ಸರಣಿ ಜೀವಂತವಾಗಿಡಲು ಧೋನಿ ಪಡೆ ಪಣ

ದ.ಆಫ್ರಿಕಾ ವಿರುದ್ಧ 7 ವಿಕೆಟ್ ಸೋಲನುಭವಿಸಿದ ಆತಿಥೇಯ ಭಾರತ, ಸೋಮವಾರ ನಡೆಯಲಿರುವ ಎರಡನೆ ಚುಟುಕು ಪಂದ್ಯಕ್ಕೆಅಣಿಯಾಗಿದ್ದು ಸರಣಿ ಜೀವಂತವಾಗಿಡಲು ಪಣ ತೊಟ್ಟಿದೆ.
ಸರಣಿ ಜೀವಂತವಾಗಿಡಲು ಧೋನಿ ಪಡೆ ಪಣ
Updated on

ಕಟಕ್: ಸವಾಲಿನ ಮೊತ್ತವನ್ನು ಪೇರಿಸಿಯೂ ಮೊದಲ ಪಂದ್ಯದಲ್ಲಿ ಪ್ರವಾಸಿ ದ.ಆಫ್ರಿಕಾ ವಿರುದ್ಧ 7 ವಿಕೆಟ್ ಸೋಲನುಭವಿಸಿದ ಆತಿಥೇಯ ಭಾರತ, ಸೋಮವಾರ ನಡೆಯಲಿರುವ ಎರಡನೆ ಚುಟುಕು ಪಂದ್ಯಕ್ಕೆಅಣಿಯಾಗಿದ್ದು ಸರಣಿ ಜೀವಂತವಾಗಿಡಲು ಪಣ ತೊಟ್ಟಿದೆ.
ಇತ್ತ ಮೊದಲ ಪಂದ್ಯದ ಗೆಲುವಿನಿಂದ ಉತ್ಸಾಹದ ಬುಗ್ಗೆಯಂತಾಗಿರುವ ಫಾಫ್ ದು ಪ್ಲೆಸಿಸ್ ಸಾರಥ್ಯದ ದ.ಆಫ್ರಿಕಾ ತಂಡ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಹೀಗಾಗಿ ಮೂರು ಟಿ-20 ಪಂದ್ಯ ಸರಣಿಯನ್ನು 2 -0 ಅಂತರದಿಂದ ಪ್ರವಾಸಿ ತಂಡದ ಪಾಲಾಗುವುದನ್ನು ತಪ್ಪಿಸಲು ಶತಾಯ ಗತಾಯ ಪಂದ್ಯದಲ್ಲಿ ಗೆಲುವು ಸಾಧಿಸದೇ ಧೋನಿ ಪಡೆಗೆ ಗತ್ಯಂತರವಿಲ್ಲ. 
ಬಾಂಗ್ಲಾದೇಶ ಪ್ರವಾಸದ ಬಳಿಕ ಹೆಚ್ಚೂ ಕಮ್ಮಿ ಮೂರು ತಿಂಗಳು ವಿಶ್ರಾಂತಿ ಪಂಡೆದಿದ್ದ ನಾಯಕ ಧೋನಿ, ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಹರಿಣಗಳ ವಿರುದ್ಧದ 72 ದಿನಗಳ ಈ ಸುದೀರ್ಘ ಪ್ರವಾಸದಲ್ಲಿ ತವರಿನಲ್ಲಿ ತಂಡ ಆರಂಭದಲ್ಲೇ ಹೀಗೆ ಮುಗ್ಗರಿಸಿರುವುದು ಆಟಗಾರರ ಆತ್ಮಸ್ಥೈರ್ಯಕ್ಕೆ ಪೆಟ್ಟು ನೀಡಿದೆ. ಆದಾಗ್ಯೂ ಮಾಡು ಇಲ್ಲವೇ ಮಡಿ ಎಂಬಂತಾಗಿರುವ ಪಂದ್ಯದಲ್ಲಿ ಗೆಲುವು ಸಾಧಿಸಲು ಶಕ್ತಿ ಮೀರಿ ಹೋರಾಡಲು ಧೋನಿ ಪಡೆ ಅಣಿಯಾಗಿದೆ.
ಆರಂಭಿಕ ರೋಹಿತ್ ಶರ್ಮಾ ಸಿಡಿಸಿದ ಚೊಚ್ಚಲ ಟಿ-20 ಶತಕದೊಂದಿಗೆ ಸವಾಲಿನ ಮೊತ್ತ ಪೇರಿಸಿಯೂ ಭಾರತ ಮೊದಲ ಪಂದ್ಯದಲ್ಲಿ ಸೋಲುಂಡಿತ್ತು. ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಗಳಿಸಿದ ಅರ್ಧಶತಕವಲ್ಲದೇ, ಆಲ್ ರೌಂಡರ್ ಜೆಪಿ ಡುಮಿನಿ ಅಜೇಯ ಆಟದೊಂದಿಗೆ ಹರಿಣಗಳಿಗೆ ಕೊನೇ ಓವರ್ ನಲ್ಲಿ ಗೆಲುವು ತಂದುಕೊಟ್ಟಿದ್ದರು.    

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com