ಲಖನೌ: ದೇಶದ ಪ್ರತಿಷ್ಟಿತ ಐಐಟಿ ಕಾಲೇಜಿನಲ್ಲಿ ಓದುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಯ ಕನಸು ಶುಲ್ಕ ಪಾವತಿಸಲಾಗದೆ ಭಗ್ನಗೊಳ್ಳುವುದರಲ್ಲಿತ್ತು. ಆದರೆ ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಅಲಾಹಾಬಾದ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಬಡ ವಿದ್ಯಾರ್ಥಿಯ ಕಾಲೇಜು ಶುಲ್ಕವನ್ನು ತಾವೇ ಭರಿಸುವ ಮೂಲಕ ಆತನ ಕನಸಿಗೆ ರೆಕ್ಕೆ ಮೂಡಿಸಿದ್ದಾರೆ.
ಈ ಹೃದಯಸ್ಪರ್ಶಿ ಘಟನೆ ಲಖನೌನಲ್ಲಿ ನಡೆದಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಕ್ಲಿಯರ್ ಮಾಡಿದ್ದ ಸಂಸ್ಕೃತಿ ಎಂಬ ವಿದ್ಯಾರ್ಥಿನಿಗೆ ಐಐಟಿ ಯಲ್ಲಿ ಸೀಟು ಸಿಕ್ಕಿತ್ತು. ಅಕ್ಟೋಬರ್ 15ರ ಒಳಗೆ ಪ್ರವೇಶ ಶುಲ್ಕ 15,000 ರೂ.ಗಳನ್ನು ಪಾವತಿಸುವಂತೆ ಆಕೆಗೆ ತಿಳಿಸಲಾಗಿತ್ತು. ಆದರೆ ಅ ಗಡುವಿನಲ್ಲಿ ಹಣ ಹೊಂದಿಸಲು ಆಕೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ಕಾಲಾವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಳು. ವಿಚಾರಣೆ ಬಳಿಕ ಆಕೆಯ ಶುಲ್ಕವನ್ನು ನ್ಯಾಯಾಧೀಶ ಡಿ.ಕೆ ಸಿಂಗ್ ಅವರೇ ಪಾವತಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಪರಿಸ್ಥಿತಿಯನ್ನು ವಿಶೇಷ ಎಂದು ಪರಿಗಣಿಸಿ ವಿನಾಯಿತಿ ನೀಡುವಂತೆ ವಾರಾಣಸಿ ಕಾಲೇಜಿಗೆ ನಿರ್ದೇಶನ ನೀಡಿದೆ. ಒಂದು ವೇಳೆ ಆಕೆಯ ಸೀಟು ಈಗಾಗಲೇ ಭರ್ತಿಯಾಗಿದ್ದರೆ ಹೆಚ್ಚುವರಿ ಸೀಟನ್ನು ಸೃಷ್ಟಿಸಿ ಆಕೆಗೆ ಅಲಾಟ್ ಮಾಡುವಂತೆ ಸೂಚನೆ ನೀಡಿದೆ.
Advertisement