ತಮ್ಮದೇ ಸರ್ಕಾರದ ವಿರುದ್ಧ ಶಾಸಕ ಗವಿಯಪ್ಪ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತಕ್ಕೆ ಉದಾಹರಣೆ: JDS

ರಾಜ್ಯದ ಆಡಳಿತಾಡ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆಯೇ...? ದುಡ್ಡಿಲ್ಲದ ಖಾಲಿ ‘ಕೈ’ ಆಡಳಿತ ಎಂದು ವ್ಯಂಗ್ಯವಾಡಿದೆ.
ಜೆಡಿಎಸ್
ಜೆಡಿಎಸ್
Updated on

ಬೆಂಗಳೂರು: ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ ಅವರು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಜೆಡಿಎಸ್ ಕಿಡಿಕಾರಿದೆ.

ಗವಿಯಪ್ಪ ಅವರು ನೀಡಿರುವ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ರಾಜ್ಯದ ಆಡಳಿತಾಡ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆಯೇ...? ದುಡ್ಡಿಲ್ಲದ ಖಾಲಿ ‘ಕೈ’ ಆಡಳಿತ ಎಂದು ವ್ಯಂಗ್ಯವಾಡಿದೆ.

ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ. ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಬರೀ‌ 10 ಕೋಟಿ ಅನುದಾನ‌ ಕೊಡಲಾಗಿದೆ ಎಂದು ಶಾಸಕ ಗವಿಯಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ.. ಆದರೆ ಈ ಬಾರಿ ಅನುದಾನ ಸಿಗದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳು, ರಸ್ತೆಗಳ ಸಮಸ್ಯೆಗಳು ಸಾಕಷ್ಟಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲು ಹೆಣಗಾಡುತ್ತಿರುವ ಸಿಎಂ, ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ.‌ ಸ್ವತಃ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕಣ್ಣೀರಿಡುತ್ತಿದ್ದರೂ ಮುಖ್ಯಮಂತ್ರಿಗಳು ಕಿವಿಗೊಡುತ್ತಿಲ್ಲ..ಯಾಕಂದರೆ ಸರ್ಕಾರದ ಬೊಕ್ಕಸ ಖಾಲಿ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆ ಎಂದು ತಿಳಿಸಿದೆ.

ಜೆಡಿಎಸ್
ಸಮಾಜವಾದಿ ಎಂದು ಹೇಳಿಕೊಂಡು ಮಜಾವಾದಿ ಆಗಿರುವ ಸಿದ್ದರಾಮಯ್ಯ: ವಿಡಿಯೊ ತೋರಿಸಿ ಜೆಡಿಎಸ್ ಟೀಕೆ

ಮತ್ತೊಂದು ಪೋಸ್ಟ್ ನಲ್ಲಿ ಅಭಿವೃದ್ಧಿಗೆ ಕಾಂಗ್ರೆಸ್ ಅವೈಜ್ಞಾನಿಕ ಗ್ಯಾರಂಟಿ ಅಡ್ಡಿಯಾಗಿದ್ದು, ಸಿದ್ದರಾಮಯ್ಯನವರ ಸುಳ್ಳುಗಳನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಬಯಲಿಗೆಳೆಯುತ್ತಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಆರ್.ಗವಿಯಪ್ಪ ನನ್ನ ಬಳಿ ಹಣವಿಲ್ಲ; ನನ್ನ ಕ್ಷೇತ್ರದ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಾನೇನು ಮಾಡಲಿ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಅಸಹಾಯಕತೆ ಹೊರಹಾಕಿದ್ದಾರೆ. ರಾಜ್ಯದ ಹಣ ಯಾರ ಯಾರ ಜೇಬು ಸೇರುತ್ತಿದೆ ಎಂದು ಪ್ರಶ್ನಿಸಿದೆ.

ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ನಿಜವಾದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತೆ ಮಾಡಿದೆ ಭ್ರಷ್ಟ ಕಾಂಗ್ರೆಸ್, ವೇದಿಕೆಯಲ್ಲಿ ದೊಡ್ಡ ದೊಡ್ಡ ಹುಸಿ ಭಾಷಣಗಳನ್ನು ಮಾಡುವ ಸಿದ್ದರಾಮಯ್ಯ ಸರ್ಕಾರ, ನ್ಯಾಯಯುತವಾಗಿ ಕ್ಷೇತ್ರಗಳಿಗೆ ನಿಧಿ ಹಂಚಿಕೆ ಮಾಡಲು ಕೈಲಾಗದ ದುಸ್ಥಿತಿ ತಲುಪಿದೆ. ಈ ಸತ್ಯವನ್ನು ಕಾಂಗ್ರೆಸ್ ಶಾಸಕ ಗವಿಯಪ್ಪ ಬಿಚ್ಚಿಟ್ಟಿದ್ದಾರೆ. ಕೊಟ್ಟಿರುವ 12 ಕೋಟಿ ರೂ. ಆಸ್ಪತ್ರೆಗೆ ಸಾಲುತ್ತಿಲ್ಲ.. ಇನ್ನಿತರ ಯೋಜನೆಗಳಿಗೆ ನಾವೇನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಆದರೆ ಹಗರಣಗಳಲ್ಲಿ ಸಿಲುಕಿರುವ ಭ್ರಷ್ಟ ಸಿಎಂ ಸಿದ್ದರಾಮಯ್ಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ನಾಡಿನ ದುರಂತ ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com