ಮೆಲ್ಬರ್ನ್: ನಿಜವಾಗಿಯೂ ಡ್ರೆಸ್ಸಿಂಗ್ ರೂಂನಲ್ಲಿ ಏನಾಯ್ತು ಅಂದರೆ ವಿರಾಟ್ ಕೊಹ್ಲಿ ಚಾಕುವಿನಿಂದ ಶಿಖರ್ ಧವನ್ಗೆ ಇರಿಯುತ್ತಿದ್ದರು. ಇದರಲ್ಲಿ ಗಾಯಗೊಂಡ ಧವನ್ ಸ್ವಲ್ಪ ಸುಧಾರಿಸಿಕೊಂಡ ನಂತರ ಬ್ರಿಸ್ಬೇನ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಗೆ ಇಳಿದದ್ದು. ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಧವನ್-ಕೊಹ್ಲಿ ಜಗಳದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತರಿಸಿದ್ದು ಹೀಗೆ.
ಇಂಥಾ ಸುದ್ದಿಗಳು ಹೇಗೆ ಹಬ್ಬುತ್ತವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ ಧೋನಿ ವಾರ್ನರ್ ಬ್ರದರ್ಸ್ನಂತಿರುವ ಖ್ಯಾತ ಸಿನಿಮಾ ನಿರ್ಮಾಣ ಕಂಪನಿಗಳಿಗೆ ಇಂಥಾ ಕತೆಗಳನ್ನು ಬಳಸಿ ಒಂದೊಳ್ಳೆ ಸಿನಿಮಾ ನಿರ್ಮಿಸಬಹುದು ಎಂದು ಧೋನಿ ವ್ಯಂಗ್ಯವಾಡಿದ್ದಾರೆ. ಟೀಂನಲ್ಲಿರುವ ಸದಸ್ಯರೇ ಮಾಧ್ಯಮದವರಲ್ಲಿ ಈ ವಿಷಯವನ್ನು ಹೇಳಿದ್ದರೆ ಅದನ್ನು ನಂಬಬಹುದಾಗಿತ್ತು. ಹಾಗಿದ್ದರೆ ಈ ವಿಷಯ ಹೇಳಿದ್ದು ಯಾರು? ಎಂದು ಮಾಧ್ಯಮದವರು ಹೇಳಬೇಕು. ಹಾಗೆ ಯಾರಾದರೂ ಹೇಳಿದ್ದರೆ ಆ ವ್ಯಕ್ತಿಯ ಭಾವನೆಗಳು ಅದ್ಭುತ!!
ಆ ವ್ಯಕ್ತಿ ಯಾವುದಾದರೂ ಸಿನಿಮಾ ಕಂಪನಿಯಲ್ಲಿ ಕೆಲಸ ಹುಡುಕುವುದು ಒಳ್ಳೆಯದು. ಅಂಥಾ ವ್ಯಕ್ತಿಗಳು ನಮ್ಮ ಡ್ರೆಸ್ಸಿಂಗ್ ರೂಂನಲ್ಲಿ ಅಗತ್ಯವಿಲ್ಲ. ಕಾರಣ, ಅವರು ಅಲ್ಲಿ ನಡೆಯದೇ ಇರುವ ವಿಷಯಕ್ಕೆ ಉಪ್ಪು ಖಾರ ಹಾಕಿ ಬೇರೆಯೇ ಕಥೆಯೊಂದನ್ನು ಹೆಣೆದಿದ್ದಾರೆ. ಇಂಥಾ ಕತೆಗಳಿಂದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮಾರಾಟ ಜಾಸ್ತಿಯಾಗಿರಬಹುದು. ಆದರೆ ಈ ರೀತಿಯ ಯಾವುದೇ ಘಟನೆಗಳು ಅಲ್ಲಿ ನಡೆದಿಲ್ಲ ಎಂಬುದು ಸತ್ಯ ಎಂದು ಧೋನಿ ಹೇಳಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೂರನೇ ದಿನ ಗಾಯಗೊಂಡ ಧವನ್ ನಾಲ್ಕನೇ ದಿನ ಕ್ರೀಸ್ಗಿಳಿಯಲು ನಿರಾಕರಿಸಿದ್ದಕ್ಕೆ, ಕೊಹ್ಲಿ ಧವನ್ ವಿರುದ್ಧ ರೇಗಾಡಿದ್ದರು ಎಂದು ಸುದ್ದಿಯಾಗಿತ್ತು. ಧವನ್ ಬದಲು ಕ್ರೀಸ್ಗೆ ಬಂದ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಔಟಾಗಿದ್ದರು.ಮಾತ್ರವಲ್ಲದೆ ಈ ಪಂದ್ಯದಲ್ಲಿ ಭಾರತ ಎರಡನೇ ಬಾರಿ ಪರಾಭವಗೊಂಡಿತ್ತು. ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ತಂದ ಸದಸ್ಯರ ಮಧ್ಯೆ ಗೊಂದಲವೇರ್ಪಟ್ಟಿತ್ತು ಎಂದು ಮ್ಯಾಚ್ ನಂತರ ಧೋನಿಯೇ ಹೇಳಿದ್ದರು.
Advertisement