ರಾಮಮಂದಿರ ಉದ್ಘಾಟನೆ ಚುನಾವಣಾ ಗಿಮಿಕ್: ಬಿಜೆಪಿ ವಿರುದ್ಧ ಸಚಿವ ಡಿ ಸುಧಾಕರ್ ಕಿಡಿ

ಕಳೆದ ಚುನಾವಣೆ ವೇಳೆ ಪುಲ್ವಾಮಾ ಘಟನೆ ತೋರಿಸಿದ್ದ ಬಿಜೆಪಿಯವರು, ಇದೀಗ ರಾಮನ ಫೋಟೊ ಹಿಡಿದು ಗಿಮಿಕ್ ಮಾಡುತ್ತಿದ್ದಾರೆಂದು ಸಚಿವ ಡಿ ಸುಧಾಕರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸಚಿವ ಡಿ ಸುಧಾಕರ್
ಸಚಿವ ಡಿ ಸುಧಾಕರ್

ಬೆಂಗಳೂರು: ಕಳೆದ ಚುನಾವಣೆ ವೇಳೆ ಪುಲ್ವಾಮಾ ಘಟನೆ ತೋರಿಸಿದ್ದ ಬಿಜೆಪಿಯವರು, ಇದೀಗ ರಾಮನ ಫೋಟೊ ಹಿಡಿದು ಗಿಮಿಕ್ ಮಾಡುತ್ತಿದ್ದಾರೆಂದು ಸಚಿವ ಡಿ ಸುಧಾಕರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸ್ಟಂಟ್ ನೋಡಿದ್ದೇವೆ. ಎರಡು ಸಲ ಮೂರ್ಖರಾಗಿದ್ದೇವೆ. ಮತ್ತೆ ಮೂರನೇ ಸಲ ಮೂರ್ಖರಾಗಲು ಜನರು ದಡ್ಡರಾಗಲ್ಲ ಎಂಬ ನಂಬಿಕೆ ಇದೆ. ಲೋಕಸಭಾ ಚುನಾವಣೆ ಹಿನ್ನೆಲೆ ರಾಮಮಂದಿರ ಉದ್ಘಾಟನೆ ಮಾಡುತ್ತಿರುವುದ ಎಂಬುದು ಸತ್ಯ ಎಂದು ಹೇಳಿದರು.

ರಾಮಮಂದಿರಕ್ಕೆ ನಾನು, ಶಾಸಕ ರಘುಮೂರ್ತಿ ದುಡ್ಡು ಕೊಟ್ಟಿದ್ದೇವೆ. ಹಿಂದೆಲ್ಲಾ ಇಟ್ಟಿಗೆ ಸಹ ನೀಡಿದ್ದೇವೆ. ರಾಮ ಎಲ್ಲರಿಗೂ ದೇವರು, ಚುನಾವಣೆ ವೇಳೆ ದೇಗುಲ ಉದ್ಘಾಟನೆ ಗಿಮಿಕ್ ಮಾಡೋದು. ಭಾರತ ದೇಶದ ಧಾರ್ಮಿಕ ನಂಬಿಕೆ ಬಳಸಿಕೊಂಡು ಬಿಜೆಪಿಯವರು ಮತ ಗಾಳ ಹಾಕುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಎಲ್ಲಿತ್ತು ರಾಮ ಮಂದಿರ? ಪುಲ್ವಾಮ ದಾಳಿಯಲ್ಲಿ ಸುಮ್ಮ ಸುಮ್ಮನೆ ಯಾವುದೋ ಫ್ಲೈಟ್ ತೋರಿಸಿದ್ದರು. ಪಾಪ ಜನ ದೇಶ ಕಾಪಾಡುತ್ತಾರೆಂದು ನಂಬಿದರು. ಪುಲ್ವಾಮಾ ಘಟನೆಯಲ್ಲಿ ಎಷ್ಟು ಜನರು ಸತ್ತರು? ಪುಲ್ವಾಮಾ ಘಟನೆ ಕ್ರಿಯೇಟೆಡ್ ಎಂದು ಪೈಲೆಟ್ ಹೇಳಿಲ್ವಾ? ಎಂದು ಪ್ರಶ್ನಿಸಿದರು.

ಇದೇ ವೇಳೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಆಗಿದೆ. ಜೆಡಿಎಸ್‌ನ ಸೆಕ್ಯುಲರ್ ತತ್ವ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವಿದೆ ಎಂದು ಸ್ವತಃ ಅವರದೇ ಪಕ್ಷದ ಶಾಸಕ ಯತ್ನಾಳ್ ಆರೋಪ ಮಾಡಿದ್ದಾರೆ. ಇವರ ಭ್ರಷ್ಟಾಚಾರ ಎಲ್ಲಿವರೆಗೆ ನೋಡಿಕೊಂಡಿರುತ್ತಾರೆ. ನಲವತ್ತು ಪರ್ಸೆಂಟ್ ಸರ್ಕಾರ ಎಂದೇ ಕುಖ್ಯಾತಿ ಗಳಿಸಿದ್ದು ಸತ್ಯ. ಬೆಲೆ ಏರಿಕೆ, ಭ್ರಷ್ಟಾಚಾರ ನೋಡಿಯೆ ಜನ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಲೋಕಸಭಾ ಚುನಾವಣೆಗೂ ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದರು.

ಇದೇ ವೇಳೆ ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್, ದೇಶಪಾಂಡೆಗೆ ಸಚಿವ ಸ್ಥಾನಮಾನ ನೀಡಿರುವ ಬಗ್ಗೆ ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com