ಮೀರ್ ಪುರ: ಸತತ ಸೋಲುಗಳಿಂದ ಕಂಗೆಟ್ಟು ತೀವ್ರ ಒತ್ತಡಕ್ಕೆ ಸಿಲುಕಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಂಡದ ಹಿತಕ್ಕಾಗಿ ತಾವು ತಮ್ಮ ನಾಯಕತ್ವವನ್ನು ತ್ಯಜಿಸಲು ಸಿದ್ಧ ಎಂದು ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡನೇ ಪಂದ್ಯವನ್ನು ಸೋತಿರುವ ಭಾರತ ತಂಡ ಅಕ್ಷರಶಃ ಇದೀಗ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಪ್ರಮುಖವಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನಲೆಯಲ್ಲಿ ನಿನ್ನೆ ಬಾಂಗ್ಲಾದೇಶ ವಿರುದ್ಧ ಮೀರ್ ಪುರದಲ್ಲಿ ನಡೆದ 2ನೇ ಏಕದಿನ ಪಂದ್ಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿಯುವ ಕುರಿತು ಮಾತುಗಳನ್ನಾಡಿದ್ದಾರೆ.
"ಭಾರತೀಯ ಕ್ರಿಕೆಟ್ ರಂಗದಲ್ಲಿ ಏನೇ ಅಹಿತಕರ ಬೆಳವಣಿಗೆಯಾದರೂ ಮಾಧ್ಯಮಗಳ ಪ್ರಕಾರ ಅದಕ್ಕೆ ನಾನೇ ಹೊಣೆಯಾಗಿರುತ್ತೇನೆ. ನನಗೆ ಗೊತ್ತು ತಂಡಕ್ಕ ಸಂಬಂಧಿಸಿದಂತೆ ಯಾವುದೇ ರೀತಿಯ ಕ್ಲಿಷ್ಟ ಪರಿಸ್ಥಿತಿಗಳು ಎದುರಾದರೂ ಅದಕ್ಕೆ ನಾನೊಬ್ಬನೇ ಕಾರಣ ವಿನಃ ಬೇರಾರೂ ಅಲ್ಲವೆಂದು. ಮಾಧ್ಯಮಗಳಿಗೆ ನನ್ನನ್ನು ಕಂಡರೆ ಪ್ರೀತಿ ಜಾಸ್ತಿ ಇದೆ. ಹೀಗಾಗಿಯೇ ನನ್ನತ್ತಲೇ ಪ್ರಶ್ನೆಗಳ ಸುರಿ ಮಳೆ ತೂರಿಬರುತ್ತದೆ. ಆ ಪ್ರಶ್ನೆಗಳಿಗೆ ಉತ್ತರಿಸಲು ನಾನೇ ಜವಾಬ್ದಾರನಾಗಿರುತ್ತೇನೆ. ಆದರೆ ಒಂದತೂ ನಿಜ. ನಾನು ನನ್ನ ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುತ್ತೇನೆ ಮತ್ತು ಆದನ್ನು ಆಸ್ವಾದಿಸುತ್ತೇನೆ ಎಂದು ಧೋನಿ ಹೇಳಿದರು.
ಇನ್ನು ನಾಯಕನ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ನಾನು ನಾಯಕನ ಸ್ಥಾನದಿಂದ ಕೆಳಗಿಳಿದರೆ ಭಾರತೀಯ ಕ್ರಿಕೆಟ್ ರಂಗಕ್ಕೆ ಒಳಿಯದಾಗುತ್ತದೆ ಎನ್ನುವುದಾದರೇ ಮತ್ತು ಭಾರತೀಯ ಕ್ರಿಕೆಟ್ ರಂಗದಲ್ಲಿನ ಎಲ್ಲ ಕೆಟ್ಟ ವಿದ್ಯಮಾನಗಳಿಗೆ ನಾನೇ ಕಾರಣ ಎನ್ನುವುದಾದರೆ, ತಕ್ಷಣವೇ ನಾಯಕ ಸ್ಥಾನದಿಂದ ಕೆಳಗಿಳಿಯಲು ಸಿದ್ಧ, ಒಬ್ಬ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಮುಂದುವರಿಯಲು ಬಯಸುವುದಾಗಿ ಧೋನಿ ಹೇಳಿದ್ದಾರೆ.
ನನ್ನ ಪ್ರಕಾರ ತಂಡದ ನಾಯಕನಾರು ಎಂಬುದು ಪ್ರಶ್ನೆಯೇ ಅಲ್ಲ. ನಾನು ಎಂದಿಗೂ ತಂಡದ ನಾಯಕತ್ವ ಸ್ಥಾನಕ್ಕಾಗಿ ಆಸೆ ಪಟ್ಟವನಲ್ಲ. ನಾಯಕತ್ವ ಎನ್ನುವುದು ಒಂದು ರೀತಿಯ ಜವಾಬ್ದಾರಿಯಾಗಿದ್ದು, ಆ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತೇ ವಿನಃ ನಾನಾಗಿ ಕೇಳಿರಲಿಲ್ಲ. ನನ್ನಿಂದ ಈ ಸ್ಥಾನವನ್ನು ಯಾರಾದರೂ ಕಸಿಯಲು ಬಯಸಿದರೆ ಖಂಡಿತವಾಗಿ ನಾನು ಅದನ್ನು ಸಂತೋಷವಾಗಿ ಬಿಟ್ಟುಕೊಡುತ್ತೇನೆ ಎಂದು ಧೋನಿ ತಮ್ಮ ವಿರೋಧಿಗಳಿಗೆ ಚುಚ್ಚಿದ್ದಾರೆ.
Advertisement