ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇದೇ ಐಪಿಎಲ್ ಮುಂದಿಟ್ಟುಕೊಂಡು ಬಿಜೆಪಿ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಟ್ವೀಟ್ ಪ್ರಹಾರ ನಡೆಸಿದೆ.
ಹೌದು.. ಈ ಹಿಂದೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಐಪಿಎಲ್ ಪಂದ್ಯಾವಳಿಯ ಹಿನ್ನಲೆಯಾಗಿಟ್ಟುಕೊಂಡು ಮತ್ತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ವಾರ್ ಮುಂದುವರೆಸಿದೆ.
ಈ ನೂತನ ಟ್ವೀಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ಹೋಲುವ ಹಳದಿ ಬಣ್ಣದ ಜೆರ್ಸಿ ತೊಡಿಸಲಾಗಿದ್ದು, ಈ ವೇಳೆ ಕೆಂಪು ಬಣ್ಣದ ಶರ್ಟ್ ತೊಟ್ಟಿರುವ ಆರ್ ಸಿಬಿ ಫ್ಯಾನ್ ಯಾಕ್ರಣ್ಣಾ ಈ ಜೆರ್ಸಿ ಎಂದು ಕೇಳಿದ್ದು, ಇದಕ್ಕೆ 'ನಮ್ ಸ್ಟಾಲಿನ್ ನ ಇನ್ನೂ ಖುಷಿ ಪಡ್ಸೋಕೆ' ಎಂದು ಉಭಯ ನಾಯಕರು ಹೇಳುತ್ತಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಅಲ್ಲದೆ ಸಿಎಸ್ ಕೆ (ಚೆನ್ನೈ ಸೂಪರ್ ಕಿಂಗ್ಸ್ ) ಅನ್ನು Cauvery Suppliers Kai ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಈ ಹಿಂದೆ ಇದೇ ಬಿಜೆಪಿ, ರಾಜ್ಯದಲ್ಲಿ ಭೀಕರ ಬರಗಾಲದ ಹೊರತಾಗಿಯೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು. ಮತ್ತೊಂದು ಟ್ವೀಟ್ ನಲ್ಲಿ ಕಾವೇರಿ ವಿಚಾರದಲ್ಲಿ ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ಕನ್ನಡಿಗರಿಗೆ ಸದಾ ದ್ರೋಹ ಬಗೆಯುತ್ತಿರುವ “ಡಿ-ಎಂ-ಕೈ” ಗೆ ತಕ್ಕ ಪಾಠ ಕಲಿಸಬೇಕು ಎಂದು ಟ್ವೀಟ್ ಮಾಡಿತ್ತು.
Advertisement