

ಬೆಂಗಳೂರು: ಕರ್ನಾಟಕ ರಾಜ್ಯದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಅಭ್ಯರ್ಥಿಗಳ ಟಿಕೆಟ್ ಗೆ ಜಟಾಪಟಿ ನಡೆಯುತ್ತಿದೆ.
ಹೌದು.. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿಯೂ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಕಾದಾಟ ಜೋರಾಗಿದೆ. ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿರೋದು, ಬೈ ಎಲೆಕ್ಷನ್ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ.
ಶಾಮನೂರ ಶಿವಶಂಕರಪ್ಪ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದ ಬಿಜೆಪಿ ಸ್ಥಿತಿ ಮನೆಯೊಂದು ಮೂರು ಬಾಗಿಲಾಗಿದ್ದರೆ, ಇತ್ತ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗು ಮುಸ್ಲಿಂ ಸಮುದಾಯ ಪಟ್ಟು ಹಿಡಿದಿದೆ. ತಮ್ಮ ಕುಟುಂಬಕ್ಕೇ ಮರಳಿ ಟಿಕೆಟ್ ಸಿಗಬೇಕೆಂಬ ಆಗ್ರಹವನ್ನು ಶಾಮನೂರು ಕುಟುಂಬ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಅಖಾಡಕ್ಕೆ ಹೊಸ ಮುಖದ ಪ್ರವೇಶವಾಗಿದೆ.
ಎಐಸಿಸಿ ಯುವ ಘಟಕದ ಕಾರ್ಯದರ್ಶಿ, ಜಿಲ್ಲೆಯ ಮುಸ್ಲಿಂ ಸಮಾಜದ ಪ್ರಭಾವಿ ಮುಖಂಡ ಸೈಯದ್ ಸೈಪುಲ್ಲಾ ಪುತ್ರ ಮಹಮ್ಮದ್ ಖಾಲೀದ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬೃಹತ್ ಇಫ್ತಾರ ಕೂಟ ಆಯೋಜನೆ ಮಾಡಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ.
ಈ ಕಾರ್ಯಕ್ರಮಕ್ಕೆ ಮತ್ತೋರ್ವ ಆಕಾಂಕ್ಷಿ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಕೂಡ ಹಾಜರಾಗಿರೋದು ಭಾರಿ ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಮೊನ್ನೆ ಮೊನ್ನೆಯವರೆಗೂ ಜಿಲ್ಲೆಯಲ್ಲಿ ಕಿತ್ತಾಡುತ್ತಿದ್ದ ಬಿಜೆಪಿ ನಾಯಕರೀಗ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಪಕ್ಷ ಯಾರಿಗೇ ಮಣೆ ಹಾಕಿದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜಿಪಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಜಿ. ಅಜಯಕುಮಾರ, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ ಹಾಗೂ ದೇವರಮನೆ ಶಿವಕುಮಾರ ಒಂದೇ ವೇದಿಕೆಗೆ ಬಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ಮಾಜಿ ಸಂಸದ ಜಿಎಂ ಸಿದ್ದೇಶ್ವರ ಬಣಗಳ ಟಿಕೆಟ್ ಆಕಾಂಕ್ಷಿಗಳು ಬಹುದಿನಗಳ ಬಳಿಕ ಒಂದೇ ವೇದಿಕೆಗೆ ಬಂದಿದ್ದು, ಪಕ್ಷ ಹೊಸ ಮುಖದ ಹುಡುಕಾಟ ನಡೆಸುತ್ತಿರೋದೇ ಇದರ ಹಿಂದಿನ ಕಾರಣ ಎನ್ನಲಾಗ್ತಿದೆ.
ರೇಸ್ ನಲ್ಲಿ ಮಹಿಮಾ ಪಟೇಲ್
ಈ ನಡುವೆ ಈ ರೇಸ್ ನಲ್ಲಿ ಮಾಜಿ ಸಿಎಂ ಜೆಹೆಚ್ ಪಟೇಲ್ ಪುತ್ರ ಮಹಿಮಾ ಪಟೇಲ್ ಹೆಸರೂ ಕೂಡ ಕೇಳಿಬರುತ್ತಿದ್ದು, ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಚನ್ನಗಿರಿ ತಾಲೂಕನ್ನು ಸೇರಿಸುವ ಮೂಲಕ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು ಮತ್ತು ಮಹಿಮಾ ಅದರ ಕೀರ್ತಿಯನ್ನು ಪಡೆಯಬಹುದು. ಇದಲ್ಲದೆ, ಅವರ ಸಮುದಾಯವಾದ ಪಂಚಮಸಾಲಿ ಬಣಜಿಗರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 35,000 ಮತದಾರರನ್ನು ಹೊಂದಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಬಾಗಲಕೋಟೆ
ಅತ್ತ ಬಾಗಲಕೋಟೆಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ನಡುವಿನ ಸ್ಪರ್ಧೆ ಪಕ್ಷಗಳಲ್ಲಿ ಜೋರಾಗಿಯೇ ಇದ್ದು, ಅಂತಿಮವಾಗಿ ಅಖಾಡಕ್ಕೆ ಇಳಿಯುವವರು ಯಾರೆಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗುವ ನಿರೀಕ್ಷೆ ಇದೆ. ಮೇಠಿ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಮಾತುಕತೆಗಳು ಕಾಂಗ್ರೆಸ್ ನಲ್ಲಿ ಬಲವಾಗಿ ಕೇಳಿಬರುತ್ತಿವೆ.
ಈ ಬಗ್ಗೆ ಈ ಹಿಂದೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಎಚ್.ವೈ.ಮೇಟಿ ಕುಟುಂಬದವರಿಗೆ ಆಯ್ಕೆ ಮಾಡಲಾಗುವುದೇ ಎಂಬ ಪ್ರಶ್ನೆಗೆ, ‘ಟಿಕೆಟ್ ಆಕಾಂಕ್ಷಿಗಳಲ್ಲಿ ಎಚ್.ವೈ.ಮೇಟಿ ಕುಟುಂಬದವರೂ ಒಬ್ಬರು. ಎಷ್ಟು ಜನ ಕೇಳಿದರೂ, ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ’ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಬಗ್ಗೆ ಮಾತನಾಡಿ, ‘ಬಾಗಲಕೋಟೆ ನಮ್ಮ ಕ್ಷೇತ್ರ. ಇಲ್ಲಿ ಎಚ್.ವೈ.ಮೇಟಿ ಅವರಿಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು’ ಎಂದು ಕೋರಿದರು.
Advertisement