ಬೆಂಗಳೂರು: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಗಡಿ ಕಾಯುತ್ತಿರುವ ನಮ್ಮ ಯೋಧರಿಗಾಗಿ ಆಟವಾಡಿ ಪಾಕಿಸ್ತಾನವನ್ನು ಸೋಲಿಸುತ್ತೇವೆಂದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್ ಅವರು ಹೇಳಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಮಲೇಷಿಯಾದಲ್ಲಿ 'ಏಷ್ಯನ್ ಚಾಂಪಿಯನ್ ಟ್ರೋಫಿ' ನಡೆಯಲಿದ್ದು, ಅ.23 ರಂದು ಭಾರತ-ಪಾಕಿಸ್ತಾನ ನಡುವಣ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀಜೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಉರಿ ಉಗ್ರ ದಾಳಿ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳ ನಡುವೆ ಈಗಾಗಲೇ ಸಂಬಂಧ ಹದಗೆಟ್ಟಿದ್ದು, ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುರಿತಂತೆ ಮಾತನಾಡದೆಯೇ ಪರೋಕ್ಷವಾಗಿ ಪಾಕಿಸ್ತಾನಕ್ಕೆ ನಮ್ಮ ಆಟದ ಮೂಲಕ ಉತ್ತರ ನೀಡುತ್ತೇವೆಂದು ಶ್ರೀಜೇಶ್ ಅವರು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಆಟ ನಡೆದಾಗ ಜನರಲ್ಲಿ ಸಾಕಷ್ಟು ಕುತೂಹಲಗಳು ಮೂಡತೊಡಗುತ್ತದೆ. ಆಟದಲ್ಲಿ ಗೆಲ್ಲಲು ಶೇ.100ರಷ್ಟು ಪ್ರಯತ್ನವನ್ನು ನಾವು ಮಾಡುತ್ತೇವೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುತ್ತಿರುವ ನಮ್ಮ ಯೋಧರ ಮನಸ್ಸಿಗೆ ನೋವುಂಟು ಮಾಡುವುದು ನಮಗಿಷ್ಟವಿಲ್ಲ ಎಂದಿದ್ದಾರೆ,
ಹಾಕಿಯಲ್ಲಿ ಪ್ರಸ್ತುತ ಪಾಕಿಸ್ತಾನ ಕಳಪೆ ಮಟ್ಟದಲ್ಲಿ ಆಟವಾಡುತ್ತಿದ್ದು, ಆದರೆ, ಯಾರನ್ನು ಬೇಕಾದರೂ ನಾವು ಸೋಲಿಸುತ್ತೇವೆಂಬ ಭಾವನೆ ಅವರ ಮನದಲ್ಲಿದೆ. ಅದೇ ಅವರ ವಿಶೇಷತೆಯಾಗಿದೆ. ಪಾಕಿಸ್ತಾನಕ್ಕಿಂತ ನಮ್ಮ ತಂಡ ಉತ್ತಮ ಸ್ಥಾನದಲ್ಲಿದ್ದು, ವಿಶ್ವದ ಟಾಪ್ ಟೀಮ್ ಗಳಲ್ಲಿ ಭಾರತ ಕೂಡ ಒಂದಾಗಿದೆ. ಮೊದಲ ಬಾರಿಗೆ ಒಲಿಂಪಿಕ್ಸ್ ಪ್ರವೇಶಿಸಲು ಪಾಕಿಸ್ತಾನ ಯತ್ನಿಸಿತ್ತು. ಆದರೆ, ಅದರಲ್ಲಿ ವಿಫಲತೆಯನ್ನು ಕಂಡಿತು.
ಏಷಿಯನ್ ಚಾಂಪಿಯನ್ ಶಿಪ್ ನ್ನು ಸುಲಭವಾಗಿ ತೆಗೆದುಕೊಳ್ಳುವಂತಿಲ್ಲ. ಮಲೇಷಿಯಾ ಹಾಗೂ ಕೊರಿಯಾ ತಂಡಗಳನ್ನು ಸುಲಭವಾಗಿ ತೆಗೆದೊಕೊಳ್ಳಬಾರದು. ಎರಡೂ ತಂಡಗಳಲ್ಲೂ ಸಾಕಷ್ಟು ಉತ್ತಮ ಬೆಳವಣಿಗೆಗಳು ಕಂಡುಬಂದಿದೆ. ಕೊರಿಯಾ ತಂಡ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಮಲೇಷಿಯಾ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದು ತಿಳಿಸಿದ್ದಾರೆ.
Advertisement