ಬತ್ತಿದ ಕೆರೆಗಳಿಗೆ ನೀರು ಹರಿಸಿ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿರುವ ಅನ್ನದಾತ!

ನೀರು, ಜೀವನದ ಸಾರ, ಪ್ರತಿ ಜೀವದ ಅಸ್ತಿತ್ವಕ್ಕೆ ಪ್ರಮುಖ ಸಂಪನ್ಮೂಲ. ರಾಜ್ಯದ ಸಾಕಷ್ಟು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಅಭಾವಕ್ಕೆ ಕೇವಲ ಜನರು ಮಾತ್ರವಲ್ಲದೆ, ಮೂಕ ಪ್ರಾಣಿಗಳೂ ಕೂಡ ಹೈರಾಣಾಗಿವೆ. ಪ್ರಾಣಿ ಪಕ್ಷಿಗಳು ಗುಟುಕು ನೀರಿಗಾಗಿ ಪರಿತಪಿಸುತ್ತಿವೆ.
ಬತ್ತಿದ ಕೆರೆಗಳಿಗೆ ನೀರು ಹರಿಸಿ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿರುವ ಅನ್ನದಾತ!
Updated on

ಧಾರವಾಡ: ನೀರು, ಜೀವನದ ಸಾರ, ಪ್ರತಿ ಜೀವದ ಅಸ್ತಿತ್ವಕ್ಕೆ ಪ್ರಮುಖ ಸಂಪನ್ಮೂಲ. ರಾಜ್ಯದ ಸಾಕಷ್ಟು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಅಭಾವಕ್ಕೆ ಕೇವಲ ಜನರು ಮಾತ್ರವಲ್ಲದೆ, ಮೂಕ ಪ್ರಾಣಿಗಳೂ ಕೂಡ ಹೈರಾಣಾಗಿವೆ. ಪ್ರಾಣಿ ಪಕ್ಷಿಗಳು ಗುಟುಕು ನೀರಿಗಾಗಿ ಪರಿತಪಿಸುತ್ತಿವೆ.

ಇಂತಹ ಸಮಯದಲ್ಲಿ ಧಾರವಾಡ ಜಿಲ್ಲೆಯ ರೈತರೊಬ್ಬರು ಕೆರೆಗೆ ನೀರು ಹರಿಸುವ ಮೂಲಕ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಪ್ಪ ಗುಂಡ್ಕಲ್ ಅವರು ತಮ್ಮ ಬೋರ್‌ವೆಲ್‌ನಿಂದ ತಮ್ಮೂರಿನ ಕರೆಗೆ ನೀರು ತುಂಬಿಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಬೇಸಿಗೆ ಕಾಲದಲ್ಲಿ ಕೆರೆಗೆ ನೀರು ತುಂಬಿಸುವ ಕಾಯಕ ಮಾಡುತ್ತಿದ್ದಾರೆ. ಈ ಮೂಲಕ ಪ್ರಾಣಿಗಳ ದಾಹ ತಣಿಸುತ್ತಿದ್ದಾರೆ.

ನನ್ನ ಜಮೀನಿನ ಪಕ್ಕದ ಕೆರೆಯಲ್ಲಿ ನಮ್ಮ ದನಗಳನ್ನು ನೀರು ಕುಡಿಸಲು ಕರೆದೊಯ್ಯುತ್ತಿದ್ದೆ. ಆದರೆ, 3 ವರ್ಷಗಳ ಹಿಂದೆ ಕೆರೆ ಬತ್ತಿ ಹೋಗಿತ್ತು. ನಮ್ಮ ಜಾನುವಾರುಗಳ ದಾಹ ನೀಗಿಸಲು ನನ್ನ ಜಮೀನಿನ ಬೋರ್‌ವೆಲ್‌ ನೀರನ್ನು ಬಳಸುತ್ತಿದ್ದೆ. ಆದರೆ, ಇತರ ಪ್ರಾಣಿಗಳು ಕೆರೆಗೆ ಬಂದು ನೀರಿಲ್ಲದೆ ಹಿಂತಿರುಗುತ್ತಿರುವುದನ್ನು ಗಮನಿಸಿದೆ. ಅವುಗಳಿಗೂ ನೀರು ದೊರೆಯಬೇಕೆಂದು ಕೆರೆ ನೀರು ತುಂಬಿಸಲು ಆರಂಭಿಸಿದೆ ಎಂದು ಗುಂಡಪ್ಪ ಹೇಳಿದ್ದಾರೆ.

ಮಳೆಗಾಲದಲ್ಲಿ ಮಾತ್ರ ಕೆರೆಯಲ್ಲಿ ನೀರು ಇರುತ್ತದೆ. ಫೆಬ್ರುವರಿ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಕೆರೆ ಒಣಗಿ ಹೋಗುತ್ತದೆ. ಪ್ರತಿ ವರ್ಷ ಸುಮಾರು 4 ತಿಂಗಳ ಕಾಲ ಪಂಪ್‌ಸೆಟ್‌ನಿಂದ ಕೆರೆಗೆ ನೀರು ತುಂಬಿಸುತ್ತೇನೆ. ಪ್ರತಿದಿನ ಸುಮಾರು 4 ಗಂಟೆಗಳ ಕಾಲ ಕೆರೆಗೆ ನೀರು ಹರಿಸುತ್ತೇನೆಂದು ತಿಳಿಸಿದ್ದಾರೆ.

