

ಮೂಡಲಗಿ (ಬೆಳಗಾವಿ): ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಿಂದ ಹಿಡಿದು ಐಎಎಸ್, ಐಪಿಎಸ್ ಜೊತೆಗೆ ಶಾಲಾ ಶಿಕ್ಷಕರಿಗೂ ನಿವೃತ್ತಿ ಇದೆ. ಈ ಮೂಲಕ ಕಾಲ ಸರಿದಂತೆ ಎಲ್ಲರೂ ತಮ್ಮ ಕುರ್ಚಿಯನ್ನು ಮುಂದಿನ ಪೀಳಿಗೆಗೆ ಬಿಟ್ಟುಕೊಡಲೇಬೇಕು ಎಂಬುದು ವ್ಯವಸ್ಥೆಯ ನಿಯಮ. ಆದರೆ, ಈ ನಿವೃತ್ತಿ ಇಲ್ಲದ ಒಂದೇ ಒಂದು ರಂಗ ಅಂದರೆ ಬಹುಶಃ ಅದು ರಾಜಕೀಯ ರಂಗ ಮಾತ್ರ ಅನ್ಸುತ್ತೆ! ಹೌದು, ಇಡೀ ದೇಶದ ಭವಿಷ್ಯವನ್ನೇ ರೂಪಿಸುವ ಮಹತ್ವದ ರಾಜಕೀಯ ರಂಗದಲ್ಲಿ ಮಾತ್ರ ಈ ನಿವೃತ್ತಿಯ ಪರಿಕಲ್ಪನೆಯೇ ಮರೆಯಾಗಿದೆ. ವಯಸ್ಸು ಎಷ್ಟೇ ಆದರೂ ಅಧಿಕಾರದಿಂದ ಕೆಳಗಿಳಿಯಲು ಒಪ್ಪದ ರಾಜಕಾರಣಿಗಳ ವ್ಯವಸ್ಥೆಯ ವಿರುದ್ದ ಆಗಾಗ ವಿರೋಧ ವ್ಯಕ್ತವಾಗುತ್ತದೆ. ಇದಕ್ಕೆ ಈಗ, ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಧ್ವನಿಗೂಡಿಸಿದ್ದು, ಸರ್ಕಾರಿ ಅಧಿಕಾರಿಗಳ ಮಾದರಿಯಲ್ಲೇ ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸನ್ನು ನಿಗದಿಪಡಿಸುವ ಕಾಯ್ದೆ ಜಾರಿಗೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ರಾಜಕಾರಣಿಗಳೂ 65ಕ್ಕೆ ನಿವೃತ್ತಿಯಾಗಬೇಕು!
ಮೂಡಲಗಿ ತಾಲ್ಲೂಕಿನ ಪಟಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ 60 ವರ್ಷಕ್ಕೆ ನಿವೃತ್ತಿ ಇರುವಂತೆ, ರಾಜಕಾರಣಿಗಳಿಗೂ 65 ರಿಂದ 70 ವರ್ಷದೊಳಗೆ ನಿವೃತ್ತಿ ವಯಸ್ಸನ್ನು ನಿಗದಿಪಡಿಸಬೇಕು. ಈ ಮೂಲಕ, ರಾಜಕೀಯದಲ್ಲಿ ಹೊಸ ತಲೆಮಾರಿಗೆ ಮತ್ತು ಯುವಕರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು. ವಯಸ್ಸಾದ ನಾಯಕರು ಸ್ವಯಂಪ್ರೇರಿತರಾಗಿ ಯುವ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು ಎಂದು ಅಭಿಪ್ರಾಯಪಟಿದ್ದಾರೆ.
ಮುಂದುವರೆದು, ಈ ನಿಯಮವನ್ನು ನನ್ನಿಂದ ಪ್ರಾರಂಭಿಸುವುದಾದರೆ ನಾನು ಸಿದ್ಧನಿರುವೆ. ನನಗೂ ಈಗ 60 ವಯಸ್ಸು ದಾಟಿದ್ದು, ಮೊದಲಿನ ಉತ್ಸಾಹವಿಲ್ಲ. ಬಿಪಿ, ಶುಗರ್ ಇವೆಲ್ಲ ಆವರಿಸುವ ಆತಂಕ ಇದೆ. ವಿಶ್ರಾಂತಿ ಬೇಕು ಎನ್ನಿಸುತ್ತದೆ ಎಂದು ತಿಳಿಸಿದರು.