

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಬಡವರ ಉದ್ದಾರ ಮಾಡುತ್ತಿದ್ದೇವೆ ಎಂದು ಡಂಗುರ ಸಾರುವ ಈ ಕಾಂಗ್ರೆಸ್ ಸರ್ಕಾರ, ಒಳಗೊಳಗೆ ತನ್ನ ಪಕ್ಷದ ಅತೃಪ್ತ ನಾಯಕರಿಗೆ ಲಕ್ಷ ಲಕ್ಷ ರೂಪಾಯಿ ಸಂಬಳದ ಉಡುಗೊರೆ ನೀಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುಲವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸರ್ಕಾರ ಸದನಕ್ಕೆ ನೀಡಿರುವ ಅಧಿಕೃತ ದಾಖಲೆಗಳೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಗ್ಯಾರೆಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರಿಗೆ ಮಾಸಿಕ ವೇತನ ರೂ.5,98,487 (ಸುಮಾರು 6 ಲಕ್ಷ!) ನೀಡುತ್ತಿದೆ. 5 ಉಪಾಧ್ಯಕ್ಷರ ಒಟ್ಟು ಮಾಸಿಕ ವೇತನ ರೂ.22,19,325 (ತಲಾ ರೂ.4,43,865), 6 ಕಚೇರಿಗಳ ಸಿಬ್ಬಂದಿ ವೆಚ್ಚ (ಫೆಬ್ರವರಿ ಮಾಹೆ) ರೂ. 27,15,304 ಸೇರಿ ಒಟ್ಟು ಒಟ್ಟು ಮಾಸಿಕ ವೆಚ್ಚ ರೂ. 55,33,116 (55 ಲಕ್ಷಕ್ಕೂ ಅಧಿಕ) ಆಗಿದೆ.
ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಅವರೇ, ನಿಮ್ಮ ಪಕ್ಷದ ಅತೃಪ್ತ ಆತ್ಮಗಳನ್ನು ಸಾಕಲು ವರ್ಷಕ್ಕೆ ರೂ.6.6 ಕೋಟಿ ಲೂಟಿ ಮಾಡುತ್ತಿದ್ದೀರಿ. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಯಾವ ನ್ಯಾಯ? ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಇಡೀ ಸರ್ಕಾರಿ ಯಂತ್ರವೇ ಇರುವಾಗ, ಈ ರಾಜಕೀಯ ಗಂಜಿ ಕೇಂದ್ರದ ಅಗತ್ಯವೇನಿತ್ತು? ಇದನ್ನು "ಸಾಂಸ್ಥಿಕ ಭ್ರಷ್ಟಾಚಾರ", "ಸಾಂಸ್ಥಿಕ ಲೂಟಿ" ಅನ್ನದೆ ಇನ್ನೇನನ್ನಬೇಕು? ಗ್ಯಾರಂಟಿ ಹಣಕ್ಕೆ ಕಾಯುವ ಬಡವರಿಗೆ "ಪ್ರತಿ ತಿಂಗಳು ಸರಿಯಾಗಿ ಕೊಡೋದಕ್ಕೆ ಇದೇನು ಸಂಬಳಾನಾ" ಎನ್ನುತ್ತೀರಿ, ಆದರೆ ನಿಮ್ಮ ಪಕ್ಷದ ಅತೃಪ್ತರ ಜೇಬು ತುಂಬಿಸಲು ತಿಂಗಳಿಗೆ 55 ಲಕ್ಷ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು "ಅತೃಪ್ತ ಕಾಂಗ್ರೆಸ್ಸಿಗರ ಪುನರ್ವಸತಿ ಕೇಂದ್ರ" ಎಂದು ಕರೆದಿರುವ ಅವರು, ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ಹೀಗೆ ಲೂಟಿ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರದ 'ಪರ್ಸಂಟೇಜ್ ಮತ್ತು ಪೇಮೆಂಟ್' ರಾಜಕಾರಣಕ್ಕೆ ಮಂಗಳ ಹಾಡುವ ಕಾಲ ಹತ್ತಿರ ಬಂದಿದೆ ಎಂದಿದ್ದಾರೆ.
Advertisement