ಬೆಂಗಳೂರು: ಪ್ರಧಾನಿ ಮೋದಿಯವರ ಹೆಸರೇಳುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಗೆ ಕಿಡಿಕಾರಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಚಿವರ ಹೇಳಿಕೆಯನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸುತ್ತೇವೆಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಸಚಿವರಾಗಿರುವ ತಂಗಡಗಿ ಈ ಹಿಂದೆ ಬಿಜೆಪಿಯಲ್ಲಿದ್ದು, ಸಕ್ಕರೆ ಸಚಿವರಾಗಿದ್ದರು. ಆಗ ಅವರು ಸೋನಿಯಾಗಾಂಧಿಗೆ ಹೊಡೆಯಿರಿ ಎಂದು ಹೇಳಿದ್ದರು. ಈಗ ಕಾಂಗ್ರೆಸ್ನಲ್ಲಿದ್ದು ಮೋದಿ ಹೆಸರೇಳುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಜನ ಮುಂದೆ ತಂಗಡಗಿಗೆ ಹೊಡೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಸಂಸ್ಕೃತಿ ಇಲ್ಲದೇ ಇರುವವರು ಸಂಸ್ಕೃತಿ ಸಚಿವರಾಗಿದ್ದಾರೆ, ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ತಂಗಡಗಿ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಪಂಚರಾಜ್ಯಗಳ ಚುನಾವಣೆಯ ಸೆಮಿಫೈನಲ್ ಸೋತ ಮೇಲೆ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಹಿಂದೆ ಪ್ರಧಾನಿ ಮೋದಿಯವರನ್ನು ಚಾಯ್ವಾಲಾ ಎಂದಿದ್ದರು. ಆಮೇಲೆ ಚೌಕಿದಾರ್ ಚೋರ್ ಎಂದರು. ಈ ಮಾತುಗಳನ್ನೇ ನಾವು ಅಸ್ತ್ರ ಮಾಡಿಕೊಂಡು ಚಾಯ್ ಪೇ ಚರ್ಚೆ ಆಯೋಜನೆ ಮಾಡಿದೆವು. ನಾವೆಲ್ಲಾ ಚೌಕಿದಾರ್ ಎಂದೆವು. ಲಾಲುಪ್ರಸಾದ್ ಯಾದವ್ ಪರಿವಾರ್ ಎಂದಿದ್ದನ್ನು ನಾವೆಲ್ಲಾ ಮೋದಿ ಪರಿವಾರ್ ಎಂದು ಘೋಷಣೆ ಮಾಡಿದೆವು. ಇಷ್ಟಾದರೂ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಹರಿಹಾಯ್ದರು.
ಸಚಿವ ತಂಗಡಗಿಯವರು ಹಳ್ಳಿ ಭಾಷೆಯಲ್ಲಿ ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂಗಡಗಿ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ನಮಗೆ ಗೊತ್ತಿರುವುದು ಒಂದೇ ಅದು ಕನ್ನಡ. ಸಿದ್ದರಾಮಯ್ಯನವರು ರಾಷ್ಟ್ರಪತಿಗಳ ಬಗ್ಗೆಯೇ ಏಕವಚನ ಪದ ಬಳಸಿದ್ದರು. ಈ ಸರ್ಕಾರ ಬೈಗುಳ ಸರ್ಕಾರವಾಗಿದೆ ಎಂದು ಟೀಕಿಸಿದರು.
ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನೀರಾವರಿ ಸಚಿವರು ಬೆಂಗಳೂರನ್ನು ಕುಡಿಯುವ ನೀರಿಲ್ಲದ ಸ್ಥಿತಿಗೆ ತಂದಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಆಯ್ತು, ಬಾಂಬ್ ಬೆಂಗಳೂರು ಆಯ್ತು, ಈಗ ಬಾಯಿ ಬಾಯಿ ಬೆಂಗಳೂರು ಆಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನ ಬಹುತೇಕ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ. ನ್ಯಾಯಾಲಯ ಮನಸ್ಸು ಮಾಡಿ ತೀರ್ಪು ಕೊಟ್ಟರೆ ಇವರೆಲ್ಲಾ ಜೈಲಿಗೆ ಹೋಗಬೇಕಾಗುತ್ತದೆ. ಜೈಲು ಭರ್ತಿಯಾಗುತ್ತದೆ ಎಂದರು.
Advertisement