ಹೊಸ ತಲೆಮಾರಿನ ಆಕಾಶ್–ಎನ್ ಜಿ ಕ್ಷಿಪಣಿ; ಯಶಸ್ವಿ ಪರೀಕ್ಷಾರ್ಥ ಹಾರಾಟ!
ಭುವನೇಶ್ವರ: ಭಾರತ ಶುಕ್ರವಾರ ಒಡಿಶಾ ಕರಾವಳಿಯಲ್ಲಿ ಹೊಸ ತಲೆಮಾರಿನ ಆಕಾಶ್-ಎನ್ ಜಿ ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ದೇಶದ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ. ಇಂದು ಬೆಳಗ್ಗೆ 10-30 ಗಂಟೆಗೆ ಚಾಂಡಿಪುರದಿಂದ ಹೊಸ ತಲೆಮಾರಿನ ಆಕಾಶ್ –ಎನ್ ಜಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತು.
ಅತ್ಯಂತ ಕಡಿಮೆ ಎತ್ತರದಲ್ಲಿ ಹೆಚ್ಚಿನ ವೇಗದ ಮಾನವರಹಿತ ಹಾರಾಟ-ಪರೀಕ್ಷೆಯನ್ನು ನಡೆಸಲಾಯಿತು ಪರೀಕ್ಷಾರ್ಥ ಹಾರಾಟ ವೇಳೆ, ಕ್ಷಿಪಣಿಯ ಶಸ್ತ್ರಾಸ್ತ್ರ ವ್ಯವಸ್ಥೆಯಿಂದ ಗುರಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಲಾಯಿತು. ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಹೊಂದಿದೆ.
ಆಕಾಶ್-ಎನ್ಜಿ ವ್ಯವಸ್ಥೆಯು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಹೆಚ್ಚಿನ ವೇಗದ, ಚುರುಕಾದ ವೈಮಾನಿಕ ಬೆದರಿಕೆಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿದೆ. ಯಶಸ್ವಿ ಹಾರಾಟ ಪರೀಕ್ಷೆಯು ಇತರ ಪ್ರಯೋಗಗಳಿಗೆ ಹಾದಿ ಮಾಡಿಕೊಟ್ಟಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಕ್ಷಿಪಣಿಯು ದೇಶಿಯವಾಗಿ ಅಭಿವೃದ್ಧಿಪಡಿಸಲಾದ ರೇಡಿಯೋ ಫ್ರೀಕ್ವೆನ್ಸಿ ಸೀಕರ್, ಲಾಂಚರ್, ಬಹು ಕಾರ್ಯ ರಾಡಾರ್ ಮತ್ತು ಕಮಾಂಡ್, ಕಂಟ್ರೋಲ್ ಮತ್ತು ಸಂವಹನ ವ್ಯವಸ್ಥೆ ಇರುವ ಕ್ಷಿಪಣಿಯನ್ನು ಒಳಗೊಂಡಿರುವ ಸಂಪೂರ್ಣ ಶಸ್ತ್ರಾಸ್ತ್ರ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿದೆ. ಅತ್ಯಂತ ಕಡಿಮೆ ಎತ್ತರದಲ್ಲಿ ಅತಿ ವೇಗದ ಮಾನವ ರಹಿತ ವೈಮಾನಿಕ ವಾಹನವನ್ನು ತಡೆದಿದೆ ಎಂದು ಡಿಆರ್ ಡಿಒ ವಿಜ್ಞಾನಿಗಳು ಹೇಳಿದ್ದಾರೆ.
ಆಕಾಶ್-ಎನ್ ಜಿ ಭಾರತ ಮೊದಲ ಬಾರಿಗೆ ದೇಶಿಯವಾಗಿ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಈ ಯಶಸ್ಸಿನಲ್ಲಿ ಭಾಗಿಯಾದ ತಂಡವನ್ನು ಡಿಆರ್ ಡಿಒ ಮುಖ್ಯಸ್ಥ ಸಮೀರ್ ವಿ ಕಾಮತ್ ಅಭಿನಂದಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ ಡಿ ಒ, ಭಾರತೀಯ ವಾಯುಪಡೆ ಮತ್ತು ಸಂಬಂಧಿತ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಶ್ಲಾಘಿಸಿದ್ದಾರೆ. ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಹಾರಾಟದ ಮೂಲಕ ದೇಶದ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