ಬೆಂಗಳೂರು: ಸತತ ಎರಡನೇ ಬಾರಿಗೆ ಇರಾನಿ ಕಪ್ ಟ್ರೋಫಿ ಗೆಲ್ಲಬೇಕೆಂಬ ಹೋರಾಟದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಆರಂಭಿಕ ಹಿನ್ನಡೆಯಾಗಿದೆ. ಶೇಷ ಭಾರತದ ವೇಗಿ ವರುಣ್ ಅರುಣ್ ಮಾರಕ ದಾಳಿಗೆ ತತ್ತರಿಸಿದ ರಣಜಿ ಚಾಂಪಿಯನ್ನರು ಇರಾನಿ ಕಪ್ ಪಂದ್ಯದಲ್ಲಿ ಮೊದಲ ದಿನವೇ ಆಲೌಟ್ ಆಗುವ ಮೂಲಕ ಒತ್ತಡದಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವೇಗಿಗಳ ಅಖಾಡ ಎಂದೇ ಬಿಂಬಿತವಾಗಿರುವ ಚಿನ್ನಸ್ವಾಮಿ ಅಂಗಣದಲ್ಲಿ ಮತ್ತೆ ಬೌಲರ್ಗಳು ಪರಾಕ್ರಮ ಮೆರೆದರು. ಹಾಗಾಗಿ ಪಂದ್ಯದ ಮೊದಲ ದಿನದಾಟದಲ್ಲಿ ಎರಡೂ ತಂಡಗಳ ಇನಿಂಗ್ಸ್ ನಿಂದ 11 ವಿಕೆಟ್ಗಳು ಉರುಳಿವೆ. ಟಾಸ್ ಗೆದ್ದ ಶೇಷ ಭಾರತದ ನಾಯಕ ಮನೋಜ್ ತಿವಾರಿ, ಪಿಚ್ನ ಲಾಭ ಪಡೆಯುವ ದೃಷ್ಠಿಯಿಂದ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆ ಮೂಲಕ ಕರ್ನಾಟಕ ತಂಡವನ್ನು 244ಕ್ಕೆ ಕಟ್ಟಿ ಹಾಕುವಲ್ಲಿ ಮನೋಜ್ ಪಡೆ ಯಶಸ್ವಿಯಾಯಿತು.
ನಂತರ ಶೇಷ ಭಾರತ ಆರಂಭದಲ್ಲಿ ಆಘಾತ ಎದುರಿಸಿದರೂ ನಂತರ ಎಚ್ಚರಿಕೆಯ ಆಟವಾಡಿ ಮಂಗಳವಾರ ಮೊದಲ ದಿನದಾಟ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 20 ರನ್ ದಾಖಲಿಸಿದೆ. ಮೊದಲ ದಿನದಾಟದ ಆರಂಬಿsಕ ಹಂತದಲ್ಲಿ ಮೂರು ಬಾರಿ ಚೆಂಡನ್ನು ಬದಲಾಯಿಸಿದ್ದು, ಶೇಷ ಭಾರತ ಬೌಲರ್ಗಳಿಗೆ ನೆರವಾಯಿತು. ಪಂದ್ಯದ ಮೂರನೇ, 7ನೇ ಹಾಗೂ 26.3ನೇ ಓವರ್ನಲ್ಲಿ ಚೆಂಡು ರೂಪ ಕಳೆದುಕೊಂಡ ಕಾರಣದಿಂದ ಬೇರೆ ಚೆಂಡುಗಳಿಗೆ ಮೊರಹೋಗಲಾಯಿತು. ಇದು ಬೌಲರ್ಗಳಿಗೆ ನೆರವಾಯಿತು.
