ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ: ಧಾರ್ಮಿಕ ಮುಖಂಡರಿಂದ ಶಿಫಾರಸು ಮಾಡಿಸಿದ ಇತಿಹಾಸವಿಲ್ಲ; ಯು.ಟಿ ಖಾದರ್

ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಿ ಮೂರು ವರ್ಷಗಳ ನಂತರ ಮನೆಗೆ ಮರಳಿದ ಅನುಭವ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಸಚಿವ ಸಂಪುಟ ರಚನೆಯ ವೇಳೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇತ್ತು.
U T khader
ಯು.ಟಿ ಖಾದರ್
Updated on

ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೂ ಒಂದಲ್ಲಾ ಒಂದು ದಿನ ಉತ್ತಮ ಅವಕಾಶ ದೊರೆಯುವುದು ಖಚಿತ. ಹೀಗಾಗಿ ಪ್ರತಿಯೊಬ್ಬರು ಪಕ್ಷದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸಚಿವ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಬಾರಿ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಭೇಟಿ ನೀಡಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಸ್ಥಾನ ಅಥವಾ ಇನ್ನಾವುದೇ ಹುದ್ದೆಗಾಗಲಿ ಯಾವುದೇ ಸಂಸ್ಥೆ, ಧಾರ್ಮಿಕ– ಸಾಮಾಜಿಕ ಮುಖಂಡರು, ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಶಿಫಾರಸು, ಲಾಬಿ ಮಾಡಿಸಿದ ಇತಿಹಾಸ ಇಲ್ಲ. ನಾನು ಮಾಡಿರುವ ಕೆಲಸವನ್ನು ಅವಲೋಕಿಸಿ, ಪಕ್ಷ ನನಗೆ ವಿಧಾನ ಸಭಾಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ನೀಡಿದೆ ಎಂದು ಹೇಳಿದರು.

ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಿ ಮೂರು ವರ್ಷಗಳ ನಂತರ ಮನೆಗೆ ಮರಳಿದ ಅನುಭವ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಸಚಿವ ಸಂಪುಟ ರಚನೆಯ ವೇಳೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಈ ನಡುವೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ ಸೇರಿದಂತೆ ಪಕ್ಷದ ಕೆಲ ಮುಖಂಡರನ್ನು ಭೇಟಿ ಮಾಡುವಂತೆ ಪಕ್ಷದಿಂದ ಕರೆ ಬಂತು.

ರಾತ್ರಿ 9 ಗಂಟೆಗೆ ಅವರನ್ನು ಭೇಟಿ ಮಾಡಿದಾಗ, ‘ಈ ಬಾರಿ ಅಲ್ಪಸಂಖ್ಯಾತರಿಗೆ ಸ್ಪೀಕರ್ ಸ್ಥಾನ ಕೊಡಲು ನಿರ್ಧರಿಸಿದ್ದೇವೆ. ನೀವು ಸ್ಪೀಕರ್ ಆಗಬೇಕು’ ಎಂದು ಅವರು ಹೇಳಿದಾಗ, ತಕ್ಷಣ ಒಪ್ಪಿಕೊಂಡೆ. ಪಕ್ಷ ಯಾವ ಹೊಣೆ ವಹಿಸಿದರೂ ಒಪ್ಪಿಕೊಳ್ಳಲು ಸಿದ್ಧ. ಆದರೆ, ಕಾಂಗ್ರೆಸ್ ಕಚೇರಿಗೆ ಹೋಗಲು ಆಗದು ಎನ್ನುವುದೊಂದೇ ಬೇಸರ ಎಂದು ಅವರ ಬಳಿ ಹೇಳಿಕೊಂಡಿದ್ದೆ’ ಎಂದು ಮೂರು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.

U T khader
'ಎಲ್ಲಾ ಸಚಿವರೂ ಸಶಕ್ತರೇ, ನಾನು ಟೆಸ್ಟ್ ಮ್ಯಾಚ್ ಆಡಿದರೆ ಅವರು ಒನ್ ಡೇ ಮ್ಯಾಚ್ ಆಡುತ್ತಾರೆ': ಯು.ಟಿ ಖಾದರ್

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಆತಂಕ ಪಡಬೇಕಾಗಿಲ್ಲ. ಕಾರ್ಯಕರ್ತರು ಎಚ್ಚರದಿಂದಿದ್ದರೆ ಯಾವುದೇ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದು. ಪ್ರತಿ ಬೂತ್‌ನಲ್ಲಿರುವ ಮತದಾರರನ್ನು ಗುರುತಿಸಿ, ಅವರ ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿಕೊಟ್ಟರೆ, ಮತದಾರರ ಪಟ್ಟಿಯಿಂದ ಹೆಸರು ತಪ್ಪಿಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕ್ಷೇತ್ರದ ಜನರ ಪ್ರೀತಿ, ನಾಯಕರ ಬೆಂಬಲದಿಂದ ಈ ಹಂತ ತಲುಪಲು ತಮಗೆ ಸಾಧ್ಯವಾಯಿತು. ತಾನು ಮಾಡಿರುವ ಕೆಲಸ ನೋಡಿ ಪಕ್ಷ ತಮಗೆ ಅವಕಾಶ ನೀಡಿದೆ. ನಾಯಕರ ವ್ಯಕ್ತಿತ್ವಕ್ಕೆ ಹಾನಿಯಾದರೆ ಪಕ್ಷಕ್ಕೆ ಹಾನಿಯಾದಂತೆ. ಅದಕ್ಕೆ ಅವಕಾಶ ನೀಡಬಾರದು ಎಂದು ಯು.ಟಿ.ಖಾದರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com