ಮೈಸೂರು: ಕೋವಿಡ್ ಸೋಂಕಿತರಿಗೆ ನೆರವಾಗಲು ಪಿಂಚಣಿ ಹಣ ದಾನ ಮಾಡಿದ 70 ವರ್ಷದ ವೃದ್ಧೆ!

ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಹಿರೇನಹಳ್ಳಿ ನಿವಾಸಿಯಾಗಿರುವ 70 ವರ್ಷದ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಕೋವಿಡ್ ಕೇರ್ ಕೇಂದ್ರದಲ್ಲಿರುವ ಸಿಬ್ಬಂದಿಗಳಿಗೆ ಆಹಾರ ನೀಡುತ್ತಿರುವ ಶಾರದಮ್ಮ
ಕೋವಿಡ್ ಕೇರ್ ಕೇಂದ್ರದಲ್ಲಿರುವ ಸಿಬ್ಬಂದಿಗಳಿಗೆ ಆಹಾರ ನೀಡುತ್ತಿರುವ ಶಾರದಮ್ಮ

ಮೈಸೂರು: ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಹಿರೇನಹಳ್ಳಿ ನಿವಾಸಿಯಾಗಿರುವ 70 ವರ್ಷದ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಕೊರೋನಾ ಸೋಂಕಿತರ ಸಂಕಷ್ಟಕ್ಕೆ ಮಿಡಿದಿರುವ 70 ವರ್ಷದ ವೃದ್ಧೆ ಶಾರದಮ್ಮ ಎಂಬುವವರು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕೆ ತಾವು ಸಂರಕ್ಷಿಸಿದ್ದ ರೂ.10,000 ಪಿಂಚಣಿ ಹಣವನ್ನು ನೀಡಿದ್ದಾರೆ. 

ತಹಶೀಲ್ದಾರ್ ಶಿವಮೂರ್ತಿಯವರಿಗೆ ಹಣವನ್ನು ನೀಡಿರುವ ಶಾರದಮ್ಮ ಅವರು, ಸೋಂಕಿತರಿಗೆ ಬಿಸ್ಕೆಟ್ ಸೇರಿದಂತೆ ಇನ್ನಿತರೆ ತಿನಿಸುಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ವೃದ್ಧೆಯೊಬ್ಬರ ಈ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಶಾರದಮ್ಮ ಅವರ ಉದಾರತಾ ಕಾರ್ಯ ಇದು ಮೊದಲೇನಲ್ಲ. ಕೊರೋನಾ ಮೊದಲನೇ ಅಲೆ ವೇಳೆಯಲ್ಲಿಯೂ ರೂ.10,000 ಹಣವನ್ನು ಶಿವಮೂರ್ತಿಯವರಿಗೆ ನೀಡಿದ್ದರು, ಸೋಂಕಿತರಿಗೆ ಸಹಾಯ ಮಾಡುವಂತೆ ತಿಳಿಸಿದ್ದರು. ಇದಲ್ಲದೆ, ಶೆಟ್ಟಿನಾಯಕನಹಳ್ಳಿಯಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕೆ ತೆರಳಿ 200 ಮಂದಿ ರೋಗಿಗಳಿಗೆ ಸ್ನ್ಯಾಕ್ಸ್, ಜ್ಯೂಸ್ ಬಾಟಲ್ ಗಳನ್ನು ನೀಡಿ ಶೀಘ್ರಗತಿಯಲ್ಲಿ ಗುಣಮುಖರಾಗುವಂತೆ ಆಶಿಸಿದ್ದರು. 

ನಾನು ಚಿಕ್ಕವಳಿದ್ದಾಗಿನಿಂದಲೂ ಸಹಾಯ ಮಾಡುವ ಮನೋಭಾವ ಬೆಳೆದುಕೊಂಡು ಬಂದಿದೆ. ನನ್ನ ಪೋಷಕರು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಹೇಳಿಕೊಂಡಿಲ್ಲ. ಅವರ ಹೇಳಿಕೊಟ್ಟಂತೆಯೇ ನಾನು ನಡೆದುಕೊಂಡು ಬರುತ್ತಿದ್ದೇನೆ. ಪ್ರೀತಿ ಹಾಗೂ ಸೇವಾ ಮನೋಭಾವ ಜನರ ಮನಸ್ಸನ್ನು ಗೆಲ್ಲಲಿದೆ ಎಂದು ಶಾರದಮ್ಮ ಅವರು ಹೇಳಿದ್ದಾರೆ. 

ಶಾರದಮ್ಮ ಅವರ ಉದಾರತಾ ಮನಸ್ಸನ್ನು ತಹಶೀಲ್ದಾರ್ ಅವರು ಶ್ಲಾಘಿಸಿದ್ದಾರೆ. ಶಾರದಮ್ಮ ಅವರು ಇತರರಿಗೆ ಮಾದರಿಯಾಗಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಇತರರೂ ಕೂಡ ನೆರವು ನೀಡಬೇಕು. ಕೊರೋನಾ ಸರಪಳಿ ಮುರಿಯಲು ಪ್ರತೀಯೊಬ್ಬರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com