

ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗೆ ವಿರೋಧವಾಗಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಕೇಂದ್ರದ ಆಡಳಿತರೂಢ ಬಿಜೆಪಿಯನ್ನೇ ಹಿಂದಿಕ್ಕಿದೆ.
ಕಾಕ್ರೋಚ್ ಜನತಾ ಪಕ್ಷ(CJP) ಭಾರತದ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಇತ್ತ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರು ಐ ಆಮ್ ಕಾಕ್ರೋಚ್ ಎಂಬ ಟೀ ಶರ್ಟ್ ಅನ್ನು ಬಿಡುಗಡೆ ಮಾಡಿದರು.
ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ಪಿಎಂ ಕಾಂಪ್ರಮೈಸ್, ಐ ಆಮ್ ಕಾಕ್ರೋಚ್ ಎಂಬ ಟೀ ಶರ್ಟ್ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ‘ಮೋದಿ ಸರ್ಕಾರ ಶಿಕ್ಷಣ ಮಾಫಿಯಾಗೆ ಎಲ್ಲವನ್ನೂ ಒಪ್ಪಿಸಿಬಿಟ್ಟಿದೆ. ಹಿಂದಿನ ಬಿಜೆಪಿ ಸರ್ಕಾರ ಪೇಪರ್ ಲೀಕ್ ಗೆ ಹೆಸರುವಾಸಿಯಾಗಿತ್ತು. ನೂರಾರು ಎಕ್ಸಾಂ ಪೇಪರ್ ಗಳು ಬಿಜೆಪಿ ನಾಯಕರ ಮೂಗಿನ ಅಡಿಯಲ್ಲೇ ನಡೆದಿವೆ. ಇಂದು ಪ್ರಧಾನಿಗಳಿಗೆ ಇಲ್ಲಿಂದ ಆಗ್ರಹ ಮಾಡ್ತೇವೆ. ಮೋದಿಯವರು ಪರೀಕ್ಷಾ ಪೇ ಚರ್ಚಾ ಬಿಟ್ಟು ಪೇಪರ್ ಲೀಕ್ ಪೇ ಚರ್ಚೆ ಮಾಡಬೇಕು’ ಎಂದರು.
ಬಳಿಕ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಮಾತನಾಡಿ, ‘ನೀಟ್ ಅಕ್ರಮದಿಂದ ಬಹಳಷ್ಟು ವಿದ್ಯಾರ್ಥಿಗಳ ಭವಿಷ್ಯ ಇಂದು ಅತಂತ್ರವಾಗಿದೆ. 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಯಾರು ಕೋಚಿಂಗ್ ಸೆಂಟರ್ ನಡೆಸುತ್ತಿದ್ದರು ಅವರೇ ಇಂದು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ. ಇದೊಂದು ದೊಡ್ಡ ದಂಧೆ’ ಎಂದು ಆರೋಪಿಸಿದರು.
Advertisement