

ಹಾಸನ: ತಮ್ಮ ಎದುರಾಳಿಗಳಿಗೆ ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಕಣ್ಣೀರು ಹಾಕುತ್ತಲೇ ಶಪಥ ಗೈದಿದ್ದಾರೆ.
ಹಾಸನದ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಚ್ ಡಿ ರೇವಣ್ಣ, ಕಣ್ಣೀರು ಹಾಕುತ್ತಲೇ ಶಪಥ ಮಾಡಿದರು. 'ನಾನು ನೋವಿನಿಂದ ಹೇಳುತ್ತಿದ್ದೇನೆ, ಈ ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರ ನಾನು ಎಂದೂ ನೋಡಲಿಲ್ಲ, ಕಾಯ್ತಾ ಇದ್ದೀನಿ, ಬಡ್ಡಿ ಸಮೇತ ತೀರಿಸುವವರೆಗೂ ರಾಜಕೀಯದಲ್ಲಿ ಇರ್ತಿನಿ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಅನ್ನೋದು ಗೊತ್ತಿದೆ ನನಗೆ, ಕೆಲವು ಬಡ್ಡಿ ಸಮೇತ ತೀರಿಸಬೇಕಾಗುತ್ತದೆ. ಇನ್ನು ಒಂದೂವರೆ ವರ್ಷ ಅಷ್ಟೇ, ನಮ್ಮ ಕಾರ್ಯಕರ್ತರಿಗೆ ಹೇಳುವುದು ಇಷ್ಟೇ, ಎಷ್ಟೇ ನೋವಾದರೂ ತಡಿಯಿರಿ, ಬಡ್ಡಿ ಸಮೇತ ತೀರಿಸದೆ ಹೋದರೆ ನನ್ನನ್ನು ರೇವಣ್ಣ ಎಂದು ಕರೆಯಬೇಡಿ, ಚಾಲೆಂಜ್ ಹಾಕಿ ಆ ಕೆಲಸ ಮಾಡಿ ತೋರುಸುತ್ತೀನಿ ಎಂದು ಹೆಚ್.ಡಿ. ರೇವಣ್ಣ ಸವಾಲು ಹಾಕಿದರು.
ನನಗೆ ಗೊತ್ತಿದೆ ಏನೇನು ಸುಳ್ಳು ಕೇಸ್ ಹಾಕಿಸಿದ್ದಾರೆ ಅಂತಾ, ನಾನು ಇನ್ನೂ ಶಾಂತ ರೀತಿಯಿಂದ ಇದ್ದೀನಿ, ಯಾರು ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ, ದೇವೇಗೌಡರು ರಾಜಕೀಯವಾಗಿ ಮುಗಿದುಹೋದರು ಎನ್ನುವ ಕಾಲದಲ್ಲಿ ಶಕ್ತಿ ಕೊಟ್ಟ ಗ್ರಾಮಗಳು, ಅವುಗಳನ್ನು ಮರೆಯಲು ಆಗಲ್ಲ, ನಾನು ಅಧಿಕಾರಕ್ಕೆ ಬಂದ ದಿನವೇ ರಸ್ತೆಗೆ ಹಣ ಕೊಟ್ಟಿದ್ದೇನೆ ಎಂದರು.
ಕುಮಾರಸ್ವಾಮಿಯನ್ನು ಮೋಸದಿಂದ ಸೋಲಿಸಿದ್ದಾರೆ
ಇಗೇ ವೇಳೆ ಇಲ್ಲಿ ಶಾಸಕರಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಮೋಸದಿಂದ ಸೋತಿದ್ದಾರೆ. ಕೆಲವರು ಒಳಗಡೆ ಇದ್ದುಕೊಂಡೆ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ನಾವು ಸ್ವಲ್ಪ ಜಾಗೃತರಾಗಿದ್ದರೆ ಕುಮಾರಸ್ವಾಮಿ ಶಾಸಕರಾಗಿರುತ್ತಿದ್ದರು. ರಾಜಕೀಯವಾಗಿ ದೇವೇಗೌಡರ ಪರವಾಗಿ ಇದ್ದಾವೆ ಎಂದು ಕಾಲೇಜು ಮುಚ್ಚಿಸಿದ್ದಾರೆ ಎಂದು ಹೆಚ್.ಡಿ. ರೇವಣ್ಣ ಅವರು ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಾನು ನೋವಿನಿಂದ ಹೇಳುತ್ತಿದ್ದೇನೆ, ಈ ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರ ನಾನು ನೋಡಲಿಲ್ಲ, ಕಾಯ್ತಾ ಇದ್ದೀನಿ, ಬಡ್ಡಿ ಸಮೇತ ತೀರಿಸುವವರೆಗೂ ರಾಜಕೀಯದಲ್ಲಿ ಇರ್ತಿನಿ, ಯಾವ್ಯಾವ ಅಧಿಕಾರಿಗಳು, ಯಾವ್ಯಾವ ರೀತಿ ನಡೆಯುತ್ತಿದೆ ಗೊತ್ತಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
‘140 ದೇವಸ್ಥಾನಗಳ ಕಟ್ಟಲು ಕೆಲಸ ಮಾಡಿದ್ದೀನಿ’
ಅಂತೆಯೇ ದೇವೇಗೌಡರಿಗೆ 1990ನೇ ಇಸವಿಯಲ್ಲಿ ರಾಜಕೀಯ ಶಕ್ತಿ ಕೊಟ್ಟ ಗ್ರಾಮ ದೊಡ್ಡಬೀಕನಹಳ್ಳಿ, ಕುಮಾರಣ್ಣನ ಹಿಡಿದು ಸುಮಾರು 450 ಕೋಟಿ ರೂ. ಕೆಲಸವನ್ನು ಈ ಹೋಬಳಿಗೆ ಮಾಡಿದ್ದೀನಿ, 140 ದೇವಸ್ಥಾನಗಳ ಕಟ್ಟಲು ಕೆಲಸ ಮಾಡಿದ್ದೀನಿ ಎಂದರು.
ಮುಂದುವರೆದು ಮಾತನಾಡಿದ ಅವರು, 'ಪೊಲೀಸ್ ಇಲಾಖೆ ಇದ್ಯಾ ಈ ಜಿಲ್ಲೆಯಲ್ಲಿ, ನಾಚಿಕೆಯಾಗಬೇಕು. ಹದಿನಾರು ವರ್ಷದಿಂದ ರಸ್ತೆ ಇದೆ, ಜಿಲ್ಲಾ ಪಂಚಾಯಿತಿಯಿಂದ ಅನುದಾನ ಕೊಟ್ಟಿದ್ದಾರೆ. ಇಡೀ ಗ್ರಾಮದವರ ಮೇಲೆ ಕಂಪ್ಲೆಂಟ್ ಕೊಡಲು ಹೋಗುತ್ತಾರೆ. ಒಂದು ಮನೆಗೋಸ್ಕರ ಪೊಲೀಸ್ ಕಂಪ್ಲೆಂಟ್ ಕೊಡಿ ಎಂದು ಒತ್ತಡ ಹಾಕುತ್ತಾರೆ. ಎಲ್ಲೂ ಹೋಗಲ್ಲ, ಕೆಲವು ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ನೋಡುತ್ತಿದ್ದೀನಿ ಎಂದು ಹೇಳಿದರು.
Advertisement