ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಹ ಗೆಲವು ಸಂಪಾದಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಸುತ್ತಿಗೆ ಪ್ರವೇಶಿಸಿದೆ. ಆಟಗಾರರ ಪರಿಶ್ರಮ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಕಾರಣ ಎಂದು ಆಲ್ರೌಂಡರ್ ಕೀರನ್ ಪೊಲಾರ್ಡ್ ತಿಳಿಸಿದ್ದಾರೆ.
ಟೂರ್ನಿಯ ಆರಂಭಿಕ ಹಂತದಲ್ಲಿ ಸತತ ಸೋಲನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಮುಂಬೈ ಇಂಡಿಯನ್ಸ್, ನಂತರದ ಹಂತದಲ್ಲಿ ಹೋರಾಟ ನಡೆಸಿ ಫೈನಲ್ ಹಾದಿಗೆ ತಲುಪಿದ್ದು, ರೋಚಕ ಪಯಣವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಕಳೆದ 11 ಪಂದ್ಯಗಳಲ್ಲಿ 9 ಗೆಲವು ದಾಖಲಿಸಿ ಫೈನಲ್ ಸುತ್ತಿಗೆ ಪ್ರವೇಶಿಸಿ, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಇದು ಸಂಪೂರ್ಣವಾಗಿ ತಂಡದ ಪರಿಶ್ರಮವಾಗಿದೆ.
ಪಂದ್ಯದಲ್ಲಿ ಉತ್ತಮ ಆರಂಭ ನಿರೀಕ್ಷಿಸಿದ್ದೆವು. ಹರ್ಭಜನ್ ಬೌಲಿಂಗ್ ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಆದರೆ, 11ನೇ ಓವರ್ ನಲ್ಲಿ ಹರ್ಭಜನ್ ಸಿಂಗ್ ಸತತ ಎರಡು ಪ್ರಮುಖ ವಿಕೆಟ್ ಪಡೆದಿದ್ದು, ಪಂದ್ಯ ನಮ್ಮ ಕಡೆ ವಾಲುವಂತೆ ಮಾಡಿತು. ಆ ಪ್ರದರ್ಶನ ನಿಜಕ್ಕೂ ಅದ್ಭುತವಾಗಿತ್ತು ಎಂದು ಪೊಲಾರ್ಡ್ ತಿಳಿಸಿದ್ದಾಗಿ ಐಎಎನ್ಎಸ್ ವರದಿ ಮಾಡಿದೆ.
ರೈನಾ ಹಾಗೂ ಧೋನಿ, ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನು ಬದಲಿಸಬಲ್ಲರು. ಹಾಗಾಗಿ ಅವರ ವಿಕೆಟ್ ಪ್ರಮುಖವಾಗಿತ್ತು. ಪಂದ್ಯದ ಆರಂಭದಲ್ಲಿ ಲೆಂಡ್ಲ್ ಸಿಮನ್ಸ್ ಮತ್ತು ಪಾರ್ಥಿವ್ ಪಟೇಲ್ ಉತ್ತಮ ಆರಂಭ ನೀಡಿದರು. ವಿನಯ್ ಕುಮಾರ್ ಮತ್ತು ಲಸಿತ್ ಮಾಲಿಂಗ ಅತ್ಯುತ್ತಮ ದಾಳಿ ಸಂಘಟಿಸಿದರು. ಇನಿಂಗ್ಸ್ ನ ಅಂತ್ಯದಲ್ಲಿ ಮೆಕ್ಲೆನ್ ಘನ್ ಪ್ರಮುಖ ವಿಕೆಟ್ ಪಡೆದರು ಎಂದರು.
ಇನ್ನು ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಪೊಲಾರ್ಡ್, ಸ್ಥಿರ ಪ್ರದರ್ಶನದ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಸಾಕಷ್ಟು ಜನ ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ನನ್ನ ಸಾಮರ್ಥ್ಯ ಅರಿವಿದೆ. ತಂಡಕ್ಕೆ ಸ್ಥಿರ ಪ್ರದರ್ಶನ ನೀಡುತ್ತಿದ್ದೇನೆ. ಕ್ರಿಕೆಟ್ ಅನ್ನು ಉತ್ತಮ ಮನಸ್ಸಿನಿಂದ ಆಡಿದರೆ, ಫಲಿತಾಂಶ ನಿಮ್ಮ ಕಡೆಗೆ ಬರುತ್ತದೆ. ಹಾಗಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸುವತ್ತ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದರು.
Advertisement