ಚೆನ್ನೈ ಮಣಿಸಿ ಫೈನಲ್ ತಲುಪಿದ ಮುಂಬೈ

ಮಿಂಚಿನ ಆಟವಾಡಿದ ಕೀರನ್ ಪೊಲಾರ್ಡ್ ರವರ ಬಿರುಸಿನ ಬ್ಯಾಟಿಂಗ್ ಹಾಗೂ ಲಸಿತ್ ಮಾಲಿಂಗ ಅವರ ಮಾರಕ ಬೌಲಿಂಗ್ ನೆರವಿನಿಂದಾಗಿ...
ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್
Updated on

ಮುಂಬೈ: ಮಿಂಚಿನ ಆಟವಾಡಿದ ಕೀರನ್ ಪೊಲಾರ್ಡ್ ರವರ ಬಿರುಸಿನ ಬ್ಯಾಟಿಂಗ್ ಹಾಗೂ ಲಸಿತ್ ಮಾಲಿಂಗ ಅವರ ಮಾರಕ ಬೌಲಿಂಗ್ ನೆರವಿನಿಂದಾಗಿ ಮುಂಬೈ ಇಂಡಿಯನ್ಸ್ ತಂಡ, ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 25 ರನ್ ಗಳ ಜಯಗಳಿಸಿ ಫೈನಲ್‍ಗೆ ಕಾಲಿಟ್ಟಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ್ದ ಮುಂಬೈ, 02 ಓವರ್ ಗಳಲ್ಲಿ 6 ವಿಕೆಟ್ ಕೊಂಡು 187 ರನ್ ಗಳಿಸಿತ್ತು. ಆನಂತರ, ಬ್ಯಾಟಿಂಗ್ ಗೆ ಇಳಿದ ಚೆನ್ನೈ 19 ಓವರ್ ಗಳಲ್ಲಿ ಎಲ್ಲ ವಿಕೆಟ್  ಕಳೆದುಕೊಂಡು 162 ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ಲೆಂಡ್ಲ್ ಸಿಮನ್ಸ್ ಹಾಗೂ ಪಾರ್ಥಿವ್ ಪಟೇಲ್ ಮೊದಲ ವಿಕೆಟ್ ಗೆ 90 ರನ್ ಸೇರಿಸಿದರು. 11ನೇ ಓವರ್‍ನಲ್ಲಿ ಪಟೇಲ್ ಔಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಆಗ ಬಂದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ, 2ನೇ ವಿಕೆಟ್ ಗೆ 23 ರನ್ ಸೇರಿಸುವಷ್ಟರದಲ್ಲಿ ಸಿಮನ್ಸ್ ಸಹ ವಿಕೆಟ್ ಒಪ್ಪಿಸಿ ಹೊರನಡೆದರು.  ಆಗ ಕ್ರೀಸ್ ಗೆ ಕಾಲಿಟ್ಟ ಕೀರನ್ ಪೊಲಾರ್ಡ್ ಆರಂಭದಿಂದಲೇ ಆರ್ಭಟಿಸಿದರು. ಆದರೆ, ಪೊಲಾರ್ಡ್- ರೋಹಿತ್ ಜೋಡಿ ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯಲಿಲ್ಲ. ವೆಸ್ಟ್ ಇಂಡೀಸ್ ದೈತ್ಯ ಪ್ರತಿಭೆಯೊಂದಿಗೆ 3ನೇ ವಿಕೆಟ್‍ಗೆ 24 ರನ್‍ಗಳ ಜೊತೆಯಾಟವಾಡಿದ ರೋಹಿತ್, ಇನಿಂಗ್ಸ್‍ನ 16ನೇ ಓವರ್ ನಲ್ಲಿ ಪೆವಿಲಿಯನ್‍ಗೆ ಮರಳಿದರು.

ರೋಹಿತ್ ನಂತರ ಬಂದ ಯಾವೊಬ್ಬ ಬ್ಯಾಟ್ಸ್ ಮನ್  ಸಹ ಪೊಲಾರ್ಡ್ಗೆ ಉತ್ತಮ ಸಾಥ್ ನೀಡಲಿಲ್ಲ. ಆದರೂ, ಇದಕ್ಕೆ  ತಲೆಕೆಡಿಸಿಕೊಳ್ಳದ ಪೊಲಾರ್ಡ್ ಮಾತ್ರ ಬ್ಯಾಟ್ ಮೂಲಕ ಎದುರಾಳಿ ಬೌಲರ್‍ಗಳನ್ನು ದಂಡಿಸುತ್ತಲೇ ಸಾಗಿದರು. ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ್ದ ಅವರ ಆರ್ಭಟಕ್ಕೆ ಕೊನೆಗೂ ಬ್ರೇಕ್ ಬಿತ್ತು. ಕೊನೆಯ ಓವರ್ ನಲ್ಲಿ ಅವರು ಬ್ರಾವೊ ಅವರ ಕೈಚಳಕಕ್ಕೆ ತುತ್ತಾಗಿ ಔಟಾದರು. ಅಂತಿಮವಾಗಿ ಮುಂಬೈ 187 ರನ್ ಮೊತ್ತ ಗಳಿಸಿತು.

ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಆಂಬಟಿ ರಾಯುಡು ಅವರಿಂದ ಉತ್ತಮ ಬ್ಯಾಟಿಂಗ್ ಹೊರಬಂದಿದ್ದರೆ, ತಂಡದ ಮೊತ್ತ 200 ರನ್ ಗಡಿ ದಾಟಬಹುದಿತ್ತು. ಆದರೆ, ಹಾಗಾಗಲಿಲ್ಲ. ಆದರೂ, ಕೊನೆಯ ಹತ್ತು ಓವರ್‍ಗಳಲ್ಲಿ 101 ರನ್ ಹರಿದುಬಂದಿದ್ದು ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಯಿತು.

ಕುಸಿದ ಚೆನ್ನೈ: ಕಠಿಣ ಸವಾಲನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ತಂಡದ ಬೌಲಿಂಗ್ ಗೆ ತತ್ತರಿಸಿತು. ಮೊದಲ ಓವರ್ ನ ನಾಲ್ಕನೇ ಎಸೆತದಲ್ಲೇ ಆರಂಭಿಕ ಡ್ವೈನ್ ಸ್ಮಿತ್ ವಿಕೆಟ್ ಉರುಳಿಸಿದ ಲಸಿತ್ ಮಾಲಿಂಗ ಚೆನ್ನೈ ನ ಇನಿಂಗ್ಸ್ ಪತನಕ್ಕೆ ಶ್ರೀಕಾರ ಹಾಕಿದರು.  ನಂತರ ದಾಳಿ ನಡೆಸಿದ ಕರ್ನಾಟಕ ಮೂಲದ ಆರ್. ವಿನಯ್ ಕುಮಾರ್ ಹಾಗೂ ಹರ್ಭಜನ್ ಸಿಂಗ್, ಮೈಕ್ ಹಸ್ಸಿ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿಯವರಂಥ ಮಹತ್ವದ ಆಟಗಾರರನ್ನು ಬೇಗನೆ ಪೆವಿಲಿಯನ್ ಗೆ ಕಳುಹಿಸುವ ಮೂಲಕ ಮುಂಬೈನ ಗೆಲವನ್ನು ಮತ್ತಷ್ಟು ಸುಲಭವಾಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com