'ದಲಿತ ಅಂತ ವಿಪಕ್ಷಗಳು ನನ್ನನ್ನು ಟಾರ್ಗೆಟ್ ಮಾಡ್ತಿವೆ, ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡೋದಿಲ್ಲ': ಬಿ ನಾಗೇಂದ್ರ-Video

B Nagendra
ಬಿ ನಾಗೇಂದ್ರ
Updated on

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ವಿಪಕ್ಷಗಳ ಆಗ್ರಹಗಳಿಗೆ ಸಚಿವ ಬಿ. ನಾಗೇಂದ್ರ ಅವರು ಬುಧವಾರ ತಿರುಗೇಟು ನೀಡಿದ್ದು, ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಹಾಗೂ ದಲಿತರಾಗಿರುವ ಕಾರಣ ತಮ್ಮನ್ನು ಗುರಿಯಾಗಿಸಿ ವಿರೋಧ ಪಕ್ಷದವರು ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ದೇಶದಲ್ಲಿ ಸಚಿವರು ಹಾಗೂ ಸಂಸದರು ವಿರುದ್ಧವೂ ಪ್ರಕರಣಗಳಿವೆ. ಅವರ ರಾಜೀನಾಮೆಗೆ ನೀವು ಏಕೆ ಆಗ್ರಹಿಸುತ್ತಿಲ್ಲ? ಇಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದವನು ಹಾಗೂ ದಲಿತನಾಗಿರುವ ಕಾರಣ ನನ್ನನ್ನು ಗುರಿಯಾಗಿಸುತ್ತಿದ್ದೀರಿ ಎಂದು ನಾಗೇಂದ್ರ ಹೇಳಿದರು.

ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ದೇಶದ ರಾಜಕೀಯ ನಾಯಕರಲ್ಲಿ ಒಟ್ಟು 326 ಮಂದಿಯಲ್ಲಿ 126 ಜನರ ವಿರುದ್ಧ ಅಪಹರಣ, ಅತ್ಯಾಚಾರ, ಕೊಲೆ ಯತ್ನ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ “ಗಂಭೀರ ಅಪರಾಧ ಪ್ರಕರಣಗಳಿವೆ” ಎಂದು ಆರೋಪಿಸಿದರು. ಆಡಳಿತಾರೂಢ ಪಕ್ಷದ ನಾಯಕರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು, ಮೊದಲು ಅವರೆಲ್ಲರೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

B Nagendra
'ನನ್ನ ಮೇಲೂ ಪ್ರಕರಣಗಳಿವೆ, ಆದರೂ ಸಿಎಂ ಆದೆ': ಸಂಪುಟಕ್ಕೆ ಬಿ. ನಾಗೇಂದ್ರ ಸೇರ್ಪಡೆ ಸಮರ್ಥಿಸಿಕೊಂಡ ಶಿವಕುಮಾರ್!

ಉದಾಹರಣೆಗೆ, ನಿಮ್ಮ ಪಕ್ಷದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧ 29 ಪ್ರಕರಣಗಳಿವೆ. ಅವುಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳೂ ಸೇರಿವೆ. ನನ್ನ ರಾಜೀನಾಮೆ ಕೇಳುವ ಮೊದಲು, ಆ 126 ಮಂದಿಯೂ ರಾಜೀನಾಮೆ ನೀಡುವಂತೆ ಮಾಡಿ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಾಜೀನಾಮೆ ನೀಡಲಿ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ದಲಿತರೊಬ್ಬರನ್ನು ತಳಮಟ್ಟದಿಂದ ಕಠಿಣ ಪರಿಶ್ರಮದ ಮೂಲಕ ಮೇಲೆ ಬಂದ ವ್ಯಕ್ತಿಯನ್ನು ಗುರಿಯಾಗಿಸುತ್ತಿದ್ದೀರಿ ಎಂದು ಅವರು ಆರೋಪಿಸಿದರು. ತಮ್ಮ ವಿರುದ್ಧದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ತಮಗೆ ಪರಿಹಾರ ದೊರೆತಿದೆ ಎಂದು ನಾಗೇಂದ್ರ ಹೇಳಿದರು.

