ತಿರುವನಂತಪುರಂ: ಯುವ ಆಟಗಾರ ಹುಮ್ಮಸ್ಸನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಭಾರತ ಫುಟ್ಬಾಲ್ ತಂಡ, ಭಾನುವಾರ (ಜ. 3) ನಡೆಯಲಿರುವ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಶಕ್ತಿಯಾದ ಆಫ್ಘಾನಿಸ್ತಾನವನ್ನು ಎದುರಿಸಲಿದೆ.
ಈಗಾಗಲೇ ಆರು ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಭಾರತಕ್ಕೆ ಬಲಿಷ್ಠ ಆಫ್ಘಾನಿಸ್ತಾನ ಸವಾಲಾಗಿ ನಿಲ್ಲುವ ಎಲ್ಲಾ ಛಾತಿಯನ್ನೂ ದಿರುವುದರಿಂದ ಫೈನಲ್ ಪಂದ್ಯವನ್ನು ಭಾರತ ತಂಡ, ಸುಲಭವೆಂದು ಪರಿಗಣಿಸುವ ಹಾಗಿಲ್ಲ. ಹಾಗಾಗಿ, ಎಚ್ಚರಿಕೆಯಿಂದಲೇ ಅದು ಹೆಜ್ಜೆಯನ್ನಿಡಬೇಕಿದೆ. ಏಕೆಂದರೆ, ಹಾಲಿ ಚಾಂಪಿಯನ್ ಆಗಿರುವ ಎದುರಾಳಿಗಳು ಅಷ್ಟು ಸುಲಭವಾಗಿ ಪ್ರಶಸ್ತಿ ಯನ್ನು ಬಿಟ್ಟುಕೊಡದು ಎಂಬುದಂತೂ ಸತ್ಯ. ಹಾಗಾಗಿ, ತಿರುವನಂತಪುರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ, ತರಬೇತುದಾರ ಸ್ಟೀಫನ್ ಕಾನ್ಸ್ಟಾಂಟೈನ್ ಭಾರತ ತಂಡವನ್ನು ವಿಶೇಷವಾಗಿಯೇ ಸಜ್ಜುಗೊಳಿಸಬೇಕಿದೆ.
2011ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು 40 ಗೋಲುಗಳಿಂದ ಮಣಿಸಿದ್ದ ಭಾರತ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಆ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ್ದ ಸುನಿಲ್ ಛೆಟ್ರಿ ಭಾರತ ದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಅದಾಗಿ ಎರಡು ವರ್ಷಗಳ ನಂತರ, 2013ರಲ್ಲಿ ಕಾಠ್ಮಂಡುವಿನಲ್ಲಿ ನಡೆದಿದ್ದ ಸ್ಯಾಫ್ ಫೈನಲ್ನಲ್ಲಿ ಆಫ್ಘಾನಿಸ್ತಾನ, ಭಾರತವನ್ನು 20 ಗೋಲುಗಳಿಂದ ಮಣಿಸಿ, ಪುನಃ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಅಂದು ಸೋತಿದ್ದ ಭಾರತ ತಂಡದಲ್ಲಿದ್ದ ಆಟಗಾರರಲ್ಲಿ ಕೇವಲ ಐವರು ಮಾತ್ರ ಈ ಬಾರಿಯ ಸ್ಯಾಫ್ ಫೈನಲ್ನಲ್ಲಿ ಆಫ್ಘಾನಿಸ್ತಾನವನ್ನು ಎದುರಿಸಲಿದ್ದಾರೆ. ಛೆಟ್ರಿ, ಲೆಲೆ ಲಾಲ್ಪೆಖ್ಲುವಾ, ಅರ್ನಾಬ್ ಮೊಂದಾಲ್, ಸುಬ್ರತಾ ಪಾಲ್ ಹಾಗೂ ರಾಬಿನ್ ಸಿಂಗ್ ಮಾತ್ರ ಈ ಬಾರಿಯ ತಂಡದಲ್ಲಿದ್ದು ಹಳೆಯ ಸೋಲಿನ ಕಹಿಯನ್ನು ಗೆಲವಿನ ಸಿಹಿ ಮೂಲಕ ಮರೆಮಾಚಬೇಕಿದೆ. ಆದರೆ, ಗಾಯಗೊಂಡಿರುವ ರಾಬಿನ್ ಸಿಂಗ್ ಈ ಪಂದ್ಯದಲ್ಲಿ ಆಡುವುದು ಅನುಮಾನ. ಆದರೂ, ಆಪ್ಘಾನಿಸ್ತಾನಕ್ಕೆ ಪಂದ್ಯದ ಪ್ರತಿ ಹಂತದಲ್ಲೂ ಪೈಪೋಟಿ ನೀಡುವ ಛಾತಿ ಭಾರತ ತಂಡಕ್ಕಿದೆ.
ಇನ್ನು, ತಂಡದ ಬಲಾಬಲದ ಬಗ್ಗೆ ಹೇಳುವುದಾದರೆ, ಸ್ಟ್ರೈಕರ್ ಸುನಿಲ್ ಛೆಟ್ರಿಗೆ ಫಾರ್ವರ್ಡ್ ಆಟಗಾರ ಜೆಜೆ ಉತ್ತಮ ಸಾಥ್ ನೀಡುತ್ತಿದ್ದು ಭಾರತದ ಪಾಲಿಗೆ ರಕ್ಷಣಾ ಕವಚವಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ 32ರ ಜಯ ಸಾಧಿಸಿದ ಭಾರತದ ಪರ ಎರಡು ಗೋಲುಗಳನ್ನು ದಾಖಲಿಸಿರುವ ಭಾರತಕ್ಕೆ ಅವರು ಪ್ರಮುಖ ಶಕ್ತಿಯಾಗಿದ್ದಾರೆ. ಇವರಲ್ಲದೆ, ಸ್ಟ್ರೈಕರ್ ಹೊಲಿ ಚರಣ್ ನಾರ್ಜಾರಿ ಹಾಗೂ ಮಿಜೋರಾಂ ಸ್ಟ್ರೈಕರ್ ಲಲಿಯಾಂಜುವಾಲಾ ಚಾಂಗ್ಟೆ ಸಹ ಬೆಂಬಲವಾಗಿದ್ದಾರೆ. ಇನ್ನು, ಮಿಡ್ಪಿಫೀಲ್ಡಿಂಗ್ ನ ಹೊಸ ಮಿಂಚು ರೋವ್ಲಿನ್ ಬೋರ್ಜಸ್ ಸಹ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರಿಗೆ, ಮತ್ತೊಬ್ಬ ಮಿಡ್ಪಿಫೀಲ್ಡರ್ ಲಿಂಗ್ಡೊ ಸಹ ಬೆಂಬಲವಾಗಿ ನಿಲ್ಲಲಿದ್ದಾರೆ. ಇನ್ನುಳಿದಂತೆ, ಪ್ರೀತಮ್ ಕೋತಲ್, ಅರ್ನಾಬ್ ಮೊಂದಾಲ್, ಅಗಸ್ಟಿನ್ ಫರ್ನಾಂಡಿಸ್ ಹಾಗೂ ನಾರಾಯಣ್ ದಾಸ್ ತಂಡದ ವಿಶ್ವಾಸಾರ್ಹರು.
Advertisement