
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾಟದಿಂದ ಅಮಾಯಕ ಜನರು ಬಲಿಯಾಗುತ್ತಿರುವುದಕ್ಕೆ ಈ ಮೂವರು ನಾಯಕರು ಹಾಗೂ ಗೃಹ ಲಕ್ಷ್ಮಿ ಹಣ ಬರದಿರುವುದೇ ಕಾರಣ ಎಂದು ಜೆಡಿಎಸ್ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾಟದಿಂದ ಅಮಾಯಕ ಜನರು ಬಲಿಯಾಗುತ್ತಿರುವುದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಹೊಣೆ ಎಂದು ಹೇಳಿದೆ.
ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ರಾಜ್ಯದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. "ಗೃಹಲಕ್ಷ್ಮಿ" ಹಣ ಹಾಕುವುದಾಗಿ ಆಸೆ ತೋರಿಸಿ, ಈಗ ಸಮಯಕ್ಕೆ ಸರಿಯಾಗಿ ಕೊಡದೆ ಸತಾಯಿಸುತ್ತಿದೆ. ಕಳೆದ 6 ತಿಂಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ಅಕೌಂಟ್ಗೆ ಬಂದಿಲ್ಲ. ಪ್ರತಿ ತಿಂಗಳು ನೆಟ್ಟಗೆ ಹಣವನ್ನು ಹಾಕಲು ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಗೃಹಲಕ್ಷ್ಮಿ ಹಣವನ್ನೇ ನಂಬಿಕೊಂಡು, ಪ್ರತಿ ತಿಂಗಳು ಸಾಲದ ಕಂತು ಕಟ್ಟಬಹುದು ಎಂದು ನಂಬಿದ್ದ ಜನರೇ ಈಗ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾಟಕ್ಕೆ ಬಲಿಯಾಗುತ್ತಿದ್ದಾರೆ.
ಗೃಹಲಕ್ಷ್ಮಿ ಗ್ಯಾರಂಟಿ ನೆಚ್ಚಿಕೊಂಡು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲದ ಆಸೆಗೆ ಬೀಳುವ ಬಹುತೇಕ ಜನರು ಈಗ ಕಂತು, ಬಡ್ದಿ ಕಟ್ಟಲಾಗದೇ ಕಿರುಕುಳ ಹಾಗೂ ಬೆದರಿಕೆಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಕಿಡಿಕಾರಿದೆ.
Advertisement