

ಹಾಸನ: ನಾನು ರಾಜ್ಯ ರಾಜಕೀಯಕ್ಕೆ ಹೋಗುವವನಲ್ಲ. ರಾಜ್ಯ ರಾಜಕೀಯ ಮಾತನಾಡಲು ಹೋಗಲ್ಲ. ನಮ್ಮ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರು. ನಾನು ಜಿ.ಪಂ. ಸದಸ್ಯನಾಗಿ, ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಜನರ ನಾಡಿಮಿಡಿತ ಅರಿತಿದ್ದೇನೆ. ನಮ್ಮ ಕುಟುಂಬಕ್ಕೆ ರಾಜಕೀಯ ಹೊಸದಲ್ಲ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡಗೆ ತಿರುಗೇಟು ನೀಡಿದ ಅವರು, ನಾನುಲಾಟರಿ ಶಾಸಕನಲ್ಲ, 85 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ನನ್ನ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಮಾಡಿರುವ ಶಾಶ್ವತ ಕೆಲಸಗಳ ಅಂಕಿ-ಅಂಶಗಳನ್ನು ಜನರ ಮುಂದಿಡುತ್ತೇನೆ.
ನಾನು ಲಾಟರಿ ಆಡಿದವನಲ್ಲ. ಲಾಟರಿ ಆಡುವವರಿಗೆ ಅದರ ಆಳ, ಅಗಲ ಗೊತ್ತು. ಅವರು ಅದರ ಬಗ್ಗೆ ಮಾತನಾಡುತ್ತಾರೆ. ಲಾಟರಿ ಬಗ್ಗೆ ಆಳ, ಅಗಲ ನನಗೆ ಗೊತ್ತಿಲ್ಲ. ನಾನು ಎಂದೂ ಲಾಟರಿ ಆಡಿಲ್ಲ ಎಂದು ವ್ಯಂಗ್ಯವಾಡಿದರು.
ಪಕ್ಷ ಯಾವ ತೀರ್ಮಾನ ತೆಗೆದುಕೊಂಡರೂ ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ಮೈತ್ರಿ ಧರ್ಮ ಪಾಲನೆ ಮೊದಲು. ಚುನಾವಣೆ ಟಿಕೆಟ್ ವಿಚಾರ ನಂತರ. ಟಿಕೆಟ್ ಕುರಿತು ಎಂದೂ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮೈತ್ರಿ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ನನ್ನಿಂದ ಮೈತ್ರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಯಾರು ಮೈತ್ರಿ ಧರ್ಮ ಪಾಲಿಸಿದ್ದಾರೆ, ಇಲ್ಲ ಎಂಬುದನ್ನು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಪಕ್ಷದ ಹಿರಿಯರ ನಿರ್ಧಾರಗಳನ್ನು ಗೌರವಿಸಿ ಕೆಲಸ ಮಾಡಿದ್ದೇನೆ. ಮುಂದೆಯೂ ಪಕ್ಷ ಮತ್ತು ಮೈತ್ರಿಯ ಹಿತದೃಷ್ಟಿಯಿಂದಲೇ ನಡೆದುಕೊಳ್ಳುತ್ತೇನೆ ಎಂದರು.
ನಾನು ಚಿಕ್ಕಂದಿನಿಂದ ರಾಜಕೀಯ ಕಂಡಿದ್ದೇನೆ. ನಮ್ಮ ಕುಟುಂಬ ರಾಜಕೀಯವಾಗಿ ಬೆಳೆಯಲು ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ಕಾರಣ. ತಂದೆ ದಿವಂಗತ ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿ ಜನಸೇವೆ ಸಲ್ಲಿಸಿದ್ದರು. ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸೇವಾ ಕಾರ್ಯ ಮುಂದುವರಿಸುತ್ತೇನೆ. ನಾನು ಚುನಾವಣೆಯಲ್ಲಿ 85ಸಾವಿರ ಮತಗಳನ್ನು ಪಡೆದಿದ್ದೇನೆ. ಮತ ನೀಡಿದವರು, ನೀಡದವರು ಸೇರಿ ಎಲ್ಲರ ಸೇವೆಗೆ ಶಾಸಕನಾಗಿದ್ದೇನೆ ಎಂದರು.