ಕಾರ್ಮಿಕರು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತರು: ನೆರವಿಗೆ ಧಾವಿಸಿ ಭತ್ತದ ನಾಟಿ ಮಾಡಿದ ಅರಣ್ಯ ಸಿಬ್ಬಂದಿ!

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಅರಣ್ಯ ಸಿಬ್ಬಂದಿಗಳು ರೈತ ಕುಟುಂಬಗಳಿಗೆ ನೆರವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಭತ್ತ ನಾಟಿ ಮಾಡುತ್ತಿರುವ ಅರಣ್ಯ ಸಿಬ್ಬಂದಿ
ಭತ್ತ ನಾಟಿ ಮಾಡುತ್ತಿರುವ ಅರಣ್ಯ ಸಿಬ್ಬಂದಿ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಅರಣ್ಯ ಸಿಬ್ಬಂದಿಗಳು ರೈತ ಕುಟುಂಬಗಳಿಗೆ ನೆರವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ಮೈನೊಲ್ಡ್ ಮತ್ತು ಕಲಸೈ ಗ್ರಾಮದಲ್ಲಿರುವ ಎರಡು ಕುಟುಂಬಗಳಿಗೆ ಕುಂಬಾರವಾಡ ವನ್ಯಜೀವಿ ವಿಭಾಗದ 20 ಮಂದಿ ಅರಣ್ಯ ಸಿಬ್ಬಂದಿಗಳು ನೆರವಾಗಿದ್ದು ಇಡೀ ದಿನ ಕೃಷಿ ಚಟುವಟಿಕೆ ಕಾರ್ಯಗಳನ್ನು ಮಾಡಿದ್ದಾರೆ. 

ಕರ್ನಾಟಕದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಜೋಯಿಡಾ ತಾಲೂಕು ಗಮನಾರ್ಹ ಕೊಡುಗೆ ನೀಡುತ್ತಿದೆ. ಹಲವಾರು ಅಪರೂಪದ ಅಕ್ಕಿಯನ್ನು ಇಲ್ಲಿನ ಭೂಮಿಯಲ್ಲಿ ಬೆಳೆಯಲಾಗುತ್ತದೆ. ತಾಲೂಕಿನಲ್ಲಿನ ಹೆಚ್ಚಿನ ಕೃಷಿ ಭೂಮಿಯು ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತ ಇರುವುದರಿಂದ ಇಲ್ಲಿ ಕೂಲಿ ಕಾರ್ಮಿಕರು ಸಿಗುವುದು ರೈತರಿಗೆ ಕಷ್ಟಕರವಾಗಿ ಹೋಗಿದೆ. 

ಸ್ಥಳೀಯರೊಂದಿಗೆ ಉತ್ತಮ ಸಂಬಂಧ ಹೊಂದುವ ಸಲುವಾಗಿ ಇಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇಲ್ಲಿನ ರೈತರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಕೆಲವರು ಅವರ ಕೃಷಿ ಭೂಮಿ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಇತರರಿಗೆ ನೆರವಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನೆರವಾಗಲು ನಿರ್ಧರಿಸಿದ್ದೆವು. ಇಡೀ ದಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸ್ಥಳೀಯರೊಂದಿಗೆ ಕಾಲ ಕಳೆಯುತ್ತಿದ್ದೇವೆ. ಇಲ್ಲಿನ ಜನರು ಅಗ್ನಿ ಅವಘಡಗಳು ಸಂಭವಿಸಿದಾಗ ನಮ್ಮ ನೆರವಿಗೆ ಧಾವಿಸುತ್ತಾರೆ. ಹೀಗಾಗಿ ಅವರ ಸಂಕಷ್ಟಕ್ಕೆ ನಾವು ನೆರವಾಗಿದ್ದೇವೆಂದು ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ್ ಅವರು ಹೇಳಿದ್ದಾರೆ. 

ಕುಂಬಾರವಾಡ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಸ್ಥಳೀಯ ರೈತರಿಗೆ ನೆರವಾಗುವುದಷ್ಟೇ ಅಲ್ಲದೆ, ಗ್ರಾಮಗಳಲ್ಲಿ ಆಯೋಜಿಸುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಕ್ರಿಕೆಟ್ ಸೇರಿದಂತೆ ಇತರೆ ಪಂದ್ಯಾವಳಿಗಳಲ್ಲಿ ಬಹುಮಾನಗಳನ್ನು ಪ್ರಾಯೋಜಿಸುತ್ತವೆ. ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಜನರಿಗೆ ಆಹಾರ ನೀಡುವುದು, ಜೋಯಿಡಾ ತಾಲ್ಲೂಕಿನ ವಾರ್ಷಿಕ ಜಾತ್ರೆಗೆ ಆಗಮಿಸಿ ಅತ್ಯುತ್ತಮವಾಗಿ ಅಲಂಕರಿಸಿದ ಬಂಡಿಗಳಿಗೆ ಬಹುಮಾನಗಳನ್ನೂ ನೀಡುತ್ತದೆ ಎಂದು ತಿಳಿದುಬಂದಿದೆ.

ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಲವಾರು ಸಣ್ಣ ಕುಗ್ರಾಮಗಳಿದ್ದು, ಅಲ್ಲಿನ ಜನರು ಕೃಷಿ ಚಟುವಟಿಕೆಗಳನ್ನು ಅವಲಂಬಿಸಿದ್ದಾರೆ. ಭತ್ತ, ಗೆಡ್ಡೆಗಳು ಮತ್ತು ತರಕಾರಿಗಳನ್ನು ಬೆಳೆಯುವುದು ಅವರ ಜೀವನದ ಮುಖ್ಯ ವಿಧಾನವಾಗಿದೆ. ಸುಗ್ಗಿ ಬಳಿಕ ಹೊಲಗಳಲ್ಲಿ ಪುರುಷರು ಕೆಲಸ ಮಾಡಿದರೆ, ಮಹಿಳೆಯರು ತಾಲ್ಲೂಕಿನಲ್ಲಿ ಮನೆಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ. 

ಅರಣ್ಯ ಇಲಾಖೆಯಿಂದ ಸಹಾಯ ಪಡೆಯುವುದುಕೊಂಡಿರುವುದು ಬಹಳ ಸಂತಸ ತಂದಿದೆ. ತೋಟ ಮತ್ತು ಸುಗ್ಗಿಯ ಕಾಲದಲ್ಲಿ ನಾವು ಬೇರೆ ಬೇರೆ ಹೊಲಗಳಿಗೆ ಕೆಲಸಕ್ಕೆ ಹೋಗುತ್ತೇವೆ. ಕೆಲಸ ಪೂರ್ಣಗೊಂಡ ಬಳಿಕ ಆ ಹೊಲಗಳ ಮಾಲೀಕರು ನಮ್ಮ ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ, ಈ ವರ್ಷ ಜೂನ್ ಮತ್ತು ಜುಲೈನಲ್ಲಿ ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿದ್ದರಿಂದ ಸೂಕ್ತ ಸಮಯಕ್ಕೆ ಭತ್ತ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಕೆಲಸಕ್ಕೆ ಕಾರ್ಮಿಕರು ಸಿಗಲಿಲ್ಲ ರೈತರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com