ಕಾಡಿನ ಮೇಲೆ ಅತ್ಯಂತ ಪ್ರೀತಿ, ಕಾಳಜಿ: ಜಾರ್ಖಂಡ್ ರಾಜ್ಯದ ಈ ಗ್ರಾಮಸ್ಥರಿಗೆ ರಸ್ತೆಯೇ ಬೇಡವಂತೆ!
ಕಾಡಿನ ಮೇಲಿನ ಒಂದು ರೀತಿಯ ಪ್ರೀತಿಯಲ್ಲಿ, ರಸ್ತೆಯ ಕೊರತೆಯಿದ್ದರೂ ಯಾವುದೇ ವಾಹನ ತಲುಪಲು ಸಾಧ್ಯವಿಲ್ಲದಿದ್ದರೂ ಕೂಡ ಹೊರ ಪ್ರಪಂಚದಿಂದ ಬಹುತೇಕ ಪ್ರತ್ಯೇಕವಾಗಿರುವ ಜಾರ್ಖಂಡ್ ರಾಜ್ಯದ ಸಿಮ್ಡೆಗಾದ ಚಿಮ್ಟಿಘಾಟಿ ಗ್ರಾಮದ ಆದಿವಾಸಿಗಳು ಎರಡು ಬಾರಿ ರಸ್ತೆ ನಿರ್ಮಿಸುತ್ತೇವೆ ಎಂದು ಪ್ರಸ್ತಾಪ ಬಂದರೂ ನಿರಾಕರಿಸಿದ್ದಾರೆ.
Published: 22nd September 2023 02:27 PM | Last Updated: 22nd September 2023 03:17 PM | A+A A-

ಸಿಮ್ಡೆಗಾದ ಚಿಮ್ಟಿಘಾಟಿ ಗ್ರಾಮದ ಆದಿವಾಸಿಗಳು ಬೆಟ್ಟವನ್ನು ದಾಟಲು ತಮ್ಮ ಹೆಗಲ ಮೇಲೆ ಸೈಕಲ್ಗಳನ್ನು ಹೊತ್ತು ಮನೆಗೆ ತಲುಪುತ್ತಾರೆ
ರಾಂಚಿ: ಪರಿಸರ,vಕಾಡಿನ ಮೇಲೆ ಹಲವರು ಹಲವು ರೀತಿಯಲ್ಲಿ ಪ್ರೀತಿ, ಕಾಳಜಿ ವ್ಯಕ್ತಪಡಿಸುತ್ತಾರೆ. ಇಲ್ಲಿ ಕಾಡಿನ ಮೇಲಿನ ಒಂದು ರೀತಿಯ ಪ್ರೀತಿಯಲ್ಲಿ, ರಸ್ತೆಯ ಕೊರತೆಯಿದ್ದರೂ ಯಾವುದೇ ವಾಹನ ತಲುಪಲು ಸಾಧ್ಯವಿಲ್ಲದಿದ್ದರೂ ಕೂಡ ಹೊರ ಪ್ರಪಂಚದಿಂದ ಬಹುತೇಕ ಪ್ರತ್ಯೇಕವಾಗಿರುವ ಜಾರ್ಖಂಡ್ ರಾಜ್ಯದ ಸಿಮ್ಡೆಗಾದ ಚಿಮ್ಟಿಘಾಟಿ ಗ್ರಾಮದ ಆದಿವಾಸಿಗಳು ಎರಡು ಬಾರಿ ರಸ್ತೆ ನಿರ್ಮಿಸುತ್ತೇವೆ ಎಂದು ಪ್ರಸ್ತಾಪ ಬಂದರೂ ನಿರಾಕರಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ರಸ್ತೆ ನಿರ್ಮಿಸಿದರೆ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳು ಗ್ರಾಮದ ಪಕ್ಕದಲ್ಲಿರುವ ಕಾಡಿಗೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗಿಸುತ್ತದೆ, ಇದರಿಂದಾಗಿ ಮರಗಳನ್ನು ಮನಬಂದಂತೆ ಕಡಿಯುವುದು ಗ್ರಾಮದ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಹಾಳಾಗುತ್ತದೆ.
