ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಷ್ಯಾಕಪ್ ಟಿ20 ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಾಂಗ್ಲಾದೇಶ ಕ್ರೀಡಾಭಿಮಾನಿಗಳು ತಮ್ಮ ಅಂಧಾಭಿಮಾನ ಪ್ರದರ್ಶನ ಮಾಡಿದ್ದು, ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚಿತ್ರವಿರುವ ಫೋಟೋ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಎಂಎಸ್ ಧೋನಿ ಅವರ ರುಂಡವನ್ನು ಬಾಂಗ್ಲಾದೇಶದ ವೇಗಿ ಟಸ್ಕಿನ್ ಅಹ್ಮದ್ ಅವರು ಹಿಡಿದಿರುವ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು. ಇದು ಭಾರತೀಯ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿಯೇ ಸರಿಯಾಗಿ ಉತ್ತರ ನೀಡಿರುವ ಅಭಿಮಾನಿಗಳು ನಿಮ್ಮ ಮನೋ ವೈಕಲ್ಯಕ್ಕೆ ಫೈನಲ್ ನಲ್ಲಿ ಸೂಕ್ತ ಉತ್ತರ ದೊರೆಯಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಭಾರತ ತ೦ಡ ಬಾ೦ಗ್ಲಾ ವಿರುದ್ಧ ಏಕದಿನ ಸರಣಿ ಸೋತಾಗ, ಅಲ್ಲಿನ ಪತ್ರಿಕೆಯೊ೦ದು ವೇಗಿ ಮುಸ್ತಾಫಿಜುರ್ ಕೈಯಲ್ಲಿ ಬ್ಲೇಡ್ ಹಿಡಿದಿರುವ ಮತ್ತು ಧೋನಿ, ಕೊಹ್ಲಿ, ರೋಹಿತ್, ಧವನ್ ಸಹಿತ ಭಾರತೀಯ ಕ್ರಿಕೆಟಿಗರ ಅರ್ಧತಲೆ ಬೋಳಿಸಿರುವ "ನಕಲಿ ಜಾಹೀರಾತು' ನೀಡಿ ಅವಮಾನಿಸಿತ್ತು. ಇದೀಗ ಅಂತಹುದೇ ಮತ್ತೊಂದು ಚಿತ್ರವೊಂದು ವಿವಾದಕ್ಕೆ ಕಾರಣವಾಗಿದೆ.
Advertisement