ಬೆಂಗಳೂರು: 7 ರಿಂದ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸವಾಲಾಗಿ ಪರಿಣಮಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.
ಟಿಕೆಟ್ ಅಂತಿಮಗೊಳಿಸುವ ಸಂಬಂಧ ನವದೆಹಲಿಯಲ್ಲಿ ನಡದ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.80 ರಷ್ಟು ಸ್ಥಾನಗಳನ್ನು ಅಂತಿಮಗೊಳಿಸುವ ಚರ್ಚೆ ಬಹುತೇಕ ಪೂರ್ಣಗೊಂಡಿದ್ದು, ಹೈಕಮಾಂಡ್ ಅನುಮೋದನೆಗೆ ಕಾಯಲಾಗುತ್ತಿದೆ. ಆದರೆ ಏಳರಿಂದ ಎಂಟು ಕ್ಷೇತ್ರಗಳಲ್ಲಿ ಪಕ್ಷ ಇನ್ನೂ ಒಂದು ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.
ಈ ಸ್ಥಾನಗಳಲ್ಲಿ ಹೆಚ್ಚಿನವು ಬಿಜೆಪಿ ಭದ್ರಕೋಟೆಗಳಾಗಿವೆ, ಅಲ್ಲಿ ನಾಯಕರು ಟಿಕೆಟ್ ಪಡೆಯಲು ತೀವ್ರ ಲಾಬಿ ನಡೆಸುತ್ತಿದ್ದಾರೆ. ಯಾವುದೇ ನಿರ್ಧಾರವು ಕೆಲವು ನಾಯಕರನ್ನು ಅಸಮಾಧಾನಗೊಳಿಸಲಿದೆ. ಈ ಕ್ಷೇತ್ರಗಳಲ್ಲಿನ ಕಾರ್ಯಕರ್ತರ ಆಯ್ಕೆ ಮುಖ್ಯವಾಗುತ್ತದೆ. ಈ ಸಂಬಂಧ ಇರುವ ಭಿನ್ನಾಭಿಪ್ರಾಯಗಳನ್ನ ಪಕ್ಷವು ಶೀಘ್ರದಲ್ಲೇ ಪರಿಹರಿಸಲಿದೆ. ಮುಂದಿನ ದಿನಗಳಲ್ಲಿ ಅಸಮಾಧಾನಿತ ನಾಯಕರನ್ನು ಹೇಗೆ ಮನವೊಲಿಸಬೇಕು ಎಂಬುದೂ ಪಕ್ಷಕ್ಕೆ ಗೊತ್ತಿದೆ. ಪಕ್ಷವು ನಡೆಸಿದ ಬಹು ಸಮೀಕ್ಷೆಗಳ ಆಧಾರದ ಮೇಲೆ ಕೇಂದ್ರ ನಾಯಕತ್ವವು ಹೆಸರನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, ಅಭ್ಯರ್ಥಿಗಳ ಬಗ್ಗೆ ಪ್ರಧಾನಿ ಮೋದಿ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳಿದರು.
ರಾಜ್ಯದ 28 ಸ್ಥಾನಗಳಲ್ಲಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. ರಾಜ್ಯದಿಂದ ಮೋದಿಗೆ ದೊಡ್ಡ ಗೆಲುವು ನೀಡಲು ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
Advertisement