ಬೆಂಗಳೂರು: ಕರ್ನಾಟಕ ರಾಜ್ಯಸಭಾ ಚುನಾವಣೆ ಫಲಿತಾಂಶ ಪಕ್ಷದ ತತ್ವ, ಆದರ್ಶ, ಪ್ರಜಾಪ್ರಭುತ್ವ ಮತ್ತು ನೈತಿಕತೆಗೆ ಸಿಕ್ಕ ಗೆಲುವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮೂರು ಮತ್ತು ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಮಾಜಿ ಕೇಂದ್ರ ಸಚಿವರಾದ ಅಜಯ್ ಮಾಕನ್, ಜಿ ಸಿ ಚಂದ್ರಶೇಖರ್ ಮತ್ತು ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್) ಮತ್ತು ನಾರಾಯಣಸಾ ಕೆ ಭಾಂಡ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
ಫಲಿತಾಂಶ ಸಂಬಂಧ ಪ್ರತಿಕ್ರಿಯೆ ನೀಡಿದ ಸುರ್ಜೇವಾಲಾ ಅವರು, ಇದು ಪಕ್ಷದ ತತ್ವ, ಆದರ್ಶ, ಪ್ರಜಾಪ್ರಭುತ್ವ ಮತ್ತು ನೈತಿಕತೆಗೆ ಸಿಕ್ಕ ವಿಜಯವಾಗಿದೆ. ಈ ಮೂಲಕ ಇಡಿ, ಆದಾಯ ತೆರಿಗೆತ ಸಿಬಿಐ ಮತ್ತು ಹಣ ಬಲದ ಮೇಲೆ ಸ್ಥಾಪಿತವಾಗಿರುವ ಬಿಜೆಪಿ ಮತ್ತು ಜನತಾ ದಳ (ಜಾತ್ಯತೀತ)ಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಐದನೇ ಅಭ್ಯರ್ಥಿಯಾಗಿ ಡಿ.ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ವಿರುದ್ಧವೂ ಸುರ್ಜೇವಾಲಾ ಅವರು ವಾಗ್ದಾಳಿ ನಡೆಸಿದರು.
ಇದು ಕಾಂಗ್ರೆಸ್ನ ಸತತ ಮೂರನೇ ಗೆಲುವಾಗಿದೆ. ಮೊದಲನೆಯದು ವಿಧಾನಸಭೆ ಚುನಾವಣೆಯಲ್ಲಿ 224 ಸದಸ್ಯ ಬಲದ ವಿಧಾನಸಭೆಯಲ್ಲಿ 134 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದ್ದು, ಎರಡನೆಯದು ವಿಧಾನ ಪರಿಷತ್ ಚುನಾವಣೆ ಮತ್ತು ಮೂರನೆಯದು ರಾಜ್ಯಸಭಾ ಚುನಾವಣೆ ಎಂದು ವಿವರಿಸಿದರು.
Advertisement