ಹಿತಾಸಕ್ತಿ ಸಂಘರ್ಷ: ಸೌರವ್ ಗಂಗೂಲಿಗೆ ಕ್ಲೀನ್ ಚಿಟ್
ಮುಂಬೈ: ಪುಣೆ ಫ್ರಾಂಚೈಸಿಯಲ್ಲಿ ವಾಣಿಜ್ಯ ವ್ಯವಹಾರ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಹಿತಾಸಕ್ತಿ ಸಂಘರ್ಷ ವಿವಾದ ಎದುರಿಸುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಐಪಿಎಲ್ ಆಡಳಿತ ಮಂಡಳಿ ಸದಸ್ಯರಾಗಿರುವ ಸೌರವ್ ಗಂಗೂಲಿ, ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಆಡುವ ಅಥ್ಲೆಟಿಕೋ ಡಿ ಕೋಲ್ಕತ ತಂಡದ ಸಹ-ಮಾಲೀಕರಾಗಿದ್ದಾರೆ. ಅದರಲ್ಲಿ ಅವರ ಪಾಲುದಾರರಾಗಿರುವ ಸಂಜಯ್ ಗೋಯೆಂಕಾ ಐಪಿಎಲ್ನಲ್ಲಿ ಪುಣೆ -ಫ್ರಾಂಚೈಸಿಯನ್ನು ಖರೀದಿಸಿದ್ದು, ಸ್ವಹಿತಾಸಕ್ತಿ ಸಂಘರ್ಷದ ವಿವಾದ ಹುಟ್ಟುಹಾಕಿತ್ತು. ಇದೀಗ ಪ್ರಕರಣದ ವರದಿ ನೀಡಿರುವ ಬಿಸಿಸಿಐನ ಓಂಬುಡ್ಸ್ ಮನ್ ನ್ಯಾಯಮೂರ್ತಿ ಎಪಿ ಷಾ ಸ್ವಹಿತಾಸಕ್ತಿ ಸಂಘರ್ಷ ಪ್ರಕರಣದಲ್ಲಿ ಗಂಗೂಲಿ ಸಿಲುಕಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ನೀಡಿದ್ದಾರೆ. ಅಂತೆಯೇ ಗಂಗೂಲಿ ಪ್ರಕರಣ ಸ್ವಹಿತಾಸಕ್ತಿ ಸಂಘರ್ಷದ ನಿಯಮದಡಿ ಬರುವುದಿಲ್ಲ ಎಂದು ಎಪಿ ಷಾ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಈ ಹಿಂದೆ ನೀರಜ್ ಗುಂಡೇ ಎಂಬವರು ಗಂಗೂಲಿ ವಿರುದ್ಧ ಬಿಸಿಸಿಐನ ಓಂಬುಡ್ಸ್ಮನ್ಗೆ ದೂರು ನೀಡಿದ್ದರು. ಈ ಬಗೆಗಿನ ವಿಚಾರಣೆ ವೇಳೆ ಗಂಗೂಲಿ ಮತ್ತು ಬಿಸಿಸಿಐನಿಂದ ಓಂಬುಡ್ಸ್ಮನ್ ಉತ್ತರ ಪಡೆದುಕೊಂಡಿದ್ದರು. ಅಥ್ಲೆಟಿಕೋ ಡಿ ಕೋಲ್ಕತ ಫ್ರಾಂಚೈಸಿಯಲ್ಲಿ ತಾನು ಕೇವಲ ಶೇ. 6.67ರಷ್ಟು ಷೇರು ಹೊಂದಿದ್ದೇನೆ. ಆದರೆ ಪುಣೆ - ಫ್ರಾಂಚೈಸಿಯಲ್ಲಿ ತನಗೆ ಯಾವುದೇ ವಾಣಿಜ್ಯ ವ್ಯವಹಾರವಿಲ್ಲ ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