
ಕೋಲಾರ: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಪ್ರಕರಣ ಸಂಬಂಧ ಸಚಿವ ರಾಜಣ್ಣ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ ಅವರು, ಹನಿಟ್ರ್ಯಾಪ್ ಯತ್ನ ನಡೆದಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಸಂಪರ್ಕಿಸಿ ದೂರು ನೀಡಲಾಗುವುದು ಎಂದು ಹೇಳಿದರು.
ಇಂತಹ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇದೂ ಕೊನೆಯೂ ಆಗುವುದಿಲ್ಲ. ಭವಿಷ್ಯದಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗಲಿವೆ. ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವುದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಬಿಟ್ಟ ವಿಷಯ, ಹನಿಟ್ರ್ಯಾಪ್ ಕೇಸಿನ ಬಗ್ಗೆ ಸದನದಲ್ಲಿ ಮಾತನಾಡುವ ಮುನ್ನ ಈ ವಿಚಾರವನ್ನು ಪ್ರಸ್ತಾವಿಸಲು ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಹೋದೆ.
ಮಧ್ಯಾಹ್ನ 12.30 ಸುಮಾರಿಗೆ ನಾನು ಅವರ ಮನೆಗೆ ಹೋಗಿದ್ದೆ, ಅವರು ಅಂದೇ ಮೂರು ಗಂಟೆಗೆ ಸದನದಲ್ಲಿ ಉತ್ತರವನ್ನು ಕೊಡುವವರಿದ್ದರು. ಅದಕ್ಕಿಂತ ಮುಂಚೆ, ಅವರಿಗೆ ಮಾಹಿತಿ ತಿಳಿಸಬೇಕಾಗಿತ್ತು, ಅದಕ್ಕಾಗಿ ಅವರ ಮನೆಗೆ ಹೋಗಿದ್ದೆ. ಅವರು ನನಗೆ ಕೊಟ್ಟಿದ್ದು ಒಂದೇ ಡೈರೆಕ್ಷನ್.
ಸಿದ್ದರಾಮಯ್ಯ ಅವರು ಅವರ ನಿವಾಸದಲ್ಲಿ ಏನೋ ಓದುತ್ತಿದ್ದರು, ಅವರನ್ನು ಮುಖತಃ ಭೇಟಿಯಾಗಲು ಆಗಲಿಲ್ಲ. ಅಲ್ಲಿಂದಲೇ ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದೆ. ಅವರು ನನಗೆ ಹೇಳಿದ್ದು ಇಷ್ಟೇ.. ನೋಡಪ್ಪಾ.. ನಿನಗೆ ಏನು ಸರಿ ಎನ್ನುವುದು ದೇವರು ನಿನಗೆ ಬುದ್ದಿ ಕೊಡುತ್ತಾನೋ ಹಾಗೇ ಮಾಡು ಎಂದು ಹೇಳಿದರು ಎಂದು ತಿಳಿಸಿದರು.
ಇದು ಒಂದು ವಾರದಿಂದ ನಡೆಯುತ್ತಿರುವ ವಿಚಾರವಲ್ಲ, ಒಂದೂವರೆ ತಿಂಗಳಿನಿಂದ ನಡೆಯುತ್ತಿದೆ. ತುಮಕೂರು, ಮಧುಗಿರಿ, ಬೆಂಗಳೂರಿನಲ್ಲಿ ನನ್ನ ಮತ್ತು ನನ್ನ ಮಗನ ಮೇಲೆ ಪ್ರಯತ್ನ ನಡೆದಿದೆ. ಏನೆಲ್ಲಾ ನಡೆಯಿತು, ಅದನ್ನು ವಿವರವಾಗಿ ನಿಮ್ಮ ಮುಂದೆ ಇಡುತ್ತೇನೆ.
ಸತೀಶ್ ಜಾರಕಿಹೊಳಿ ಕೂಡಾ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಯಾವ ರೀತಿ ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ಚರ್ಚಿಸುತ್ತೇವೆ. ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು ಎನ್ನುವುದು ಹಲವರ ಅಭಿಪ್ರಾಯವಿದೆ. ಇದಾದ ನಂತರ, ಹೈಕಮಾಂಡ್ ಬಳಿ ಪ್ರಸ್ತಾವಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
Advertisement