ಗೋಲ್ಡ್ ಕೋಸ್ಟ್: ಶೂಟಿಂಗ್ ನಲ್ಲಿ ಜಿತು ರಾಯ್ ಅವರ ಚಿನ್ನದ ಬೇಟೆ, ಮಿಶ್ರ ಬ್ಯಾಡ್ಮಿಂಟನ್ ಮತ್ತು ಪುರುಷರ ಟೇಬಲ್ ಟೆನ್ನಿಸ್ ತಂಡಗಳು ಮಾಡಿದ ಐತಿಹಾಸಿಕ ಸಾಧನೆಗಳಿಂದ 21 ನೇ ಕಾಮನ್ವೆಲ್ತ್ ಕ್ರೀಡಾಕೂಟದ 5ನೇ ದಿನ ಭಾರತದ ಪಾಲಿಗೆ ಸ್ಮರಣೀಯವಾಗಿದೆ.
ವೇಟ್ ಲಿಫ್ಟಿಂಗ್ ಸ್ಪರ್ಧೆಯ ಅಂತಿಮ ದಿನವಾದ ಇಂದು ಭಾರತದ ಪ್ರದೀಪ್ ಸಿಂಗ್ (105 ಕೆಜಿ) ಬೆಳ್ಳಿ ಪದಕ ಗಳಿಸುವ ಮೂಲಕ ಅಭಿಯಾನವನ್ನು ಮುಗಿಸಿದ್ದಾರೆ. ಇದರೊಡನೆ ಭಾರತ ವೇಟ್ ಲಿಫ್ಟಿಂಗ್ ನಲ್ಲಿ ಐದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗಳಿಸಿಕೊಂಡಿದೆ.
ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತವು 10 ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ.
10 ಮಿ ಏರ್ ಪಿಸ್ತೂಲ್ ಶೂಟಿಂಗ್ ಪಂದ್ಯದಲ್ಲಿ ಜಿತು ಚಿನ್ನದ ಪದಕ ಗೆದ್ದು ಬೀಗಿದ್ದಾರೆ.
"ಅರ್ಹತಾ ಸುತ್ತಿನಲ್ಲಿ ನಾನು ಕೆಟ್ಟ ಪ್ರದರ್ಶನ ನೀಡಿದ್ದೆ. ನಾನು ಬಹಳಷ್ಟು ಹೆದರಿದ್ದೆನು. ಆದರೆ ತರಬೇತುದಾರರು ಒಮ್ಮೆ ತಿಳಿಸಿ ಹೇಳಿದ ಬಳಿಕ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದ್ದೆ. ಇದರಿಂದಾಗಿ ಫೈನಲ್ಸ್ ನಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ" ಜಿತು ಹೇಳಿದ್ದಾರೆ.
17 ವರ್ಷ ವಯಸ್ಸಿನ ಮೆಹುಲಿ ಘೋಷ್ ಅವರು 10 ಮಿ ಏರ್ ರೈಫಲ್ಸ್ ನಲ್ಲಿ ಬೆಳ್ಳಿ ಪದಕವನ್ನು ಗಳಿಸಿಕೊಂಡಿದ್ದಾರೆ. ಮೆಹುಲಿ 247.2 ಅಂಕದೊಡನೆ ಈ ಸಾಧನೆ ಮಾಡಿದರು. "ನಾನು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಆಡುತ್ತೇನೆ. ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ" ಎಂದು ಅವರು ಹೇಳಿದರು.
ಟೇಬಲ್ ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಗಳಲ್ಲಿ ಭಾರತ ತಂಡ ಇಂದು ಐತಿಹಾಸಿಕ ಸಾಧನೆ ಮಾಡಿದೆ.
ಮೂರು ಬಾರಿ ಚಾಂಪಿಯನ್ ಗಳಾದ ಮಲೇಶಿಯಾವನ್ನು ಮಣಿಸಿ ಭಾರತೀಯ ಷಟ್ಲರ್ಗಳು ಸಾಧನೆ ತೋರಿದ್ದಾರೆ.
ವೇಟ್ ಲಿಫ್ಟಿಂಗ್ ಸ್ಪರ್ಧೆಯ ಅಂತಿಮ ದಿನದಂದು ಪ್ರದೀಪ್ ಬೆಳ್ಳಿಪದಕ ಗಳಿಸಿದ್ದು "ನಾನು ಈ ಹಿಂದೆ 215 ಕೆಜಿ ವೈಯಕ್ತಿಕ ಭಾರವೆತ್ತುವ ಸ್ಪರ್ಧೆ ತೆಗೆದುಕೊಂಡಿದ್ದೆ. ಆದರೆ ಅದು ಇಂದು ಸಾಧ್ಯವಾಗಲಿಲ್ಲ" ಪ್ರದೀಪ್ ಹೇಳಿದ್ದಾರೆ.
ಪದಕ ಬೇಟೆಯ ಹೊರತಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾರತೀಯರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. 400 ಮೀಟರ್ ಪುರುಷರ ರಿಲೇ ನಲ್ಲಿ ಮುಹಮ್ಮದ್ ಅನಸ್ ಯಾಹಿಯ ಉತ್ತಮ ಪ್ರದರ್ಶನ ನೀಡಿದ್ದರು.
ಎತ್ತರ ಜಿಗಿತ ವಿಭಾಗದಲ್ಲಿ ತೇಜಸ್ವಿನ್ ಶಂಕರ್ ’ಎ’ ಗುಂಪಿನವರಲ್ಲಿ ಐದನೇ, ಒತ್ತಾರೆ ಸಮೂಹದಲ್ಲಿ ಒಂಭತ್ತನೇಯವರಾಗಿ ಗುರುತಿಸಲ್ಪಟ್ಟರು.
400 ಮೀಟರ್ ಮಹಿಳೆಯರ ವಿಭಾಗದಲ್ಲಿ ಹಿಮಾ ದಾಸ್ ಸೆಮಿಫೈನಲ್ಸ್ ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಬಾಕ್ಸಿಂಗ್ ವಿಭಾಗದಲ್ಲಿ ಗೌರವ್ ಸೋಲಂಕಿ (52 ಕೆಜಿ) ಮತ್ತು ಮನೀಶ್ ಕೌಶಿಕ್ (60 ಕೆ.ಜಿ) ತಾವು ಲಾಸ್ಟ್ 16 ಸುತ್ತಿನ ಪಂದ್ಯಗಳನ್ನು ಗೆದ್ದು ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದರು.