ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಶಾಸಕರು ಹೋಟೆಲ್‌ಗೆ ಶಿಫ್ಟ್, ಸೋಮವಾರ ಶಾಸಕಾಂಗ ಪಕ್ಷದ ಸಭೆ

ರಾಜ್ಯಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಶಾಸಕರನ್ನು ಒಗ್ಗೂಡಿಸುವ ಉದ್ದೇಶದಿಂದ ಹೋಟೆಲ್ ರಾಜಕೀಯದ ಮೊರೆ ಹೋಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಶಾಸಕರನ್ನು ಒಗ್ಗೂಡಿಸುವ ಉದ್ದೇಶದಿಂದ ಹೋಟೆಲ್ ರಾಜಕೀಯದ ಮೊರೆ ಹೋಗಿದ್ದು, ಆಡಳಿತಾರೂಢ ಪಕ್ಷದ ಎಲ್ಲಾ ಶಾಸಕರು ಸೋಮವಾರ ನಗರದ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಮತ್ತು ಮರುದಿನ ಮತದಾನಕ್ಕಾಗಿ ಒಟ್ಟಿಗೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

ಫೆಬ್ರವರಿ 27 ರಂದು ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸದ್ಯ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮೈತ್ರಿಗೆ ರಾಜ್ಯಸಭೆ ಚುನಾವಣ ಅಖಾಡ ಪ್ರತಿಷ್ಠೆಯ ಕಣವಾಗಿದೆ.

ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ ಕಣದಲ್ಲಿ ಐದು ಜನ ಅಭ್ಯರ್ಥಿಗಳಿದ್ದಾರೆ. ಅಜಯ್ ಮಾಕೆನ್, ನಾಸೀರ್ ಹುಸೇನ್, ಜೆಸಿ ಚಂದ್ರಶೇಖರ್, ನಾರಾಯಣಸಾ ಬಾಂಡಗೆ, ಕುಪೇಂದ್ರ ರೆಡ್ಡಿ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, "ನಾವು ಎಚ್ಚರಿಕೆಯಿಂದ ಇರಬೇಕು... ಎಲ್ಲಾ ಶಾಸಕರು ಹೋಟೆಲ್‌ನಲ್ಲಿ ಒಟ್ಟಿಗೆ ಇರುತ್ತೇವೆ. ನಾವು ಮತ ಹಾಕಲು ಒಟ್ಟಿಗೆ ಬರುತ್ತೇವೆ(ಮಂಗಳವಾರ ವಿಧಾನಸೌಧಕ್ಕೆ) ನಮ್ಮ ಬಳಿ ಹೆಚ್ಚುವರಿ ಮತಗಳಿವೆ. ನಮ್ಮ ಭದ್ರತೆಗೆ ನಾವು ಏನು ಬೇಕಾದರೂ ಮಾಡುತ್ತೇವೆ. ಇತರರು ಸಹ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ನಾನು ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಧ್ಯಾಹ್ನ 3:30ಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಪಕ್ಷದ ಖಜಾಂಚಿ ಅಜಯ್ ಮಾಕನ್ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಮಂಗಳವಾರ ಎಲ್ಲಾ ಶಾಸಕರನ್ನು ಒಟ್ಟಿಗೆ ಹೋಟೆಲ್‌ನಿಂದ ವಿಧಾನಸೌಧದವರೆಗೆ ಬಸ್‌ನಲ್ಲಿ ಮತದಾನಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಬಿಜೆಪಿ –ಜೆಡಿಎಸ್ ಮೈತ್ರಿಯ ಹಾದಿ ನಿರ್ಧರಿಸಲಿರುವ ರಾಜ್ಯಸಭೆ ಚುನಾವಣೆ ಫಲಿತಾಂಶ (ಸುದ್ದಿ ವಿಶ್ಲೇಷಣೆ)

ಇಬ್ಬರು ಸಚಿವರು ಸೇರಿದಂತೆ ಪಕ್ಷದ ಎಂಟು ನಾಯಕರನ್ನು ಶಾಸಕರೊಂದಿಗೆ ಸಮನ್ವಯತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಾಲ್ಕು ಸ್ಥಾನಗಳ ಪೈಕಿ ಒಂದನ್ನು ಮಾತ್ರ ಗೆಲ್ಲುವ ಶಕ್ತಿ ಮೈತ್ರಿಕೂಟಕ್ಕಿದೆಯಾದರೂ ಬಿಜೆಪಿ-ಜೆಡಿ(ಎಸ್) ಸೇರಿ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆಯ ಕಣ ರಂಗೇರಿದೆ.

224 ಸದಸ್ಯರ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಆಡಳಿತಾರೂಢ ಕಾಂಗ್ರೆಸ್, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಮೂರು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ 66 ಮತ್ತು 19 ಸದಸ್ಯರನ್ನು ಹೊಂದಿದ್ದು, ಒಟ್ಟಾಗಿ ಒಂದು ಸ್ಥಾನವನ್ನು ಗೆಲ್ಲುವ ಸ್ಥಿತಿಯಲ್ಲಿವೆ. ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳನ್ನು ಪಡೆಯಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com