ಮಧ್ಯ ಪ್ರದೇಶ: ಅಪರೂಪದ 150 ವಿಧದ ಸಿರಿಧಾನ್ಯ ಬೀಜಗಳನ್ನು ಸಂಗ್ರಹಿಸಿದ ದಿಂಡೋರಿ ಜಿಲ್ಲೆಯ ಬುಡಕಟ್ಟು ಮಹಿಳೆ
ಭೋಪಾಲ್: ಸಿರಿಧಾನ್ಯಗಳಿಗಾಗಿ ಭಾರತವನ್ನು ಕೃಷಿ ಮತ್ತು ಸಂಶೋಧನೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ‘ಶ್ರೀ ಅನ್ನ’ ಎಂದು ಮರುನಾಮಕರಣ ಮಾಡಲಾಗಿದೆ. ಇದಕ್ಕಾಗಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರಮಿಸುತ್ತಿರುವ ಸಮಯದಲ್ಲಿ, ಬುಡಕಟ್ಟು ಪ್ರಾಬಲ್ಯದ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ 27 ವರ್ಷದ ಬೈಗಾ ಬುಡಕಟ್ಟು ಮಹಿಳೆ ಲಹರಿ ಬಾಯಿ ಅವರು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದಲ್ಲಿ ನಿಜವಾದ ಬ್ರಾಂಡ್ ಅಂಬಾಸಿಡರ್ ಆಗಿ ಹೊರಹೊಮ್ಮಿದ್ದಾರೆ.
ಸಿಲ್ಪಾಡಿ ಗ್ರಾಮದ ಬೈಗಾ ಬುಡಕಟ್ಟು ಜನಾಂಗದವರಾದ ಲಹರಿ ಬಾಯಿ, ತನ್ನ ಹೆತ್ತವರೊಂದಿಗೆ ಎರಡು ಕೋಣೆಗಳ ಇಂದಿರಾ ಆವಾಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಒಂದು ಕೋಣೆಯನ್ನು ಲಿವಿಂಗ್ ರೂಮ್ ಮತ್ತು ಅಡುಗೆಮನೆಯಾಗಿ ಕಾರ್ಯನಿರ್ವಹಿಸಿದರೆ, ಇನ್ನೊಂದು ಸಿರಿಧಾನ್ಯ ಬೀಜಗಳ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಇದರಲ್ಲಿ ಕೊಡೋ, ಕುಟ್ಕಿ, ಸಾನ್ವಾ, ಮಾಧಿಯಾ, ಸಲ್ಹಾರ್ ಮತ್ತು ಕಾಗ್ ಬೆಳೆಗಳನ್ನು ಒಳಗೊಂಡಂತೆ ಸುಮಾರು 150-ಕ್ಕೂ ಹೆಚ್ಚು ಅಪರೂಪದ ಸಿರಿಧಾನ್ಯ ಬೀಜಗಳನ್ನು ಸಂರಕ್ಷಿಸಲಾಗಿದೆ.
ಈ ಬೀಜಗಳನ್ನು ಲಹರಿ ಬಾಯಿ ತಮ್ಮ ಕೃಷಿ ಜಮೀನಿನ ಒಂದು ಭಾಗದಲ್ಲಿ ಬಿತ್ತಿದ್ದಾರೆ. ಬಳಿಕ, ಹೆಚ್ಚಾದ ಬೀಜದ ತಳಿಗಳನ್ನು ಅವರ ಹಳ್ಳಿಯ ರೈತರಿಗೆ ಮತ್ತು ಇತರ 15-20 ಹಳ್ಳಿಗಳಲ್ಲಿ ಉಚಿತವಾಗಿ ವಿತರಿಸುತ್ತಿದ್ದಾರೆ. ಇದು 54 ಹಳ್ಳಿಗಳನ್ನೊಳಗೊಂಡ ಪ್ರಬಲ ಬೈಕಾ ಚಾಕ್ (ಬೈಗಾ ಬುಡಕಟ್ಟು ಜನಸಂಖ್ಯೆಯ ಸ್ಥಳೀಯ ಹಳ್ಳಿಗಳು) ಭಾಗವಾಗಿದೆ. ಪ್ರತಿಯಾಗಿ, ರೈತರು ತಮ್ಮ ಉತ್ಪನ್ನದ ಸ್ವಲ್ಪ ಭಾಗವನ್ನು ಆಕೆಗೆ ಉಡುಗೊರೆಯಾಗಿ ನೀಡುತ್ತಾರೆ.
ಇದನ್ನೂ ಓದಿ: ಆರೋಗ್ಯಕ್ಕಾಗಿ ಸಿರಿಧಾನ್ಯಗಳು (ಕುಶಲವೇ ಕ್ಷೇಮವೇ)
ಇದು ದಶಕದ ಸುದೀರ್ಘ ಪ್ರಯಾಣ. ಲಹರಿ ಹದಿಹರೆಯದವಳಾಗಿದ್ದಾಗ ತನ್ನ ಸಮುದಾಯದಿಂದ ಹೇಗೆ ಅಪಹಾಸ್ಯಕ್ಕೊಳಗಾಗಿದ್ದಳು ಎಂದು ನೆನಪಿಸಿಕೊಳ್ಳುತ್ತಾರೆ. 'ಜನರು ನನ್ನನ್ನು ಅಪಹಾಸ್ಯ ಮಾಡಿದರು ಮತ್ತು ಆಗಾಗ್ಗೆ ನನ್ನನ್ನು ಓಡಿಸಿದರು. ಆದರೆ, ನನಗೆ ಕೇವಲ ಎರಡು ಗುರಿಗಳಿವೆ. ಒಂದು ಮದುವೆ ಹಾಗೂ ಪೋಷಕರಿಗೆ ಜೀವನಪೂರ್ತಿ ಸೇವೆ ಸಲ್ಲಿಸುವುದು ಮತ್ತು ಎರಡನೆಯದು ಸಿರಿಧಾನ್ಯ ಬೀಜಗಳನ್ನು ಸಂರಕ್ಷಿಸುವುದು ಮತ್ತು ಅದರ ಕೃಷಿಯನ್ನು ಉತ್ತೇಜಿಸುವುದು. ಈಗ ಯಾರೂ ನನ್ನನ್ನು ಅವಮಾನಿಸುವುದಿಲ್ಲ' ಎಂದು ಹೇಳುತ್ತಾರೆ.
ಜೋಧೂರ್ ಮೂಲದ ಐಸಿಎಆರ್ನ ಅಪೇಕ್ಷಿತ 10 ಲಕ್ಷ ರೂ. ವಿದ್ಯಾರ್ಥಿವೇತನಕ್ಕೆ ಲಹರಿಯನ್ನು (ಶಾಲೆಗೆ ಹೋಗದ) ನಾಮನಿರ್ದೇಶನ ಮಾಡಿದ ಡಿಂಡೋರಿ ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ ಮಾತನಾಡಿ, 'ಅವರು ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅವರು ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಸಾಧ್ಯವಾಗುತ್ತದೆ' ಎಂದು ಹೇಳಿದರು.