

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ನೋಂದಣಿ ಬಗ್ಗೆ ಮಾಹಿತಿ ನೀಡುವಂತೆ ಪಟ್ಟು ಹಿಡಿದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದಿದ್ದರೆ ಸಂಘದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಂಗಳವಾರ ಸುಳಿವು ನೀಡಿದ್ದಾರೆ.
ನಾನು ಬರೆದ ಪತ್ರಕ್ಕೆ ಆರ್ ಎಸ್ಎಸ್ ನಿಂದ ಯಾವುದೇ ತೃಪ್ತಿದಾಯಕ ಉತ್ತರ ಸಿಗದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಶತಮಾನಗಳಷ್ಟು ಹಳೆಯದಾದ ಆರ್ಎಸ್ಎಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಗೃಹ ಸಚಿವರು, ಆರ್ ಎಸ್ ಎಸ್ ನೋಂದಣಿ ಬಗ್ಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದೇನೆ . ಇದೇ ಅಂತಿಮ ಅಲ್ಲ. ಅವರು ಉತ್ತರ ಕೊಡಲಿ. ತಾಳ್ಮೆಯಿಂದ ಕಾಯೋಣ ಎಂದರು.
"ನಾನು ಅವರ ಬಳಿ ವಿವರಗಳನ್ನು ಕೇಳಿ ಕೇವಲ ಒಂದು ವಾರವಾಗಿದೆ. ಅವರು 100 ವರ್ಷಗಳ ಇತಿಹಾಸ ಹೊಂದಿರುವ ದೇಶಭಕ್ತರು. ಅವರು ಎಲ್ಲೋ ದಾಖಲೆಗಳನ್ನು ಇಟ್ಟಿರಬೇಕು. ಅದು ನಾಗ್ಪುರದಲ್ಲಿ, ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಅಥವಾ ಸರಸಂಘ ಚಾಲಕ್ ಅವರ ನಿವಾಸದಲ್ಲಿ" ಇರಬಹುದು. ಅದನ್ನು ಹುಡುಕಲು ಅವರಿಗೆ ಸಮಯ ಬೇಕು ಅಲ್ವಾ ಎಂದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ನವರು ದಾಖಲೆ ಕೊಡದೆ ಕಾನೂನು ಮೀರುವಂತಿಲ್ಲ. ಅವರು ದಾಖಲೆ ಕೊಡದೇ ಕಾನೂನು ಚೌಕಟು ಮೀರಲು ನಾನು ಬಿಡಲ್ಲ. ಆರ್ ಎಸ್ ಎಸ್ ಬಳಿ ದಾಖಲೆ ಇದ್ದಿದ್ದರೇ ನನ್ನ ಮುಖಕ್ಕೆ ಎಸೆಯುತ್ತಿದ್ದರು ಎಂದು ಕುಟುಕಿದರು.
ಆರ್ಎಸ್ಎಸ್ ದಾಖಲೆಗಳನ್ನು ನೀಡದಿದ್ದರೆ ಮುಂದಿನ ಕ್ರಮ ಏನು? ಎಂದು ವರದಿಗಾರರು ಕೇಳಿದಾಗ, ದೇಶದಲ್ಲಿ ಕಾನೂನು ಇದೆ. ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಖರ್ಗೆ ತಿಳಿಸಿದರು.
ಆರ್ಎಸ್ಎಸ್ಗೆ ತಮ್ಮ ನೋಂದಣಿ ಪತ್ರವನ್ನು ಒದಗಿಸುವಂತೆ ಕೇಳುತ್ತಿದ್ದೀರಾ ಎಂದು ಕೇಳಿದಾಗ, ಇದು ನೋಂದಣಿ ಪತ್ರದ ಬಗ್ಗೆ ಅಲ್ಲ, ಅವರು ಯಾರೆಂದು ತಿಳಿಯುವ ಪ್ರಯತ್ನ ಎಂದು ಖರ್ಗೆ ಹೇಳಿದರು.
Advertisement