ಎನ್‌ಜಿಒಗಳ ಪರಿಶ್ರಮಕ್ಕೆ ಸಿಕ್ಕ ಫಲ: ವಿಶಿಷ್ಟ ಉಡುಪಿ ಸೀರೆಗೆ ಪುನಶ್ಚೇತನ!

ಭಾರತೀಯ ಮಹಿಳೆಯರಿಗೆ ಆಭರಣಗಳು ಎಷ್ಟು ಅಮೂಲ್ಯವೋ, ಸೀರೆಗಳೂ ಅಷ್ಟೇ ಅಮೂಲ್ಯ ವಸ್ತುವಾಗಿದೆ. ಸಾಂಪ್ರದಾಯಿಕ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳು, ಪ್ರಮುಖ ಕಾರ್ಯಕ್ರಮಗಳಲ್ಲಿ ಸೀರೆಗಳನ್ನು ಉಟ್ಟು ಸಂಭ್ರಮಿಸುತ್ತಾರೆ.
ಜಿಲ್ಲಾ ಸಂಪನ್ಮೂಲ ಕೇಂದ್ರ ಮಣಿಪಾಲದಲ್ಲಿ ಉಡುಪಿ ಸೀರೆ ನೇಯುವುದನ್ನು ಕಲಿಯುತ್ತಿರುವ ಮಹಿಳೆಯರು.
ಜಿಲ್ಲಾ ಸಂಪನ್ಮೂಲ ಕೇಂದ್ರ ಮಣಿಪಾಲದಲ್ಲಿ ಉಡುಪಿ ಸೀರೆ ನೇಯುವುದನ್ನು ಕಲಿಯುತ್ತಿರುವ ಮಹಿಳೆಯರು.

ಉಡುಪಿ: ಭಾರತೀಯ ಮಹಿಳೆಯರಿಗೆ ಆಭರಣಗಳು ಎಷ್ಟು ಅಮೂಲ್ಯವೋ, ಸೀರೆಗಳೂ ಅಷ್ಟೇ ಅಮೂಲ್ಯ ವಸ್ತುವಾಗಿದೆ. ಸಾಂಪ್ರದಾಯಿಕ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳು, ಪ್ರಮುಖ ಕಾರ್ಯಕ್ರಮಗಳಲ್ಲಿ ಸೀರೆಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ನಮ್ಮ ದೇಶದಲ್ಲಿ ನಾನಾ ರೀತಿಯ ಸೀರೆಗಳಿದ್ದು, ಇವುಗಳಲ್ಲಿ ಕೈಮಗ್ಗದಲ್ಲಿ ನೇಯ್ದ ಉಡುಪಿ ಸೀರೆಗಳು ಸಾಕಷ್ಟು ಹೆಸರು ಮಾಡಿದೆ. ವೈವಿಧ್ಯಮಯ ಸೀರೆಗಳ ನಡುವೆ ಈ ಸೀರೆ ಎದ್ದು ಕಾಣುತ್ತದೆ. ಈ ಸೀರೆಗಳು ಪ್ರಾದೇಶಿಕ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಾರುತ್ತವೆ.

ಉಡುಪಿ ಸೀರೆ ಕರ್ನಾಟಕ ರಾಜ್ಯದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗದಲ್ಲಿ ನೇಕಾರರು ಕೈಯಲ್ಲಿ ನೇಯ್ದ ಸೀರೆಯ ಹೆಸರಾಗಿದೆ.

ಈ ಸೀರೆಯು ಭಾರತದ ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನೇಕಾರ ಜನಾಂಗದವರು ಜೀವನಾಧಾರವಾಗಿ ನಡೆಸಿಕೊಂಡು ಬಂದ ಕುಲ ಕಸುಬಾಗಿದೆ. ಪ್ರಮುಖವಾಗಿ ಶೆಟ್ಟಿಗಾರ್ ಎಂಬ ಜಾತಿಗೆ ಸೇರಿದ ಜನರು, ಈ ಕೆಲಸದಲ್ಲಿ ಪರಂಪರಾಗತವಾಗಿ ತೊಡಗಿಸಿಕೊಂಡಿದ್ದರು.

