2027ರ ವೇಳೆಗೆ ಬೆಂಗಳೂರು ಉತ್ತರಕ್ಕೆ ಎತ್ತಿನಹೊಳೆ ನೀರು, ಮೆಟ್ರೋ ಯೋಜನೆಗೆ ಸರ್ಕಾರ ಬದ್ಧ: ಡಿ.ಕೆ ಶಿವಕುಮಾರ್

140 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಲಿಷ್ಠವಾಗಿದೆ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ ಎಂಬುದನ್ನು ನಮ್ಮ ಹಿರಿಯರು ಹೇಳಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಇವತ್ತು 6000 ಜನರಿಗೆ ಸ್ವತ್ತಿನ ದಾಖಲೆಯನ್ನು ನೀಡಿದ್ದೇವೆ.
DK Shivkumar
ಡಿಕೆ.ಶಿವಕುಮಾರ್.
Updated on

ಬೆಂಗಳೂರು: 2027 ರ ವೇಳೆಗೆ ಬೆಂಗಳೂರು ಉತ್ತರ ಭಾಗಕ್ಕೆ ಎತ್ತಿನಹೊಳೆ ನೀರು ಹಾಗೂ ಮೆಟ್ರೋ ಯೋಜನೆ ತರಲು ಸರ್ಕಾರ ಬದ್ಧ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದರು.

ಹೊಸಕೋಟೆಯಲ್ಲಿ ಭಾನುವಾರ ನಡೆದ ಇ - ಸ್ವತ್ತು ಹಂಚಿಕೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.

ಈ ಪ್ರದೇಶಕ್ಕೆ ನೀರು ಪೂರೈಸಲು ಬಿಜೆಪಿ ತಲೆಕೆಡಿಸಿಕೊಳ್ಳಲಿಲ್ಲ. ನೀರು ಬರುವಂತೆ ಮಾಡುತ್ತಿರುವುದು ಕಾಂಗ್ರೆಸ್. ಹೊಸಕೋಟೆಗೆ ಮೆಟ್ರೋ ತರಲು ನಾವು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲು ನಿರ್ಧರಿಸಿದ್ದೇವೆ. ನಮ್ಮ ಅವಧಿಯಲ್ಲಿಯೇ ಅದು ಪೂರ್ಣಗೊಳ್ಳುವಂತೆ ಖಚಿತಪಡಿಸಿಕೊಳ್ಳುತ್ತೇವೆಂದು ಹೇಳಿದರು.

140 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಲಿಷ್ಠವಾಗಿದೆ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ ಎಂಬುದನ್ನು ನಮ್ಮ ಹಿರಿಯರು ಹೇಳಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಇವತ್ತು 6000 ಜನರಿಗೆ ಸ್ವತ್ತಿನ ದಾಖಲೆಯನ್ನು ನೀಡಿದ್ದೇವೆ. ಈ ಹಿಂದೆ ಭೂ ಮಾಲೀಕತ್ವ ಇಲ್ಲದ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ನೀಡಿರುವ ಎಲ್ಲಾ ಬಿ - ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡುವ ತೀರ್ಮಾನವನ್ನು ಮಾಡಿದ್ದೇವೆ. ಹಾಲು ಉತ್ಪಾದನೆಯಲ್ಲಿ ಹೊಸಕೋಟೆ ಮುಂದಿದ್ದು, ನಮ್ಮ 'ಕ್ಷೀರ ಧಾರೆ' ಕಾರ್ಯಕ್ರಮವು ಹೈನುಗಾರರಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿದೆ. ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಸಲು 19 ಸಾವಿರ ಕೋಟಿ ರೂ. ಹಣವನ್ನು ನೀಡುತ್ತಿದ್ದೇವೆ.

DK Shivkumar
ಎತ್ತಿನಹೊಳೆ ಯೋಜನೆ: ಅರಣ್ಯ ಭೂಮಿ ಬಳಕೆಗೆ ಶೀಘ್ರ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಮನವಿ!

7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಚಿವರಾದ ಮುನಿಯಪ್ಪ ಅವರೊಂದಿಗೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದೇವೆ. ವಿಶ್ವದಲ್ಲೇ ಅತಿ ಎತ್ತರದ ಅಕ್ವೆಡಕ್ಟ್‌ ಎಂಬ ಹೆಗ್ಗಳಿಕೆಗೆ ಎತ್ತಿನಹೊಳೆ ಯೋಜನೆಯ ಅಕ್ವೆಡಕ್ಟ್‌ ಪಾತ್ರವಾಗಿದೆ. ಸುಮಾರು 10.5 ಕಿ.ಮೀ. ಉದ್ದದ ಅಕ್ವೆಡಕ್ಟ್‌ ಮೂಲಕ 3,300 ಕ್ಯುಸೆಕ್ ನೀರನ್ನು ಸಾಗಿಸುವ ಗುರಿ ಇದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. 2027ರ ಒಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವಾಗ, ಬಿಜೆಪಿಯವರ ಸಾಧನೆಯೇನು? ಅಡುಗೆ ಅನಿಲದ ಬೆಲೆ ಇಂದು ಗಗನಕ್ಕೆ ಹೋಗಿದೆ. ಜಿಎಸ್‌ಟಿ ಹೆಸರಿನಲ್ಲಿ ತರಕಾರಿ, ಎಳನೀರು ಮಾರುವವನಿಗೂ ನೋಟಿಸ್‌ ನೀಡಲಾಗುತ್ತಿದೆ. ಬಿಜೆಪಿಯವರು ಜಿಎಸ್‌ಟಿ ತಂದು ಬಡವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಸಾಧನೆ. ವ್ಯಾಪಾರಿಗಳು ಚಿಂತಿಸಬೇಕಾಗಿಲ್ಲ, ಅವರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಕಳೆದ ಎರಡು ವರ್ಷಗಳಿಂದ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಮಾಡಿದ್ದೇವೆ, ಯಾವುದೇ ಬಿಜೆಪಿ ಸಂಸದರೂ ಕೂಡ ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಅವರಿಗೆ ರಾಜ್ಯದ ಬಡವರ ಬಗ್ಗೆ ಕಾಳಜಿ ಇಲ್ಲ. ಕರ್ನಾಟಕವು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ನೀಡುವ ಪ್ರತಿ 100 ರೂ.ಗೆ ಕೇವಲ 13 ರೂ. ಮಾತ್ರ ಪಡೆಯುತ್ತಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಡಿಕೆ.ಶಿವಕುಮಾರ್ ಅವರ ಬೆಂಬಲಿಗರು. ಡಿಕೆ.ಶಿವಕುಮಾರ್ ಅವರನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಣೆಗಳನ್ನು ಕೂಗಿದ್ದು ಕಂಡು ಬಂದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com