ್ವಿವಾದ ಒಕ್ಕಲಿಗ ನಾಯಕ ರಾಗುತ್ತಿದ್ದರು, ದೇವೇಗೌಡರ ಪ್ರಾಬಲ್ಯವು ಕಡಿಮೆಯಾಗುತ್ತಿತ್ತು ಎಂದು ವಿಶ್ಲೇಷಿಸಿದರು. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಲು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ್ದು, ರಾಜ್ಯದ ಸಕ್ರಿಯ ರಾಜಕಾರಣದಿಂದ ಅವರನ್ನು ಮತ್ತಷ್ಟ ದೂರವಾದರು, ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೇಲೆ ದೇವೇಗೌಡರ ಪ್ರಭಾವ ಬೀರಿದ್ದರು ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಅವರು ವಿಭಿನ್ನ ರಾಜಕೀಯ ಪ್ರಯಾಣದಿಂದ ಬಂದಿದ್ದರೂ, ಅವರು ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಇದ್ದರು. ಅನೇಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಿದ ದಿನಗಳನ್ನು ನಾನು ನೋಡಿದ್ದೇನೆ ಎಂದು ಗೌಡರ ಪುತ್ರ ಮತ್ತು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. 2017ರಲ್ಲಿ 2024ರ ಮಂಡ್ಯ ಲೋಕಸಭಾ ಚುನಾವಣೆ ಸಮಯದಲ್ಲಿ ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗಿದ್ದರು, ಈ ವೇಳೆ ಕುಮಾರಸ್ವಾಮಿ ಕೃಷ್ಣ ಅವರ ಆಶೀರ್ವಾದ ಕೋರಿದ್ದರು. ಕೃಷ್ಣ ಅವರ ನಿಧನದಿಂದ ನನಗೆ ದುಃಖವಾಗಿದೆ. ಎಸ್.ಎಂ.ಕೃಷ್ಣ, ನನ್ನ ಸ್ನೇಹಿತ ಮತ್ತು ಕರ್ನಾಟಕ ರಾಜಕೀಯ ಬಹುಕಾಲದ ಸಹೋದ್ಯೋಗಿ. ನಾವು ಒಂದೇ ಸಮಯದಲ್ಲಿ ರಾಜಕೀಯವನ್ನು ಪ್ರಾರಂಭಿಸಿದ್ದೇವೆ ಮತ್ತು ಅಭಿವೃದ್ಧಿ ಮತ್ತು ಆಡಳಿತಕ್ಕೆ ವಿಭಿನ್ನ ರೀತಿಯ ಕೊಡುಗೆ ನೀಡಿದ್ದೇವೆ ಎಂದು ಮಾಜಿ ಪಿಎಂ ಎಚ್.ಡಿ ದೇವೇಗೌಡ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement