
ನವದೆಹಲಿ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-1 ಚಂದ್ರನ ಕುರಿತಂತೆ ಹಲವು ಮಹತ್ವದ ವಿಚಾರಗಳನ್ನು ಶೋಧಿಸಿದ್ದು, ಪ್ರಮುಖವಾಗಿ ಭೂಮಿಯಿಂದಾಗಿ ಚಂದ್ರ ತುಕ್ಕು ಹಿಡಿಯುತ್ತಿದ್ದಾನೆ ಎಂಬ ಕಳವಳಕಾರಿ ಅಂಶವನ್ನು ಹೊರಹಾಕಿದೆ.
ಹೌದು.. ಭಾರತದ ಚಂದ್ರಯಾನ ನೌಕೆಯಿಂದ ಪಡೆಯಲಾಗಿರುವ ಚಂದ್ರನ ಫೋಟೋಗಳು ಹಲವು ಹೊಸ ವಿಚಾರಗಳನ್ನು ಹೊರಗೆಡವಿದ್ದು, ಚಂದ್ರನ ಧ್ರುವ ಭಾಗ ತುಕ್ಕು ಹಿಡಿಯುತ್ತಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಆದರೆ ಚಂದ್ರನಲ್ಲಿನ ಈ ವಿಲಕ್ಷಣಕಾರಿ ನಡವಳಿಕೆಗೆ ಭೂಮಿಯೇ ಕಾರಣ ಎಂದೂ ವಿಜ್ಞಾನಿಗಳು ಹೇಳಿದ್ದಾರೆ. ಚಂದ್ರಯಾನ-1 ಯೋಜನೆಯಿಂದ ದೊರೆತಿರುವ ಫೋಟೋಗಳ ಅನ್ವಯ ಚಂದ್ರನ ಧ್ರುವ ಭಾಗಗಳಲ್ಲಿರುವ ನೆಲಕ್ಕೂ ಬೇರೆ ಭಾಗಗಳಲ್ಲಿರುವ ನೆಲಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಚಂದ್ರನ ದ್ರುವಗಳು ಅತ್ಯಂತ ಕೆಂಪಾಗಿದ್ದು, ಇದು ತುಕ್ಕು ಹಿಡಿಯುತ್ತಿರುವುದರ ಸಂಕೇತ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಬ್ಬಿಣಕ್ಕೆ ಹೇಗೆ ನೀರು, ಆಮ್ಲಜನಕ ಸೋಕಿದರೆ ಅದು ಕ್ರಮೇಣ ತುಕ್ಕು ಹಿಡಿಯುತ್ತದೆಯೇ ಅದೇ ರೀತಿ ಚಂದ್ರನಲ್ಲೂ ಕಬ್ಬಿಣಯುಕ್ತ ಕಲ್ಲುಗಳ ರಾಶಿ ಹೇರಳವಾಗಿವೆ. ಈ ದ್ರುವ ಭಾಗವು ಭೂಮಿಗೆ ಅತ್ಯಂತ ಸಮೀಪದಲ್ಲಿದ್ದು, ಭೂಮಿಯ ವಾತಾವರಣದ ಪ್ರಭಾವದಿಂದ ಮತ್ತು ಭೂಮಿ ಮೇಲಿನ ಆಮ್ಲಜನಕದ ಪ್ರಭಾವದಿಂದ ಚಂದ್ರನ ಈ ಭಾಗ ತುಕ್ಕು ಹಿಡಿದಿರಬಹುದು. ಆಗಸದಿಂದ ಬೀಸಿ ಬರುವ ಧೂಳಿನ ಕಣಗಳು ಚಂದ್ರನ ಮೇಲ್ಮೈ ತಾಕಿ ನೀರಿನ ಕಣಗಳ ಸೃಷ್ಟಿಗೆ ಕಾರಣವಾಗಿರಬಹುದು. ಭೂಮಿಯ ಮೇಲ್ಮೈ ವಾತಾವರಣದಿಂದ ಆಮ್ಲಜನಕವನ್ನು ಚಂದ್ರ ಸೆಳೆದುಕೊಂಡಿರಬಹುದು. ಇದರಿಂದ ಚಂದ್ರ ತುಕ್ಕು ಹಿಡಿದಿರಬಹುದು ಎಂದು ವಿಶ್ಲೇಷಿಸಲಾಗಿದೆ.
Advertisement