ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಸರ್ಕಾರ ಈಗ ಗ್ರಾಹಕರಿಗೆ ಬೆಲೆಯೇರಿಕೆ ವಿಷವುಣಿಸುತ್ತಿದೆ: ಬಿಜೆಪಿ

ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಹಾಲಿನ ಬೆಲೆ ಏರಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ. ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡದೆ ಭಂಡತನ ತೋರಿದ ಕಾಂಗ್ರೆಸ್‌ ಸರ್ಕಾರ, ಇದೀಗ ಏಕಾಏಕಿ ಹಾಲಿನ ದರವನ್ನು ಪ್ರತಿ ಲೀ.ಗೆ ರೂ.2.10 ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಕಿಡಿಕಾರಿದೆ.

ಸಿದ್ದರಾಮಯ್ಯ ಅವರೇ, ಹಾಲು ಉತ್ಪಾದಕರಿಗೆ ರೂ.1087 ಕೋಟಿ ಸಬ್ಸಿಡಿ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ನೀವು, ಈಗ ಗ್ರಾಹಕರಿಗೆ ಬೆಲೆಯೇರಿಕೆ ಶಿಕ್ಷೆ ನೀಡಿರುವುದು ಯಾವ ಪುರುಷಾರ್ಥಕ್ಕೆ? ನಿಮ್ಮದು ಕೇವಲ ರೈತ ವಿರೋಧಿ ಸರ್ಕಾರ ಮಾತ್ರವಲ್ಲ, ನಿಮ್ಮದು ಜನ ವಿರೋಧಿ ಸರ್ಕಾರವೂ ಹೌದು.ಬೆಲೆಯೇರಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನೀವು ಆಳಲು ಯೋಗ್ಯರಲ್ಲ ಎಂಬುದಂತೂ ಸಾಬೀತಾಗಿದೆ, ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ಕುರ್ಚಿ ಬಿಟ್ಟು ತೊಲಗಿ ಎಂದು ಆಗ್ರಹಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ. ಇತ್ತ ಬಡವರಿಗೂ ಉಪಕಾರಿಯಾಗಲ್ಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ, ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂ 10 ಪೈಸೆ ಹೆಚ್ಚಳ ಮಾಡಲಾಗಿದೆ.

ಸಂಗ್ರಹ ಚಿತ್ರ
ರಾಜ್ಯದ ಜನತೆಗೆ ಗಾಯದ ಮೇಲೆ ಬರೆ: ನಂದಿನಿ ಹಾಲಿನ ದರ 2 ರೂ. ಏರಿಕೆ; ನಾಳೆಯಿಂದಲೇ ಜಾರಿ

ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ರಾಜ್ಯ ಸಂಕಷ್ಟಗಳ ಸರಮಾಲೆಯಲ್ಲಿ ನಲುಗುತ್ತಿದೆ, ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿಕೊಂಡು ಮೇಲಿಂದ ಮೇಲೆ ಸರಣೀ ರೂಪದಲ್ಲಿ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯಲಾಗುತ್ತಿದೆ. ಸಂಪನ್ಮೂಲವನ್ನು ವೃದ್ಧಿಸಿಕೊಳ್ಳಲಾಗದೆ, ಒಂದೇ ಒಂದು ಅಭಿವೃದ್ಧಿಯ ಹೆಜ್ಜೆ ಇಡಲಾಗದೇ ಅತ್ಯಂತ ಭ್ರಷ್ಟ, ವೈಫಲ್ಯ ರಾಜ್ಯ ಸರ್ಕಾರ' ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್ ಸರ್ಕಾರ ಹಚ್ಚಿಕೊಂಡಿದೆ.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಜನ ಕಲ್ಯಾಣ, ಸಂಕಷ್ಟಿತ ರೈತರಿಗೆ ಸ್ಪಂದನೆ ಹಾಗೂ ಬೆಲೆಗಳ ಮೇಲೆ ನಿಯಂತ್ರಣ ಸಾಧಿಸಿ ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳುವತ್ತ ಚಿತ್ತ ಹರಿಸದ ಕಾಂಗ್ರೆಸ್ಸಿಗರು ‘ಉಪಮುಖ್ಯಮಂತ್ರಿ’ ಸ್ಥಾನಕ್ಕಾಗಿ ಯಾದವೀ ಕಲಹದಲ್ಲಿ ಮುಳುಗಿರುವುದನ್ನು ನೋಡಿದರೆ "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು" ಎಂಬ ಗಾದೆ ಮಾತು ನೆನಪಿಸುವಂತಿದೆ.

ಇವರು ಜುಟ್ಟಿಗೆ ಯಾವ ಹೂವನ್ನಾದರೂ ಮುಡಿದುಕೊಳ್ಳಲಿ, ಆದರೆ ಮತ ನೀಡಿ ಅಧಿಕಾರಕ್ಕೆ ತಂದ ಜನರ ಕಿವಿಗೆ ಹೂ ಮುಡಿಸುವ ಕೆಲಸ ನಿಲ್ಲಿಸಲಿ. ರಾಜ್ಯದ ಜನರ ಹಿತಾಸಕ್ತಿ ಮರೆತು ಸಂವಿಧಾನಿಕ ಉಲ್ಲೇಖವಿಲ್ಲದ ಸೃಷ್ಟಿತ "ಉಪಮುಖ್ಯಮಂತ್ರಿ" ಹುದ್ದೆಯ ಹೆಚ್ಚುವರಿ ಸೃಷ್ಟಿಗಾಗಿ ಬಡಿದಾಡಿಕೊಳ್ಳುವುದರಲ್ಲೇ ನೀವು ಕಾಲ ಕಳೆಯುವುದಾದರೆ, ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಇಷ್ಟಾಗಿಯೂ ಬುದ್ಧಿ ಕಲಿಯದ ನೀವು ಅವಧಿಗೂ ಮುನ್ನವೇ ಮನೆಯ ದಾರಿ ಹಿಡಿಯಬೇಕಾದ ಪರಿಸ್ಥಿತಿ ಉದ್ಭವಿಸೀತು? ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com