ಇನ್ನೂ ಟೇಕಾಫ್ ಆಗದ ಬಿಜೆಪಿ-ಜೆಡಿಎಸ್ ಮೈತ್ರಿ: ತಳಮಟ್ಟದ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಕೊರತೆ

ಕರ್ನಾಟಕದ ಬಹುತೇಕ ಲೋಕಸಭಾ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಮೂಲಕ ಮೆಗಾ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ.
ಹೆಚ್ ಡಿ ದೇವೇಗೌಡ-ಬಿ ಎಸ್ ಯಡಿಯೂರಪ್ಪ
ಹೆಚ್ ಡಿ ದೇವೇಗೌಡ-ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕದ ಬಹುತೇಕ ಲೋಕಸಭಾ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಮೂಲಕ ಮೆಗಾ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಆದರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಹು ಚರ್ಚಿತವಾಗಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ಗಟ್ಟಿಯಾಗಿ ಒಮ್ಮತಕ್ಕೆ ಬಂದಂತೆ ಕಂಡುಬರುತ್ತಿಲ್ಲ.

ಜೆಡಿಎಸ್ ನ ತಳಮಟ್ಟದ ನಾಯಕರನ್ನು ಇನ್ನೂ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಎಲ್ಲಾ ಹಂತಗಳಲ್ಲಿ ಎರಡು ಪಕ್ಷಗಳ ನಡುವೆ ಸರಿಯಾದ ಒಮ್ಮತ, ಮೈತ್ರಿ ತರುವುದು, ಜೆಡಿಎಸ್ ಎಸ್ ನಲ್ಲಿ ಗೊಂದಲ, ಆತಂಕ ನಿವಾರಿಸುವುದು ತಳ ಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ ಕೆಲಸ ಮಾಡುವುದು ಮೈತ್ರಿ ಪಕ್ಷಗಳಿಗೆ ಸವಾಲಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಈ ವಾರದ ಆರಂಭದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಹಲವು ಜೆಡಿಎಸ್ ಮುಖಂಡರು ಬಿಜೆಪಿ ಪ್ರಚಾರ ಅಥವಾ ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ತಮ್ಮನ್ನು ತೊಡಗಿಸದಿರುವುದು ಮತ್ತು ಕಲಬುರಗಿಯಲ್ಲಿ ಪ್ರಧಾನಿಯವರ ಸಮಾವೇಶಕ್ಕೆ ಆಹ್ವಾನಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ 18 ಲೋಕಸಭಾ ಸ್ಥಾನಗಳಲ್ಲಿ ಮೂರರಿಂದ ನಾಲ್ಕು ಶೇಕಡಾ ಮತಗಳನ್ನು ವರ್ಗಾವಣೆ ಮಾಡುವ ಮೂಲಕ ಬಿಜೆಪಿಗೆ ಸಹಾಯ ಮಾಡಬಹುದು ಎಂದು ಪ್ರಾದೇಶಿಕ ಪಕ್ಷದ ನಾಯಕರು ಭಾವಿಸಿದ್ದಾರೆ. ಆದರೆ, ಬಿಜೆಪಿ ತನ್ನ ಸೇವೆಯನ್ನು ಬಳಸಿಕೊಳ್ಳುವಲ್ಲಿ ವಿಫಲವಾದರೆ ಅದುವೇ ಹೊಣೆಯಾಗಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಹೆಚ್ ಡಿ ದೇವೇಗೌಡ-ಬಿ ಎಸ್ ಯಡಿಯೂರಪ್ಪ
ಜೆಡಿಎಸ್ ಜೊತೆಗಿನ ಸೀಟು ಹಂಚಿಕೆ: ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗುವುದು- ಬಿವೈ ವಿಜಯೇಂದ್ರ

ಮೊನ್ನೆ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ಮುಖಂಡರ ಅಸಮಾಧಾನವನ್ನು ಬಿಜೆಪಿ ನಾಯಕರಿಗೆ ತಿಳಿಸಿದ್ದೇನೆ ಎಂದಿದ್ದಾರೆ. ಬಿಜೆಪಿಯೊಂದಿಗೆ ಸಮನ್ವಯ ಸಾಧಿಸಿ ಸಹಕರಿಸುವಂತೆ ಜೆಡಿಎಸ್‌ ಮುಖಂಡರಿಗೆ ಮನವಿ ಮಾಡಿದ್ದೇನೆ ಎಂದು ಕೂಡ ಹೇಳಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ಹಾಗೂ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪೂರ್ವಭಾವಿಯಾಗಿ ಪ್ರಚಾರ ನಡೆಸುತ್ತಿದೆ ಎಂದರು.

ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಆರಂಭದ ದಿನಗಳಲ್ಲಿ ಕಂಡ ಉತ್ಸಾಹ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಬೇರೆಲ್ಲೂ ಕಾಣುತ್ತಿಲ್ಲ. ಒಪ್ಪಂದದ ವಿಸ್ತೃತ ರೂಪುರೇಷೆಗಳನ್ನು ಒಪ್ಪಿದಂತೆ, ಅಗತ್ಯವಿರುವ ಕಡೆ ಹೊಂದಿಕೊಳ್ಳುವುದನ್ನು ಬಿಜೆಪಿ ತೋರಿಸಬೇಕಾಗಿದೆ. ವಿಪರ್ಯಾಸವೆಂದರೆ, ಸ್ಥಳೀಯ ಮಟ್ಟದಲ್ಲಿ ಜಂಟಿ ಕಾರ್ಯತಂತ್ರಗಳನ್ನು ಚರ್ಚಿಸಲು ಅವರು ಇನ್ನೂ ಜಂಟಿ ಸಮಾವೇಶಗಳು ಅಥವಾ ಸಭೆಗಳನ್ನು ನಡೆಸಿಲ್ಲ. ಮೈತ್ರಿಯ ತನ್ನ ಉದ್ದೇಶಿತ ಪೂರೈಸಬೇಕಾದರೆ, ಎರಡೂ ಪಕ್ಷಗಳ ಉನ್ನತ ನಾಯಕರ ನಡುವಿನ ಬಾಂಧವ್ಯವು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನ ಘಟಕವಾಗಿ ಕಾರ್ಯನಿರ್ವಹಿಸಲು ಅವರು ಎಲ್ಲಾ ಕ್ಷೇತ್ರಗಳಲ್ಲಿ ಜಂಟಿ ಸಮಾವೇಶಗಳನ್ನು ನಡೆಸಬೇಕಾಗಿದೆ.

ಎರಡೂ ಪಕ್ಷಗಳು ತಳಮಟ್ಟದಲ್ಲಿ ಕೆಲಸ ಮಾಡಲು ವಿಫಲವಾದರೆ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದಾಗ ಇಬ್ಬರ ನಡುವೆ ಹೊಂದಾಣಿಕೆ ಕಂಡುಬಂದಿರಲಿಲ್ಲ. ಅಷ್ಟೇ ಅಲ್ಲ, ಹಲವು ಕಡೆ ಮೈತ್ರಿಯಲ್ಲಿನ ಆಂತರಿಕ ವೈರುಧ್ಯಗಳು ಬಿಜೆಪಿಗೆ ನೆರವಾದವು. ಆದರೆ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಹಲವು ವ್ಯತ್ಯಾಸಗಳಿವೆ.

