ಮನಿಲಾ: ಕಿಡಂಬಿ ಶ್ರೀಕಾಂತ್ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಏಷ್ಯನ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಕಜಕಸ್ತಾನದ ವಿರುದ್ಧ 4-1 ಮುನ್ನಡೆ ಸಾಧಿಸಿದ್ದು ಫ್ರೀ ಕ್ವಾರ್ಟರ್ ಪೈನಲ್ ಹಣಾಹಣಿಯಲ್ಲಿ ಸನಿಹ ತಲುಪಿದೆ.
ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಜತೆಗೆ, ಲಕ್ಷ್ಯ ಸೇನ್ ಹಾಗೂ ಶುಭಾಂಕರ್ ಡೇ ಅವರು ಪ್ರತ್ಯೇಕ ಸಿಂಗಲ್ಸ್ ಹಣಾಹಣಿಗಳಲ್ಲಿ ಸುಲಭವಾಗಿ ಜಯ ಸಾಧಿಸಿದ್ದಾರೆ.
ಕೇವಲ 23 ನಿಮಿಷಗಳಲ್ಲಿ ಶ್ರೀಕಾಂತ್ 21-10, 21-7 ಅಂತರದಲ್ಲಿ ಡಿಮಿಟ್ರಿ ಪನಾರಿನ್ ಅವರ ವಿರುದ್ಧ ಜಯ ಸಾಧಿಸಿದರೆ, ಲಕ್ಷ್ಯ ಸೇನ್ ಅವರು 21-13, 21-8 ಅಂತರದಲ್ಲಿ ಅರ್ತುರ್ ನಿಯಾರೆವ್ ವಿರುದ್ಧ 21 ನಿಮಿಷಗಳ ಪಂದ್ಯದಲ್ಲಿ ಸುಲಭವಾಗಿ ಜಯ ದಾಖಲಿಸಿದರು. ಮೂರನೇ ಸಿಂಗಲ್ಸ್ನಲ್ಲಿ ಡೇ 26 ನಿಮಿಷಗಳಲ್ಲಿ 21-11, 21-5ರಿಂದ ಖೈಟ್ಮುರತ್ ಕುಲ್ಮಾಟೋವ್ ಅವರನ್ನು ಮಣಿಸಿದರು.
ಮಂಗಳವಾರ ಸಿಂಗಲ್ಸ್ನಲ್ಲಿ ಕಣಕ್ಕಿಳಿಯದ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಬಿ ಸಾಯಿ ಪ್ರಣೀತ್ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಜೊತೆ ಕೈಜೋಡಿಸಿದರು ಆದರೆ ಕಝಕಿಸ್ಥಾನ ಜೋಡಿಯ ವಿರುದ್ಧ 21-18, 16-21, 19-21ರಲ್ಲಿ ಸೋಲುಂಡರು.
ಆದರೆ, ಎರಡನೇ ಡಬಲ್ಸ್ ಪಂದ್ಯದಲ್ಲಿ ಎಂ ಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ ಅವರು ಕಝಕ್ ಜೋಡಿಯನ್ನು 21-14, 21-8 ಸೆಟ್ಗಳಿಂದ ಸೋಲಿಸಿದರು.
ಟೂರ್ನಿಯಲ್ಲಿ ಭಾರತ ತಂಡವನ್ನು ಮಲೇಷ್ಯಾ ಮತ್ತು .ಕಝಕಿಸ್ಥಾನ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ ನಾಲ್ಕು ಗುಂಪುಗಳಲ್ಲಿ ಅಗ್ರ ಎರಡು ತಂಡವು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲಿದೆ. ಭಾರತ ಗುರುವಾರ ಮಲೇಷ್ಯಾ ವಿರುದ್ಧ ಸೆಣೆಸಲಿದೆ.
ಕರೋನವೈರಸ್ ಭಯದ ಹೊರತಾಗಿ ಟೀಂ ಇಂಡಿಯಾ ಪದಕಗಳ ಮೇಲೆ ಕಣ್ಣಿಟ್ಟು ಪೂರ್ಣ ಸಾಮರ್ಥ್ಯದೊಡನೆ ಆಡುತ್ತಿದೆ. ಇದು ಒಲಿಂಪಿಕ್ ವರ್ಷದಲ್ಲಿ ಆಟಗಾರರಿಗೆ ನಿರ್ಣಾಯಕ ಶ್ರೇಯಾಂಕಗಳನ್ನು ನೀಡುವ ಟೂರ್ನಿಯಾಗಿದೆ. ಇನ್ನು ಚೀನಾದಲ್ಲಿ ಇದುವರೆಗೆ 1000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಕರೋನವೈರಸ್ ಹರಡುವ ಭೀತಿಯಿಂದ ಭಾರತೀಯ ಮಹಿಳಾ ತಂಡವು ಸ್ಪರ್ಧೆಗೆ ಪ್ರಯಾಣಿಸದಿರಲು ನಿರ್ಧರಿಸಿತು.
Advertisement