ಹಳ್ಳಿಯಲ್ಲಿ ವಾಸಿಸುವ ಆದಿವಾಸಿಗಳು ತಮ್ಮ ಪೂರ್ವಜರು ನೈಸರ್ಗಿಕ ಸೌಂದರ್ಯವಾದ ಕಾಡನ್ನು ಹಾಗೆಯೇ ಉಳಿಸಿಕೊಳ್ಳಲು ಅಲ್ಲಿ ನೆಲೆಸದೆ ಪ್ರದೇಶವನ್ನು ತೊರೆದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ರಸ್ತೆಯ ಕೊರತೆಯಿಂದಾಗಿ, ಕೊಳವೆ ಬಾವಿ, ವಿದ್ಯುತ್, ಆರೋಗ್ಯ ಸೌಲಭ್ಯಗಳಿಲ್ಲದ ಕಾರಣ ಮೂಲ ಸೌಕರ್ಯಗಳು ಸಹ ಗ್ರಾಮಕ್ಕೆ ತಲುಪುವುದಿಲ್ಲ. ಗ್ರಾಮಸ್ಥರು ಜಿಲ್ಲಾ ಕೇಂದ್ರದಲ್ಲಿರುವ ಸದರ್ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರನ್ನು ನಾಲ್ಕು ಜನರು ಹಾಸಿಗೆಯ ಮೇಲೆ ಮಲಗಿ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ. ಸಾರಿಗೆ ಸೌಲಭ್ಯದ ಕೊರತೆಯಿಂದ ಮಕ್ಕಳು ಶಾಲೆಗೆ ಹೋಗಲು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ.
ಆದರೂ ಮುಂದಿನ ಪೀಳಿಗೆಗೆ ಕಾಡನ್ನು ಸಂರಕ್ಷಿಸಬೇಕೆಂಬ ಹಂಬಲವನ್ನು ಗ್ರಾಮಸ್ಥರು ಹೊಂದಿದ್ದಾರೆ. ಈ ಕಾಡುಗಳನ್ನು ನಮ್ಮ ಪೂರ್ವಜರು ನಮಗೆ ಉಡುಗೊರೆಯಾಗಿ ಬಿಟ್ಟುಕೊಟ್ಟಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ರವಾನಿಸುವುದು ನಮ್ಮ ಕರ್ತವ್ಯ. ನಾವು ಇಂದು ಆನಂದಿಸುತ್ತಿರುವಂತೆ ತಾಜಾ ಗಾಳಿ ಮತ್ತು ಪರಿಸರವನ್ನು ಆನಂದಿಸಲು ಈ ಕಾಡನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಇಡಬೇಕು ಎನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಸನ್ಮಾನಕ್ಕೆ ಪಾತ್ರರಾದ 97 ವರ್ಷದ ಸಂಗಪ್ಪ ಮಂಟೆ ಕೈಮಗ್ಗದ ಹೀರೋ!
ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಜಿಲ್ಲಾಡಳಿತದಿಂದ ಹಲವು ಬಾರಿ ಪ್ರಯತ್ನ ನಡೆದರೂ ವ್ಯರ್ಥವಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಗ್ರಾಮವನ್ನು ಹೊರ ಜಗತ್ತಿನೊಂದಿಗೆ ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು. ಜಿಲ್ಲಾಡಳಿತದಿಂದ 300 ಅಡಿ ರಸ್ತೆಯನ್ನು ಎರಡು ಬಾರಿ ಮಂಜೂರು ಮಾಡಿತು, ಆದರೆ ರಸ್ತೆ ನಿರ್ಮಿಸಲು ಗ್ರಾಮಸ್ಥರು ಸಿದ್ಧರಿಲ್ಲ ಎಂದು ಮಾಜಿ ಮುಖಂಡ ಅಲೆಕ್ಸಿಯಾನ್ ಬಾರ್ಲಾ ಹೇಳಿದರು.
