ಬೆಂಗಳೂರು: ರಾಜ್ಯಸಭೆ ಚುನಾವಣೆ ಹೊತ್ತಿನಲ್ಲಿ ಆಮಿಷವೊಡ್ಡಿ ಶಾಸಕರನ್ನು ಖರೀದಿಸುವ ಆರೋಪ ಮತ್ತೆ ಕೇಳಿಬಂದಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಗಾಣಿಗ ರವಿ ಕುಮಾರ್ ಗೌಡ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಕೇಂದ್ರ ಡಿಸಿಪಿ ಶೇಖರ್ ಹೆಚ್ ತೆಕ್ಕಣ್ಣವರ್ ಖಚಿತಪಡಿಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರಿಗೆ ಶಾಸಕ ಗಾಣಿಗ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 170 ಮತ್ತು ಸೆಕ್ಷನ್ 171, ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
ಪ್ರಚೋದನೆ ಮತ್ತು ಬೆದರಿಕೆ ಕರೆಗಳ ಬಗ್ಗೆ ವಿವರ ಕೇಳಲು ತನಿಖಾಧಿಕಾರಿ ನನ್ನನ್ನು ಕರೆದಿದ್ದು, ನಾನು ಈಗ ಮಂಡ್ಯದಲ್ಲಿದ್ದೇನೆ ಎಂದು ಅವರಿಗೆ ವಿವರಿಸಿದ್ದೇನೆ. ಬೆಂಗಳೂರಿಗೆ ಬಂದು ಎಲ್ಲಾ ವಿವರಗಳನ್ನು ನೀಡುತ್ತೇನೆ ಎಂದು ಶಾಸಕ ಗಾಣಿಗ ಹೇಳಿದರು.
ಪ್ರತಿ ಮತಕ್ಕೆ ಒಡ್ಡಿರುವ ಆಮಿಷದ ಲಂಚದ ಮೊತ್ತವು ಸುಮಾರು 10 ಕೋಟಿ ರೂಪಾಯಿಗಳಾಗಿದ್ದು, ಇದು ಯಾವುದೇ ಸಂಸತ್ತಿನ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ನೀಡುವ ಅತಿ ದೊಡ್ಡ ಮೊತ್ತದ ಲಂಚ ಪ್ರಕರಣವಾಗಿದೆ. ತಾವು ಹೇಳಿದಂತೆ ಕೇಳದಿದ್ದರೆ ಕೇಂದ್ರದ ಅಧಿಕಾರಿಗಳು ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಶಾಸಕರೊಬ್ಬರಿಗೆ ಬೆದರಿಕೆ ಕರೆ ಕೂಡ ಬಂದಿತ್ತು ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷ, ಆಸೆಗಳಿಗೆ ಒಳಗಾಗಿ ಅಡ್ಡ ಮತದಾನ ತಪ್ಪಿಸಲು ಯಾವ ರೀತಿ ಶಾಸಕರು ಪಕ್ಷಕ್ಕೆ ಬದ್ಧರಾಗಿರಬೇಕು ಮತ್ತು ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಯಾವುದೇ ಹಿನ್ನಡೆ ಅನುಭವಿಸದೆ ರಾಜ್ಯಸಭೆಗೆ ಆಯ್ಕೆಯಾಗಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಔತಣಕೂಟ ಏರ್ಪಡಿಸಿ ಕಾಂಗ್ರೆಸ್ ಶಾಸಕರಿಗೆ ಪಾಠ ಮಾಡಿದ್ದಾರೆ.
ಹೆಚ್ ಡಿಕೆ ಅಮಿತ್ ಶಾ ಭೇಟಿ, ಡಿಕೆ ಶಿವಕುಮಾರ್ ಏನೆಂದರು: ಮುಂಬರುವ ರಾಜ್ಯಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಸಂಬಂಧ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಕುರಿತು ಚರ್ಚೆ ನಡೆಸಲು ಇತ್ತೀಚೆಗೆ ಹೆಚ್ ಡಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಈ ಬಗ್ಗೆ ಡಿ ಕೆ ಶಿವಕುಮಾರ್ ಅವರ ಬಳಿ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ, ಎಲ್ಲಾ ವಿದ್ಯಮಾನಗಳನ್ನು ನಾವು ಗಮನಿಸುತ್ತಿದ್ದೇವೆ. ಯಾವ ಶಾಸಕರನ್ನು ಅವರು ಕರೆದಿದ್ದಾರೆ, ಅವರಲ್ಲಿ ಏನು ಮಾತನಾಡಿದ್ದಾರೆ ಎಂದೆಲ್ಲ ನಮಗೆ ಗೊತ್ತಿದೆ. ಸ್ನೇಹಿತರು-ಸಂಬಂಧಿಕರ ಮೂಲಕ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂಬುದು ಸಹ ನಮಗೆ ಗೊತ್ತಿದೆ. ಅವರ ಹೋರಾಟದ ಬತ್ತಳಿಕೆಯಲ್ಲಿ ಏನಿದೆ ಎಂದು ನಮಗೆ ಗೊತ್ತಿರುವುದರಿಂದ ನಾವು ತಯಾರಾಗಿ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದರು.
ಕಾಂಗ್ರೆಸ್ ಶಾಸಕರಿಗೆ ದೆಹಲಿಯಿಂದ ಕರೆ ಬಂದಿದೆಯೇ ಎಂದು ಕೇಳಿದ್ದಕ್ಕೆ, ಒಟ್ಟಾರೆಯಾಗಿ 138 ಶಾಸಕರು ನಮ್ಮ ಜೊತೆ ಇದ್ದಾರೆ. ಜನಾರ್ದನ ರೆಡ್ಡಿಯವರ ಬಳಿ ನಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದು ನಾವು ಕೇಳುತ್ತಿದ್ದೇವೆ. ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಅಣಕು ಮತದಾನ ನಡೆಸುತ್ತೇವೆ. ಮತದಾನದ ವಿಧಾನಗಳನ್ನು ರೂಪಿಸುತ್ತೇವೆ. ಬೇರೆ ಪಕ್ಷಗಳ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಆದರೆ ಅವರ ಹೆಸರನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಅಡ್ಡ ಮತದಾನ ತಡೆಯಲು ಕ್ರಮ: ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್ ಗೆ ತನ್ನ ಎಲ್ಲಾ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಬೇಕೆಂದರೆ 45 ಶಾಸಕರ ಬೆಂಬಲ ಅಗತ್ಯ. ಬಲವಾದ ಗೆಲುವಿಗಾಗಿ, 46 ಮೊದಲ ಪ್ರಾಶಸ್ತ್ಯದ ಮತ ಗಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಯಾವುದೇ ಅಡ್ಡ ಮತದಾನ ಆಗದಂತೆ ನೋಡಿಕೊಳ್ಳಲು ಎಲ್ಲಾ ಶಾಸಕರು ಮತ ಹಾಕುವ ಮುನ್ನ ತಮ್ಮ ಪಕ್ಷಕ್ಕೆ ಬ್ಯಾಲೆಟ್ ಪೇಪರ್ ತೋರಿಸಬೇಕು ಎಂದು ಕಡ್ಡಾಯ ಮಾಡಲಾಗಿದೆ.
Advertisement