

ತುಮಕೂರು: ವಿಧಾನಸಭೆ ಚುನಾವಣೆಯ ಸೋಲು ಹಾಗೂ ಲೋಕಸಭೆ ಚುನಾವಣೆಯ ವೇಳೆ ನಡೆದ ವಿದ್ಯಮಾನಗಳ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.
2023ರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸೋತ ಬಳಿಕ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದ, ಮಾಧುಸ್ವಾಮಿ ಇದೀಗ ಏಕಾಏಕಿ ಪ್ರತ್ಯಕ್ಷರಾಗಿ ಸ್ವಪಕ್ಷದ ನಾಯಕರ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನ ನನ್ನನ್ನ ಪಬ್ಲಿಕ್ ನಲ್ಲಿ ಇರಲು ಇಷ್ಟಪಟ್ಟಿಲ್ಲ. ಅದಕ್ಕೆ ಸೋಲಿಸಿದ್ದಾರೆ. ಅದಕ್ಕೆ ನಾನು ದೂರ ಇದ್ದೇನೆ. ಆದರೆ ಕಾರ್ಯಕರ್ತರ ಜೊತೆ ನಾನಿದ್ದೇನೆ. ನಾನು ಈ ಜಿಲ್ಲೆಯಲ್ಲಿ ಸಂಘ-ಸಂಸ್ಥೆ ಚುನಾವಣೆ, ಕಾರ್ಯಕರ್ತರ ಚುನಾವಣೆ ಮಾಡುತ್ತಿರೋ ಏಕೈಕ ಪರಾಜಿತ ಅಭ್ಯರ್ಥಿ. ಚುನಾವಣೆ ಸೋತಿರಬಹುದು. ಆದ್ರೆ, ಕಾರ್ಯಕರ್ತರು ಜೊತೆ ಚೆನ್ನಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಗೈರು ಆಗಿರುವ ಬಗ್ಗೆ ಮಾತನಾಡಿದ ಅವರು, ಕರೆಯದೇ ಇರುವ ಕಾರ್ಯಕ್ರಮಗಳಿಗೆ ನಾನು ಹೆಂಗಪ್ಪ ಬರಲಿ ಎಂದು ಸ್ವಪಕ್ಷದ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಹಾಗೂ ನೊಳಂಬ ಲಿಂಗಾಯತ ಸಂಘದ ಸಹಯೋಗದಲ್ಲಿ ಮೇ 14 ಗುರುವಾರ ದಂದು ಹಮ್ಮಿಕೊಂಡಿದ್ದ ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ಉದ್ಘಾಟನೆ, ಲಾಂಛನ ಲೋಕಾರ್ಪಣೆ ಹಾಗೂ ನೊಳಂಬ ಸಂಸ್ಕೃತಿ ಸಂಪದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನಾವು ಅಸೂಯೆಯ ಪರಕಾಷ್ಠೆ ತಲುಪಿದ್ದೇವೆ. ಪಿತೂರಿ ಮಾಡುವುದನ್ನು ಬಿಟ್ಟು ಬೆಳೆಯುವವರನ್ನು ಪ್ರೋತ್ಸಾಹಿಸಬೇಕು. ನೊಳಂಬ ರಾಜಮನೆತನದ ಇತಿಹಾಸ ಜಗತ್ತಿಗೆ ಸರಿಯಾಗಿ ಪರಿಚಯವಾಗಿಲ್ಲ. ಸಿದ್ದರಾಮಣ್ಣನ ಮೆಂಟರ್ ಚಮಲಾದೇವಿ ಏಳು ನೊಳಂಬ ರಾಜಮನೆತನಗಳನ್ನು ಸಾಕಿದ ದೇವತೆ ಎಂಬಂತಹ ಸತ್ಯಗಳು ಹೊರಬರಬೇಕಿದೆ. ಅಧ್ಯಯನ ಪೀಠದ ಅನುದಾನವು ಕೇವಲ ಆಚರಣೆಗಲ್ಲದೆ, ಆಳವಾದ ಸಂಶೋಧನೆಗೆ ಬಳಕೆಯಾಗಲಿ ಎಂದರು.
Advertisement