

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ಹಲವು ಗೊಂದಲಕ್ಕೆ ಕಾರಣವಾಗಿದೆ. 2023ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಗೆಲುವು ದಾಖಲಿಸಿದ್ದರು.
ಈ ಮೂಲಕ ಟಿಡಿ ರಾಜೇಗೌಡ ಶಾಸಕರಾಗಿದ್ದರು. ಆದರೆ ಮತ ಎಣಿಕೆಯಲ್ಲಿ ಅಕ್ರಮ ಆಗಿದೆ ಎಂಬ ಆರೋಪದಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಸೂಚನೆಯಂತೆ ಅಂಚೆ ಮತಗಳ ಮರು ಎಣಿಕೆ ನಡೆದಿದ್ದು, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಗೆಲುವು ದಾಖಲಿಸಿದ್ದಾರೆ.
2023 ಇವಿಎಂನಲ್ಲಿ ಗೆದ್ದರೂ 2026ರ ಅಂಚೆ ಮತದಾನದಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಇದೀಗ ಮರು ಎಣಿಕೆಯಲ್ಲಿ ಸೋಲು ಕಂಡಿದ್ದಾರೆ. ಇತ್ತ ಇವಿಎಂನಲ್ಲಿ ಸೋತು ಅಂಚೆ ಮತದಾನದ ಮೂಲಕ ಜೀವರಾಜ್ ಗೆಲುವು ದಾಖಲಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಿ ಜೀವರಾಜ್, ಸ್ಟ್ರಾಂಗ್ ರೂಂನಿಂದನೂ ಗೊಂದಲವನ್ನು ನೋಡಿದ್ದೇವೆ. ಸ್ಟ್ರಾಂಗ್ ರೂಂನ್ನು ಆ ರೀತಿ ಗೊಂದಲದಲ್ಲಿ ಏಕೆ ಇಟ್ಟುಕೊಂಡರು ಎಂದು ಗೊತ್ತಿಲ್ಲ, ನಿನ್ನೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಅಂಚೆ ಮತ ಎಣಿಕೆ ಈಗಷ್ಟೇ ಮುಕ್ತಾಯವಾಗಿದೆ. ಗೊಂದಲ ಅಲ್ಲಿಂದಲೇ ಆರಂಭವಾಗಿತ್ತು.
ಇಲ್ಲಿಗೆ ಬಂದ ಮೇಲೆ 22 ಟ್ರಂಕ್ ಗಳನ್ನು ತೆರೆದು ಅವುಗಳಲ್ಲಿ ಏನೇನು ಇದೆ ಎಂದು ನೋಡಿ ಕೊನೆಗೆ ಬ್ಯಾಲೆಟ್ ತೆಗೆದು ಎಣಿಕೆ ಮಾಡಿದರು. 2023ರಲ್ಲಿ ಅಕ್ರಮ ಎಂದು ತೆಗೆದಿದ್ದು ಈಗ ಕೈಬಿಟ್ಟಿದ್ದಾರೆ, ಸಿಂಧು ಮತಗಳನ್ನು ತೆಗೆದುಕೊಂಡು ಲೆಕ್ಕಾಚಾರ ನಡೆಸಿದಾಗ ಈಗಿನ ಪ್ರಕಾರ ನನಗೆ ಬಹುಮತ ಸಿಗುತ್ತದೆ. ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ, ಚುನಾವಣಾ ಆಯುಕ್ತರ ಮುಂದೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ, ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದರು.
2023ರ ಮೇ 13ರಂದು ನಾವು ಅಸಿಂಧು ಮತಗಳನ್ನು ಸಿಂಧು ಮತಗಳೆಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದು ಮತ್ತು ನನ್ನ ಮೂರು ವರ್ಷಗಳ ಸತತ ಹೋರಾಟಕ್ಕೆ ಜಯ ಸಿಕ್ಕಿದೆ, ಅಂಕಿಅಂಶಗಳು ಪೂರ್ಣಪ್ರಮಾಣದಲ್ಲಿ ಸಿಗಬೇಕಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕೊನೆಗೂ ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ನಾಯಕರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಡಿಎನ್ ಜೀವರಾಜ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಒತ್ತಡ ಹಾಕಬಹುದು
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷದಲ್ಲಿದೆ, ಆಡಳಿತ ಪಕ್ಷದ ಶಾಸಕರು ಅಂಚೆ ಮತ ಎಣಿಕೆ ನಿಲ್ಲಿಸಬೇಕೆಂದು ಒತ್ತಡ ಹಾಕುವುದು ಸಹಜ. ಈ ವಿಷಯ ಹೈಕೋರ್ಟ್ ಮುಂದೆ ಇದೆ, ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.
Advertisement