ಸಿಡ್ನಿ: ಟೀಂ ಇಂಡಿಯಾದಲ್ಲಿ ಯಾವುದೇ ರೀತಿಯ ಬಿರುಕು ಇಲ್ಲ. ಮಹೇಂದ್ರ ಸಿಂಗ್ ಧೋನಿ ಟೆಸ್ಟ್ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ತಾವೇ ಸ್ವಂತವಾಗಿ ತೆಗೆದುಕೊಂಡಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ನಲ್ಲಿ ನಡೆದ ಮೂರನೇ ಪಂದ್ಯದ ನಂತರ ಧೋನಿ, ದಿಢೀರನೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರಿಂದ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರಣಿಯ ಅರ್ಧದಲ್ಲೇ ಧೋನಿ ವಿದಾಯ ಹೇಳಿದ್ದು, ತಂಡದಲ್ಲಿ ಏನೋ ಭಿನ್ನಾಭಿಪ್ರಾಯವಿದೆ. ಅದರಿಂದ ನೊಂದುಕೊಂಡೇ ಅವರು ಈ ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ತಂಡದಲ್ಲಿ ಸಮಸ್ಯೆಯಿದೆ. ಡ್ರೆಸಿಂಗ್ ರೂಮ್ ವಾತಾವರಣ ಸರಿಯಿಲ್ಲ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ.
ಹಾಗಾಗಿ, ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಂಡದಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಆಟಗಾರರ ಮಧ್ಯೆ ಉತ್ತಮ ಹೊಂದಾಣಿಕೆ ಇದ್ದು, ಡ್ರೆಸಿಂಗ್ ರೂಮ್ ವಾತಾವರಣವೂ ಉತ್ತಮವಾಗಿದೆ ಎಂದು ಹೇಳಿದೆ. ಅಲ್ಲದೆ, ಧೋನಿ ಯೋಚಿಸಿ ತಾವಾಗಿಯೇ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮೇಲೆ ಯಾವುದೇ ರೀತಿಯ ಒತ್ತಡ ಇರಲಿಲ್ಲ ಎಂದೂ ಸಹ ಬಿಸಿಸಿಐ ಪ್ರತಿಕ್ರಿಯಿಸಿದೆ.
ಸಿಡ್ನಿಗೆ ಬಂದ ಭಾರತ
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕಾಗಿ ಭಾರತ ಸಿಡ್ನಿಗೆ ಆಗಮಿಸಿದೆ. ಉಭಯ ತಂಡಗಳ ನಡುವಿನ ಈ ಅಂತಿಮ ಟೆಸ್ಟ್ ಪಂದ್ಯ ಜನವರಿ 6ರಿಂದ ಆರಂಭವಾಗಲಿದೆ. ಮೂರನೇ ಟೆಸ್ಟ್ ನಂತರ ದಿಢೀರನೆ ನಿವೃತ್ತಿ ಘೋಷಿಸಿ, ಎಲ್ಲರಿಗೂ ಅಚ್ಚರಿ ಮೂಡಿಸಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ವಿಷಯವೇ ಹೆಚ್ಚು ಚರ್ಚೆಯಲ್ಲಿದೆ. ಕಳೆದ ಮಂಗಳವಾರವಷ್ಟೇ ಬಿಸಿಸಿಐ, ಧೋನಿಯ ಟೆಸ್ಟ್ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ ನಂತರ ಎಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈಗ ಟೀಂ ಇಂಡಿಯಾ ಪಾಳಯದಲ್ಲಿ ಅದುವೇ ಪ್ರಮುಖ ವಿಷಯವಾಗಿ ಕಂಡುಬರುತ್ತಿದೆ.
ನಾಲ್ಕನೇ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-2ರಿಂದ ಹಿನ್ನಡೆಯಲ್ಲಿರುವ ಮೂಲಕ ಬಾರ್ಡರ್-ಗಾವಸ್ಕರ್ ಟ್ರೋಫಿ ಕಳೆದುಕೊಂಡಿರುವ ಟೀ ಇಂಡಿಯಾ ಅಂತಿಮ ಟೆಸ್ಟ್ ಪಂದ್ಯವನ್ನಾದರೂ ಗೆದ್ದು ಮರ್ಯಾದೆಯೊಂದಿಗೆ ತವರಿಗೆ ಹಿಂತಿರುಗಬೇಕಾಗಿದೆ.
ಜ.6ಕ್ಕೆ ಆಯ್ಕೆ
ಆಸ್ಟ್ರೇಲಿಯಾದಲ್ಲಿ ಜನವರಿ 16ರಿಂದ ಆರಂಭವಾಗಲಿರುವ ಏಕದಿನ ತ್ರಿಕೋನ ಸರಣಿ ಹಾಗೂ ಫೆಬ್ರವರಿ 14ರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಜನವರಿ 6ರಂದು ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಆಯ್ಕೆ ಸಮಿತಿ ಸದಸ್ಯರು ಮುಂಬೈನಲ್ಲಿ ಮಧ್ಯಾಹ್ನ ಸಭೆ ಸೇರಿ ಈ ಟೂರ್ನಿಗಳಿಗಾಗಿ ಟೀಂ ಇಂಡಿಯಾವನ್ನು ಆರಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಹೇಳಿದ್ದಾರೆ.
Advertisement