ಮಹಾತ್ಮ ಗಾಂಧಿಜಿಯವರ ಸಹಕಾರ ಚಳುವಳಿಯಿಂದ ಪ್ರೇರಿತರಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೇಕಾರರು ತಮ್ಮದೇ ನೇಕಾರರ ಸಂಘಗಳನ್ನು ಸ್ಥಾಪಿಸಿ ಅದರ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು.

ಬಾಸೆಲ್ ಮಿಷನಿನ ರೆ.ಮೆರ್ಟ್ಜ್ ಎಂಬುವವರಿಂದ 1844 ರಲ್ಲಿ ನೇಕಾರಿಕೆ ಆರಂಭವಾಯಿತು. ಆ ಕಾಲದಲ್ಲಿ ಜೇಡರ, ಸಾಲಿಗ, ಬಿಲ್ಲವ, ಬಂಟ, ಮುಸ್ಲಿಂ ಮತ್ತು ಕ್ರಿಶ್ಚನರೂ ನೇಯುವ ಕೆಲಸ ಮಾಡುತಿದ್ದರು.

ಭಾಷೆಲ್ ಮಿಷನ್ ರವರು ಪರಿಚಯಿಸಿದ ಮಲಬಾರ್ ಫ್ರೇಮ್ ಎಂದು ಕರೆಯುವ ಮಗ್ಗದಲ್ಲಿ ಹತ್ತಿಯ ನೂಲಿನಿಂದ ಸಾದಾ ವಿನ್ಯಾಸದಲ್ಲಿ ಅಥವಾ ಸಣ್ಣ ಸಣ್ಣ ಚೌಕುಳಿ ಯ ವಿನ್ಯಾಸದಲ್ಲಿ ಈ ಸೀರೆಯನ್ನು ತಯಾರಿಸಲಾಗುತ್ತದೆ.

ಬಾಸೆಲ್ ಮಿಷನ್ ರವರು 1844 ರಲ್ಲಿ ಕೈ ಮಗ್ಗದ ಗಿರಣಿಗಳನ್ನು ಸ್ಥಾಪಿಸಿದರು. ಜರ್ಮನಿಯಿಂದ ಬಂದ ತಾಂತ್ರಿಕ ಪರಿಣತ ಮುಲ್ಲರ್ ಎಂಬವರು ನಿಯಂತ್ರಕ ಚಕ್ರ (ಫ್ಲೈ ವೀಲ್) ಗಳನ್ನೂ ಅಳವಡಿಸಿದರು. ಹತ್ತಿಯಿಂದ ತಯಾರಿಸಿದ ನೂಲಿನಿಂದ 40, 60 ಹಾಗೂ 80 ಸಂಖ್ಯೆಯ ನೂಲಿನ ಸೀರೆಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಇದರಿಂದ ಸೀರೆಗಳು ಹಾಳಾಗದೆ, ಹಲವು ವರ್ಷಗಳ ಬಾಕ ಬಾಳಿಕೆ ಬರುವಂತೆ ಮಾಡಲಾಗುತ್ತದೆ. ಈ ಸೀರೆಗಳಿಗೆ ಅಂದಿನ ದಿನಗಳಲ್ಲಿ ಸಾಕಷ್ಟು ಬೇಡಿಕೆಗಳಿತ್ತು. ಆದರೆ, ಪವರ್ ಲೂಮ್ ಗಳು ಬಂದ ಬಳಿಕ ಈ ಸೀರೆಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ನೇಕಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು.

ಆದರೆ, ಸೀರೆಗಳಿಗೆ ಪುನಶ್ಚೇನ ನೀಡಲು ವಿವಿಧ ಎನ್‌ಜಿಒಗಳು ಸಾಥ್ ನೀಡಿದವು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೀರೆಗಳಿಗೆ ಬೇಡಿಕೆ ಹೆಚ್ಚಿಸಲು ಸಾಕಷ್ಟು ಪರಿಶ್ರಮ ಮಟ್ಟವು. ಈಗಲೂ ಈ ಪರಿಶ್ರಮಗಳು ಮುಂದುವರೆದಿವೆ.

ಯುವಕರು, ಮಹಿಳೆಯರಿಗೆ ಕೈಮಗ್ಗ ಬಳಸಲು ತರಬೇತಿ ನೀಡಿದ್ದೇ ಆದರೆ, ಉಡುಪಿ ಸೀರೆಗಳಿಗೆ ಮರಳಿ ಜೀವ ತುಂಬಬಹುದೆಂದು ಎನ್'ಜಿಒಗಳು ಯುವಕರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ.

ಉಡುಪಿ ಜಿಲ್ಲಾ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳು ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನ ನೆರವಿನೊಂದಿಗೆ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 25 ಸದಸ್ಯರ ಬ್ಯಾಚ್‌ಗೆ ತರಬೇತಿ ನೀಡಿದೆ.

ಇನ್ನು ಮೂರು ತಿಂಗಳ ತರಬೇತಿ ಬಾಕಿ ಉಳಿದಿದ್ದು, ತರಬೇತಿ ಪಡೆದವರು ತಮ್ಮ ಕೆಲಸವನ್ನು ಕೈಗೆತ್ತಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಪ್ರತಿಷ್ಠಾನವು ಉಡುಪಿ ಮತ್ತು ಸುತ್ತಮುತ್ತಲಿನ ಆರು ಕೈಮಗ್ಗಗಳನ್ನು ತರಬೇತಿಗಾಗಿ ತರಿಸಿಕೊಂಡಿದೆ.

ಉಡುಪಿಯ ಪ್ರಶಿಕ್ಷಣಾರ್ಥಿ ಜಯಲಕ್ಷ್ಮಿ ಅವರು ಮಾತನಾಡಿ, ಕೈಮಗ್ಗವನ್ನು ಹೇಗೆ ನಿರ್ವಹಿಸಬೇಕು ಎಂಬುದು ನನಗೆ ತಿಳಿದಿಲ್ಲ, ಆದರೆ, ತರಬೇತಿ ಬಳಿಕ ಈ ಬಗ್ಗೆ ಸ್ವಲ್ಪಮಟ್ಟಿಗೆ ಕಲಿತು ಕೊಂಡಿದ್ದೇನೆ. ಕೈಮಗ್ಗವನ್ನು ನನ್ನ ಜೀವನೋಪಾಯವಾಗಿ ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದೇನೆಂದು ಹೇಳಿದ್ದಾರೆ.

ಇದೇ ರೀತಿ ಬ್ರಹ್ಮಾವರದ ನೇಕಾರ ಮಂಜುನಾಥ್ ಅವರ ಮಗಳು ಮತ್ತು ಸೊಸೆ ತರಬೇತಿ ಪಡೆದುಕೊಳ್ಳುತ್ತಿದ್ದು,  “ನಾನು 40 ವರ್ಷಗಳಿಂದ ಕೈಮಗ್ಗವನ್ನು ನಿರ್ವಹಿಸುತ್ತಿದ್ದೇನೆ. ಉಡುಪಿ ಸೀರೆಗಳನ್ನು ನೇಯುತ್ತಿದ್ದೇನೆ. ನನ್ನ ಕುಟುಂಬದ ಇಬ್ಬರು ಸದಸ್ಯರು ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ನನಗೆ ಖುಷಿ ತಂದಿದೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ.

ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಮಾತನಾಡಿ, ಯಾವುದೇ ಅನುಭವವಿಲ್ಲದ ಕುಟುಂಬಗಳಿಂದ ಬಂದವರು ತರಬೇತಿ ಪಡೆಯುತ್ತಿದ್ದಾರೆ. ಆದರೆ, ಕಲಿಯುವ ವಿಶ್ವಾಸದಲ್ಲಿದ್ದಾರೆ. ತರಬೇತಿ ಪಡೆದುಕೊಳ್ಳುತ್ತಿರುವವರಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನವಾಗಿ ರೂ.10,000 ಹಾಗೂ ಬಸ್ ಪ್ರಯಾಣ ವೆಚ್ಚವಾಗಿ ರೂ.2,000 ನೀಡಲಾಗುತ್ತಿದೆ. ವರ್ಷಾಂತ್ಯದ ವೇಳೆಗೆ ತಲಾ 25 ಸದಸ್ಯರಿರುವ ಮೂರು ಬ್ಯಾಚ್‌ಗಳಿಗೆ ತರಬೇತಿ ನೀಡಲಾಗುವುದು, ಇದು ಒಟ್ಟು ತರಬೇತಿ ಪಡೆದ ನೇಕಾರರ ಸಂಖ್ಯೆಯನ್ನು 100 ಕ್ಕೆ ಕೊಂಡೊಯ್ಯಲಿದೆ. “ಉಡುಪಿ ಜಿಲ್ಲೆಯಲ್ಲಿ 20 ವರ್ಷಗಳ ಹಿಂದೆ ಸುಮಾರು 1,500 ಕೈಮಗ್ಗ ನೇಕಾರರಿದ್ದರು. ಕಡಿಮೆ ಆದಾಯವಿತ್ತು. ಇದರಿಂದ ನೇಕಾರರ ಸಂಖ್ಯೆ ಕುಸಿಯುವ ಆತಂಕವಿತ್ತು. ಹಾಗಾಗಿ, ಸಂಪ್ರದಾಯ ಪುನರುಜ್ಜೀವನಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