ನಾನು ಅಪರಾಧಿ ಅಲ್ಲ, ಕೇವಲ ಆರೋಪಿ

ಕೆಲವು ಪ್ರಕರಣಗಳಲ್ಲಿ ಜನರು ನ್ಯಾಯಾಲಯದ ಮೊರೆ ಹೋದಾಗ, ಅವರ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂಬ ತೀರ್ಪಿನೊಂದಿಗೆ ವಾಪಸ್ ಬರುತ್ತಾರೆ. ನಾನು ಕೂಡ ಇದೇ ಪ್ರಕ್ರಿಯೆಗೆ ಒಳಗಾಗಿದ್ದೇನೆ. ನನಗೆ ಪರಿಹಾರ ನೀಡಲಾಗಿದ್ದು, ವಾಪಸ್ ಕಳುಹಿಸಲಾಗಿದೆ. ನಾನು ಅಪರಾಧಿ ಅಲ್ಲ, ನನ್ನ ವಿರುದ್ಧ ಕೇವಲ ಆರೋಪಗಳಿವೆ ಎಂದು ನ್ಯಾಯಾಲಯ ಹೇಳಿದೆ ಎಂದು ಅವರು ಹೇಳಿದರು.

ನೀವು ನ್ಯಾಯಾಂಗದ ಸ್ಥಾನದಲ್ಲಿ ಕುಳಿತು ನಾನು ಆರೋಪಿ, ನಾನು ಅಪರಾಧಿ ಅಥವಾ ನಾನು ತಪ್ಪು ಮಾಡಿದ್ದೇನೆ ಎಂದು ಘೋಷಿಸಲು ಸಾಧ್ಯವಿಲ್ಲ. ನಾನು ಎಲ್ಲ ಪ್ರಕರಣಗಳಲ್ಲಿ ಎಲ್ಲಿ ಅಪರಾಧಿ ಎಂದು ಸಾಬೀತಾಗಿದ್ದೇನೆ? ಈ ಸಂವಿಧಾನದ ಅಡಿಯಲ್ಲಿ ನನಗೆ ಮೂಲಭೂತ ಹಕ್ಕುಗಳಿವೆ, ನ್ಯಾಯಾಲಯದ ತೀರ್ಪನ್ನು ತಾವು ಗೌರವಿಸುವುದಾಗಿ ಸಚಿವರು ತಿಳಿಸಿದರು.

ಪ್ರಕರಣಗಳು ನ್ಯಾಯಾಲಯದ ಮುಂದೆ ಹೋಗಲಿ. ನ್ಯಾಯಾಲಯವು ನಾನು ತಪ್ಪಿತಸ್ಥ, ನಾನು ಅಪರಾಧಿ ಎಂದು ತೀರ್ಪು ನೀಡಿ, ನಾನು ತಪ್ಪು ಮಾಡಿದ್ದೇನೆ ಎಂದು ಹೇಳಿದರೆ, ನನಗೆ ವಿಧಿಸುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸುತ್ತೇನೆ. ನ್ಯಾಯಾಂಗದ ಮುಂದೆ ತಲೆಬಾಗುತ್ತೇನೆ ಎಂದು ನಾಗೇಂದ್ರ ಹೇಳಿದರು.

ಸಾಯೋದು ಸಹ ದಲಿತನಾಗಿಯೇ

ಈ ಕೇಸ್‌ನಲ್ಲಿ‌ ಏನಿದೆ‌ ಸ್ವಾಮಿ? ನಾನು ಯಾಕೆ ರಾಜೀನಾಮೆ‌ ಕೊಡಬೇಕು, ಈ‌ ಸಂವಿಧಾನ ನಮ್ಮನ್ನ ಕಾಪಾಡುತ್ತಿದೆ ಎಂದು  ಸಂವಿಧಾನ ಪುಸ್ತಕ ಪ್ರದರ್ಶನ ಮಾಡಿದ ಸಚಿವ ನಾಗೇಂದ್ರ ಅವರು ಹುಟ್ಟು ದಲಿತ ಸಾಯೋದು ಸಹ ದಲಿತನಾಗಿಯೇ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com