ಗೋವಿಂದ್ ಅವರ ಪುತ್ರ ಮಾರುತಿ ಅವರು ಮಾತನಾಡಿ, ಕೆರೆ ಬತ್ತಿ ಹೋಗಿದ್ದರಿಂದ ಜಿಂಕೆಯೊಂದು ನೀರು ಕುಡಿಯದೆ ಹಿಂತಿರುಗುವುದನ್ನು ತಂದೆ ನೋಡಿದ್ದರು. ಆಗ, ನಮ್ಮ ಬೋರ್‌ವೆಲ್‌ನಿಂದ ಕೆರೆಗೆ ನೀರು ತುಂಬಿಸಲು ನಿರ್ಧರಿಸಿದರು. ಕಳೆದ ಮೂರು ವರ್ಷಗಳಿಂದ ಇದನ್ನೇ ಮಾಡುತ್ತಿದ್ದಾರೆ. ನಾವು 1.5 ಎಕರೆ ಜಮೀನು ಹೊಂದಿದ್ದು, ನಮ್ಮ ಬೋರ್‌ವೆಲ್‌ನ ನೀರು ಈ ಭೂಮಿಗೆ ನೀರಾವರಿ ಮಾಡಲು ಸಾಕು. ಗುತ್ತಿಗೆ ಪಡೆದ ನಾಲ್ಕು ಎಕರೆ ಜಮೀನಿಗೂ ನೀರುಣಿಸುತ್ತೇವೆ ಎಂದು ಹೇಳಿದ್ದಾರೆ.

ಬತ್ತಿದ ಕೆರೆಗಳಿಗೆ ನೀರು ಹರಿಸಿ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿರುವ ಅನ್ನದಾತ!
ಬೆಂಗಳೂರಿನಲ್ಲಿ ಜಲ ಬಿಕ್ಕಟ್ಟು ತಪ್ಪಿಸಲು ಸಮಗ್ರ ನೀರು ನಿರ್ವಹಣೆ ಅಗತ್ಯ: ವಿಶ್ವನಾಥ ಶ್ರೀಕಂಠಯ್ಯ (ಸಂದರ್ಶನ)

ಗೋವಿಂದ್ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮದ ಗೌಲಿ ಬುಡಕಟ್ಟಿನ ನಿವಾಸಿಯೊಬ್ಬರು ಮಾತನಾಡಿ, ಗೋವಿಂದ್‌ ಹೊಳೆಗೆ ನೀರು ಪೂರೈಸುವುದರಿಂದ ದನಗಳಷ್ಟೇ ಅಲ್ಲ, ಕಾಡು ಪ್ರಾಣಿಗಳಿಗೂ ಸಹಾಯಕವಾಗುತ್ತಿದೆ. ಗ್ರಾಮವು ಪಶ್ಚಿಮ ಘಟ್ಟಗಳ ಅಂಚಿನಲ್ಲಿದೆ. ವನ್ಯಪ್ರಾಣಿಗಳು ನೀರನ್ನು ಅರಸಿ ನಮ್ಮ ಗ್ರಾಮಕ್ಕೆ ಬರುತ್ತವೆ. ಗೋವಿಂದ್ ಅವರು ಪೂರೈಸುವ ನೀರು ಅವುಗಳ ದಾಹವನ್ನು ನೀಗಿಸುತ್ತಿದೆ. ರಾಜ್ಯಾದ್ಯಂತ ಮಾನವ-ಪ್ರಾಣಿ ಸಂಘರ್ಷಗಳ ಬಗ್ಗೆ ನಾವು ಕೇಳುತ್ತೇವೆ. ಆದರೆ, ನಮ್ಮ ಗ್ರಾಮದ ಕಥೆ ಇದಕ್ಕೆ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಮಾತನಾಡಿ, ನೀರು ಸಿಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳ ಮೇಯಿಸಲು ಈ ಸ್ಥಳ ಸೂಕ್ತವಾಗಿದೆ. ಪ್ರಾಣಿ ಮತ್ತು ಪಕ್ಷಿಗಳ ದಾಹ ನೀಗಿಸಲು ಹಲವು ಇಂತಹ ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಪರುಶುರಾಮ ಯಟ್ಟಿಂಗುಡ ಮಾತನಾಡಿ, ಗೋವಿಂದ್ ಅವರ ಒಳ್ಳೆಯ ಕಾರ್ಯ ಬಗ್ಗೆ ತಿಳಿದು ಅವರನ್ನು ಸನ್ಮಾನಿಸಲಾಯಿತು. ಕೆರೆ ಹಾಗೂ ಗೋವಿಂದ ಅವರ ಜಮೀನಿಗೂ ಭೇಟಿ ನೀಡಿದ್ದೆವು. ಗ್ರಾಮದಲ್ಲಿರುವ ಸುಮಾರು 700 ಜಾನುವಾರುಗಳು ಬೇಸಿಗೆಯ ಸಮಯದಲ್ಲಿ ಕೆರೆಯನ್ನು ಅವಲಂಬಿಸಿರುವುದು ತಿಳಿಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com