2018 ರಲ್ಲಿ ರೂಪುಗೊಂಡ ಕದಿಕೆ ಟ್ರಸ್ಟ್, ಕಾರ್ಕಳ ಉಡುಪಿ ಸೀರೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಈ ಟ್ರಸ್ಟ್ ಮೊದಲಿಗೆ ನೇಕಾರನ ಹೆಸರು ಮತ್ತು ಚಿತ್ರವನ್ನು ಒಳಗೊಂಡಿರುವ ಆಕರ್ಷಕ ಲೋಗೋದೊಂದಿಗೆ ಸೀರೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಈ ಉಪಕ್ರಮವು ಸೀರೆಗಳಿಗೆ ಮಾರುಕಟ್ಟೆಯಲ್ಲಿ ಮರಳಿ ಬೇಡಿಕೆ ಹೆಚ್ಚಾಗಲು ಸಹಾಯ ಮಾಡಿತು.

ಈ ಟ್ರಸ್ಟ್'ನ ಅಧ್ಯಕ್ಷೆ ಮಮತಾ ರೈ ಅವರು ಹಲವಾರು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಲಿಮಿಟೆಡ್, ಕಿನ್ನಿಗೋಳಿ, 2020 ರಲ್ಲಿ ಉಡುಪಿ ಸೀರೆಗಳಿಗೆ ಜಿಐ ಟ್ಯಾಗ್‌ ಪಡೆದ ಮೊದಲ ಸಂಘವಾಗಿ ಹೊರಹೊಮ್ಮಿತು. ಇನ್ನೂ ನಾಲ್ಕು ಸಂಘಗಳಾದ ಪಡುಪಣಂಬೂರು ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಲಿಮಿಟೆಡ್, ಹಳೆಯಂಗಡಿ; ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಲಿಮಿಟೆಡ್, ಉಡುಪಿ; ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಲಿಮಿಟೆಡ್, ಆದಿ-ಉಡುಪಿ ಮತ್ತು ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಲಿಮಿಟೆಡ್, ಬ್ರಹ್ಮಾವರ ಕಳೆದ ವರ್ಷ ಜಿಐ ದೃಢೀಕರಣ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಈ ಸೊಸೈಟಿಗಳು ಜಿಐ ಟ್ಯಾಗ್ ಪಡೆದುಕೊಳ್ಳುವಂತೆ ಮಾಡಲು ಟ್ರಸ್ಟ್ ಸಾಕಷ್ಟು ಪರಿಶ್ರಮ ಪಟ್ಟಿದೆ.

ನೇಕಾರರಿಗೆ ಉತ್ತಮ ಸಂಭಾವನೆ ಮತ್ತು ಮನ್ನಣೆ ನೀಡುವುದು ಮುಖ್ಯವಾಗಿತ್ತು. ಟ್ರಸ್ಟ್ ವಿವಿಧ ಸಂದರ್ಭಗಳಲ್ಲಿ ನೇಕಾರರನ್ನು ಗೌರವಿಸಿದೆ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಿಂದ ಹಣಕಾಸಿನ ನೆರವಿನೊಂದಿಗೆ ನೇಕಾರರಿಗೆ ತರಬೇತಿ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದೆ. ಇದರಿಂದಾಗಿ ಫಲಿತಾಂಶಗಳು ಕೂಡ ಉತ್ತಮವಾಗಿ ಬರತೊಡಗಿದೆ. ಎರಡು ದಶಕಗಳಲ್ಲಿ ಸಾಕಷ್ಟು ಯುವ ನೇಕಾರರು ವೃತ್ತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ಇಂದ್ರಾಳಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com