ಗ್ರಾಮಕ್ಕೆ ರಸ್ತೆ ನಿರ್ಮಾಣದಿಂದ ತಾವು ಆರಾಧ್ಯದೈವದಿಂದ ಪೂಜಿಸುತ್ತಿರುವ ಅರಣ್ಯ ನಾಶವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಸ್ಥಳೀಯ ಸುರ್ಸೆನ್ ಡ್ಯಾಂಗ್, ವಾಹನಗಳು ಪ್ರವೇಶಿಸಿದರೂ ಕಾಡುಗಳಿಗೆ ಹಾನಿಯಾಗಬಾರದು. ಒಮ್ಮೆ ಪ್ರವೇಶಿಸಲು ರಸ್ತೆ ಸಿಕ್ಕರೆ, ಜಂಗಲ್ ಮಾಫಿಯಾ ಕಾಡುಗಳನ್ನು ನಾಶಪಡಿಸುತ್ತದೆ. ರಸ್ತೆ ನಿರ್ಮಾಣವು ವಾಹನಗಳು ಅರಣ್ಯವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಇದು ಜಂಗಲ್ ಮಾಫಿಯಾದಿಂದ ವಿವೇಚನಾರಹಿತವಾಗಿ ಮರಗಳನ್ನು ಕಡಿಯಲು ಕಾರಣವಾಗುತ್ತದೆ. ಕಾಡುಗಳ ನಾಶವು ಅರಣ್ಯ ಉತ್ಪನ್ನಗಳ ಮೇಲಿನ ನಮ್ಮ ಅವಲಂಬನೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: ಬೆಳೆಗಳಿಗೆ ನೀರುಣಿಸಲು ತಾನೇ ಹೊಂಡ ತೋಡಿದ ಜಾರ್ಖಂಡ್ ರೈತ, 40 ವರ್ಷಗಳ ಪರಿಶ್ರಮಕ್ಕೆ ತಕ್ಕ ಫಲ!
ಇದಲ್ಲದೆ, ಇದು ನಮ್ಮ ಜಾನುವಾರುಗಳ ಮೇಯುವಿಕೆಗೆ ಸಮಸ್ಯೆ ಉಂಟುಮಾಡುತ್ತದೆ ಎನ್ನುತ್ತಾರೆ. ಗ್ರಾಮಸ್ಥರೊಂದಿಗೆ ಹಲವು ಸುತ್ತಿನ ಸಭೆ ನಡೆಸಿದರೂ ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಪ್ರತಿಪಾದಿಸಿದರು.
ಪ್ರಸ್ತುತ, ಹೊರ ಪ್ರಪಂಚ ಮತ್ತು ಗ್ರಾಮದ ನಡುವೆ ಗುಡ್ಡವಿರುವುದರಿಂದ ಗ್ರಾಮಕ್ಕೆ ದ್ವಿಚಕ್ರ ವಾಹನವೂ ಬರಲು ಅಸಾಧ್ಯವಾಗಿದೆ. ಕೆಲವು ಹಳ್ಳಿಗರು ತಮ್ಮ ಗ್ರಾಮವನ್ನು ತಲುಪಲು ಗುಡ್ಡವನ್ನು ದಾಟಲು ಹೆಗಲಿನಲ್ಲಿ ಸೈಕಲ್ ಹೊತ್ತುಕೊಂಡು ಹೋಗುತ್ತಾರೆ ಎಂದು ವರ್ಗಾವಣೆಗೊಂಡ ಅಂದಿನ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಪ್ರತಾಪ್ ಮಿಂಜ್ ಹೇಳುತ್ತಾರೆ.