ಕೇಂದ್ರ ಸರ್ಕಾರದ ಕಾರ್ಯಕ್ಷಮತೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಖಾತರಿ ಯೋಜನೆಗಳ ಸುತ್ತ ಕೇಂದ್ರೀಕೃತವಾಗಿರುವ ಲೋಕಸಭೆ ಚುನಾವಣೆಯಲ್ಲಿ, ಮೈತ್ರಿ ಪಾಲುದಾರರ ಯಶಸ್ಸು ಪರಸ್ಪರ ಪೂರಕವಾಗಿ ಅವರ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, ಗೌಡರ ತವರು ಜಿಲ್ಲೆ ಹಾಸನದಲ್ಲಿ ಬಿಜೆಪಿಯ ಬೆಂಬಲವು ಜೆಡಿಎಸ್‌ಗೆ ನಿರ್ಣಾಯಕವಾಗಲಿದೆ. ಪ್ರಾದೇಶಿಕ ಪಕ್ಷದ ಬೆಂಬಲವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಸಹಾಯ ಮಾಡುತ್ತದೆ. ಹಲವು ಸ್ಥಾನಗಳ ಹೊರತಾಗಿ ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿಗೆ ಜೆಡಿಎಸ್‌ನ ಅಗತ್ಯವಿದೆ. ಕಲ್ಯಾಣ ಕರ್ನಾಟಕದ ಬೀದರ್‌ನಂತಹ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜೆಡಿಎಸ್ ಪ್ರಮುಖ ಪಾತ್ರ ವಹಿಸುತ್ತದೆ.

ಹೆಚ್ ಡಿ ದೇವೇಗೌಡ-ಬಿ ಎಸ್ ಯಡಿಯೂರಪ್ಪ
ಕೇವಲ ಎರಡು ಸೀಟು ಪಡೆಯಲು ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ? ಬಿಜೆಪಿ ನಡೆಗೆ ಕುಮಾರಸ್ವಾಮಿ ಬೇಸರ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಟಿಕೆಟ್ ಘೋಷಣೆಯ ನಂತರ ಮೈತ್ರಿಯಲ್ಲಿನ ದೋಷಗಳ ಜೊತೆಗೆ ಬಿಜೆಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಳಸಿಕೊಳ್ಳುವ ಪ್ರಬಲ ಶಕ್ತಿಯಾಗಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಮತ್ತು ಕುರುಬ ಸಮುದಾಯದ ಮತಗಳನ್ನು ಕ್ರೋಢೀಕರಿಸುವ ಭರವಸೆಯಲ್ಲಿದೆ. ಅದರೊಟ್ಟಿಗೆ ಒಕ್ಕಲಿಗ ಸಮುದಾಯದ ಬೆಂಬಲವನ್ನು ಪಡೆಯಲು ಯಶಸ್ವಿಯಾದರೆ ಹಳೇ ಮೈಸೂರು ಭಾಗದಲ್ಲಿ ಶಕ್ತಿಯಾಗಬಹುದು. ಅಲ್ಲಿ ಮೈತ್ರಿಕೂಟದ ಸಣ್ಣ ಪಾಲುದಾರ ಜೆಡಿ ಎಸ್ ದೊಡ್ಡ ಪಾತ್ರವನ್ನು ವಹಿಸಬಹುದು. ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ನೇರ ಹಣಾಹಣಿ ನಡೆಯಲಿದ್ದು, ಹಲವು ಸ್ಥಾನಗಳಲ್ಲಿ ಬಿಜೆಪಿಗೆ ಜೆಡಿಎಸ್ ನಿಂದ ಅಲ್ಪ ಲಾಭವಿದೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತನ್ನ ಸಚಿವರನ್ನು ಮನವೊಲಿಸುವಲ್ಲಿ ವಿಫಲವಾದ ಕಾಂಗ್ರೆಸ್, ಹಲವಾರು ಸಚಿವರ ಸಂಬಂಧಿಕರು ಮತ್ತು ಪ್ರಮುಖ ನಾಯಕರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಲ್ಲಿ ಅದು ಹೊಸದೇನಲ್ಲ, ಮಂತ್ರಿಗಳು ತಮ್ಮ ಮಕ್ಕಳು ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡುವುದರಲ್ಲಿ ಸಂದೇಹವಿಲ್ಲ. ಯುವಕರು, ಅವರು ರಾಜಕೀಯ ಕುಟುಂಬದವರಾಗಿದ್ದರೂ, ರಾಜಕೀಯಕ್ಕೆ ಹೊಸ ದೃಷ್ಟಿಕೋನವನ್ನು ತರಬಹುದು, ಆದರೆ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಅಂತಹ ತಂತ್ರವನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಸಮಯವೇ ನಿರ್ಧರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com