ಅಭಿಷೇಕ್-ಕರುಣ್ ಆಸರೆ
ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಾಬಿನ್ ಉತ್ತಪ್ಪ ಕೇವಲ 10 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಆರ್.ಸಮರ್ಥ್ (20), ಮನೀಷ್ ಪಾಂಡೆ (3) ಅನಗತ್ಯವಾಗಿ ಚೆಂಡನ್ನು ಕೆಣಕಿ ಕೀಪರ್ ನಮನ್ ಓಜಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಮಾಯಾಂಕ್ ಅಗರ್ವಾಲ್ 13 ಬೌಂಡರಿ ಸೇರಿದಂತೆ 68 ರನ್ ದಾಖಲಿಸಿ ವಿಕೆಟ್ ಕೈಚೆಲ್ಲಿದರು. ಹಾಗಾಗಿ ತಂಡ 107 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 5ನೇ ವಿಕೆಟ್ಗೆ ಜತೆಯಾದ ಕರುಣ್ ನಾಯರ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಭಿಷೇಕ್ ರೆಡ್ಡಿ 113 ರನ್ಗಳ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.
ಅದೃಷ್ಟದ ಅರ್ಧಶತಕ
ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಭಿಷೇಕ್ ರೆಡ್ಡಿಗೆ ಅದೃಷ್ಟ ಬೆಂಬಲಕ್ಕೆ ನಿಂತಿತ್ತು. ಕೇವಲ 13 ರನ್ ಗಳಿಸಿದ್ದಾಗ ರಿಶಿ ಧವನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದ ಅಭಿಷೇಕ್, ನೋಬಾಲ್ ಕಾರಣದಿಂದ ಪಾರಾದರು.
ನಂತರ ಕೆಲ ಹೊತ್ತಿನಲ್ಲಿ 15 ರನ್ ಗಳಿಸಿದ್ದಾಗ ರಿಶಿ ಧವನ್ ಎಸೆತದಲ್ಲಿ ನೀಡಿದ್ದ ಕ್ಯಾಚ್ ಅನ್ನು ಮನೋಜ್ ನೆಲಕ್ಕೆ ಹಾಕಿದರು. ಆನಂತರ ಜವಾಬ್ದಾರಿಯುತವಾಗಿ ಆಡಿದ ಅಭಿಷೇಕ್ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ದಾಖಲಿಸಿದರು. ಚಹಾ ವಿರಾಮದ ನಂತರ ಎಚ್ಚರ ತಪ್ಪಿದ ಅಭಿಷೇಕ್ ವಿಕೆಟ್ ಒಪ್ಪಿಸಿದರು. ಅಭಿಷೇಕ್ ವಿಕೆಟ್ ಬಿದ್ದ ನಂತರದ ಎಸೆತದಲ್ಲೇ 11 ಬೌಂಡರಿ ನೆರವಿನಿಂದ 59 ರನ್ ದಾಖಲಿಸಿದ್ದ ಕರುಣ್ ನಾಯರ್ ಔಟಾದರು. ನಂತರ ಬಂದ ಯಾವುದೇ ಬ್ಯಾಟ್ಸ್ಮನ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶೇಷ ಭಾರತದ ಪರ ಮಿಂಚಿನ ದಾಳಿ ನಡೆಸಿದ ವರುಣ್ ಅರುಣ್ 63 ರನ್ಗಳಿಗೆ 6 ವಿಕೆಟ್ ಪಡೆದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಿದರು. 3ನೇ ಬಾರಿಗೆ 5ಕ್ಕೂ ಹೆಚ್ಚು ವಿಕೆಟ್ ಸಂಪಾದಿಸಿದರು.
ಆರಂಭಿಕ ಕುಸಿತ
ಮೊದಲ ಇನಿಂಗ್ಸ್ ಆರಂಭಿಸಿದ ಮೊದಲ ಎಸೆತದಲ್ಲೇ ಶೇಷ ಭಾರತದ ಆರಂಭಿಕ ಬ್ಯಾಟ್ಸ್ಮನ್ ಉನ್ಮುಕ್ತ ಚಾಂದ್, ವಿನಯ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮತ್ತೊಬ್ಬ ಆರಂಬಿsಕ ಜೀವನ್ಜೋತ್ ಸಿಂಗ್ (16) ಹಾಗೂ ಪಾರಸ್ ದೊಗ್ರಾ (4) ಎಚ್ಚರಿಕೆಯ ಆಟವಾಡಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ. ಎರಡನೇ ದಿನದಾಟದ ಮೊದಲ ಅವಧಿ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ವಿನಯ್ ಗೆ 100ನೇ ಪಂದ್ಯ
ಕರ್ನಾಟಕ ತಂಡದ ನಾಯಕ ಆರ್. ವಿನಯ್ ಕುಮಾರ್ ಪಾಲಿಗೆ ಇದು 100ನೇ ಪ್ರಥಮ ದರ್ಜೆ ಪಂದ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಮೊದಲ ಎಸೆತದಲ್ಲಿ ಆಕರ್ಷಕವಾಗಿ ವಿಕೆಟ್ ಪಡೆದ ವಿನಯ್ ಸಂಭ್ರಮಿಸಿದರು.
ಸ್ಕೋರ್ ವಿವರ
ಕರ್ನಾಟಕ ಪ್ರಥಮ ಇನಿಂಗ್ಸ್:
77.1 ಓವರ್ಗಳಲ್ಲಿ 244
ರಾಬಿನ್ ಉತ್ತಪ್ಪ ಸಿ ನಮನ್ ಬಿ ವರುಣ್ 10
ಮಯಾಂಕ್ ಸಿ ನಮನ್ ಬಿ ವರುಣ್ 68
ಸಮರ್ಥ್ ಸಿ ನಮನ್ ಬಿ ರಿಷಿ ಧವನ್ 20
ಮನೀಷ್ ಸಿ ನಮನ್ ಬಿ ವರುಣ್ 3
ಕರುಣ್ ಸಿ ಉನ್ಮುಕ್ತ್ ಬಿ ವರುಣ್ 59
ಅಭಿಷೇಕ್ ಸಿ ನಮನ್ ಬಿ ಶಾರ್ದೂಲ್ 54
ಶ್ರೇಯಸ್ ಎಲ್ಬಿಡಬ್ಲ್ಯು ಬಿ ಪ್ರಜ್ಞಾನ್ ಓಜಾ 5
ವಿನಯ್ ಎಲ್ಬಿಡಬ್ಲ್ಯು ಬಿ ವರುಣ್ 6
ಮಿಥುನ್ ಎಲ್ಬಿಡಬ್ಲ್ಯು ಬಿ ವರುಣ್ 11
ಅರವಿಂದ್ ಸಿ ನಮನ್ ಬಿ ಪ್ರಜ್ಞಾನ್ ಓಜಾ 2
ಶರತ್ ಎಚ್ಎಸ್ ಔಟಾಗದೆ 0
ಇತರೆ: 6.
ವಿಕೆಟ್ ಪತನ: 1-26, 2-66, 3-90, 4-107, 5-220, 6-220, 7-226, 8-242, 9-244.
ಬೌಲಿಂಗ್:
ಶಾರ್ದೂಲ್ ಠಾಕೂರ್ 22-2-78-1, ರಿಷಿ ಧವನ್ 18-5-51-1, ವರುಣ್ ಆರನ್ 17.1-8-63-6, ಪ್ರಜ್ಞಾನ್ ಓಜಾ 15-3-35-2, ಜಾಧವ್ 5-2-14-0.
ಶೇಷ ಭಾರತ ಪ್ರಥಮ ಇನಿಂಗ್ಸ್:
5 ಓವರ್ಗಳಲ್ಲಿ 1 ವಿಕೆಟ್ಗೆ 20
ಉನ್ಮುಕ್ತ್ ಚಂದ್ ಬಿ ವಿನಯ್ ಕುಮಾರ್ 0
ಪರಾಸ್ ಡೋಗ್ರಾ ಬ್ಯಾಟಿಂಗ್ 4
ಜೀವನ್ಜೋತ್ ಸಿಂಗ್ ಬ್ಯಾಟಿಂಗ್ 16
ಇತರೆ: 0.
ವಿಕೆಟ್ ಪತನ: 1-0. ಬೌಲಿಂಗ್:
ವಿನಯ್ ಕುಮಾರ್ 3-0-12-1,
ಅಭಿಮನ್ಯು ಮಿಥುನ್ 2-0-8-0.
Advertisement