ನವದೆಹಲಿ: ಒಲಿಂಪಿಕ್ಸ್ 2021 ಕ್ರೀಡಾಕೂಟದ ನಿಮಿತ್ತ 228 ಅಥ್ಲೀಟ್ ಗಳ ಭಾರತ ತಂಡ ಟೋಕಿಯೋಗೆ ಹಾರಲಿರುವ ಹಿನ್ನಲೆಯಲ್ಲಿ ಇಂದು ಪ್ರಧಾನಿ ಮೋದಿ ಅಥ್ಲೀಟ್ ಗಳೊಂದಿಗೆ ಸಂಭಾಷಣೆ ನಡೆಸಿ ಶುಭ ಕೋರಿದರು.
ಇದೇ ಜುಲೈ 23ರಿಂದ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಹೀಗಾಗಿ ಭಾರತದ 228 ಮಂದಿ ಅಥ್ಲೀಟ್ ಗಳ ತಂಡ ಜಪಾನ್ ತೆರಳಲು ಸಜ್ಜಾಗಿ ನಿಂತಿವೆ. ಈ ಹಿನ್ನಲೆಯಲ್ಲಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಟೋಕಿಯೊಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಕೋರಿದರು.
ನಿರೀಕ್ಷೆಗಳಿಂದ ವಿಚಲಿತರಾಗದಿರಿ, ಮಹತ್ವದ್ದು ಸಾಧಿಸಿ ಎಂದ ಪ್ರಧಾನಿ ಮೋದಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಅಥ್ಲೀಟ್ ಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, 'ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾ ವೇದಿಕೆಯಲ್ಲಿ ಮಿಂಚಲು ಇಡೀ ಭಾರತವೇ ನಿಮ್ಮ ಬೆನ್ನಿಗೆ ನಿಂತಿದೆ ಎಂದು ಅವರು ಎಲ್ಲರಲ್ಲೂ ವಿಶ್ವಾಸ ತುಂಬಿದರು. ಅಪ್ರತಿಮ ಮಹಿಳಾ ಬಾಕ್ಸರ್ ಎಂ. ಸಿ. ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಪ್ರತಿಭಾವಂತ ಶೂಟರ್ ಸೌರಭ್ ಚೌಧರಿ, ಶೂಟರ್ ಎಲವೆನಿಲ್ ವಲರಿವನ್ ಮತ್ತು ಅನುಭವಿ ಟೇಬಲ್ ಟೆನಿಸ್ ಆಟಗಾರ ಎ. ಶರತ್ ಕಮಲ್ ಸೇರಿದಂತೆ ಹಲವು ಅಥ್ಲೀಟ್ ಗಳೊಂದಿಗೆ ಪ್ರಧಾನಿ ವರ್ಚುವಲ್ ಸಮಾಲೋಚನೆಯಲ್ಲಿ ಮಾತನಾಡಿದರು.
‘ನಿರೀಕ್ಷೆಗಳಿಂದ ವಿಚಲಿತರಾಗಬೇಡಿ, ಅತ್ಯುತ್ತಮವಾದದ್ದನ್ನು ಸಾಧಿಸಿ, ಕರೆ ನೀಡಿದ ಮೋದಿ, ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಕ್ರೀಡಾ ಯಾನವನ್ನು ಪ್ರೋತ್ಸಾಹಿಸಿದ ಅವರ ಪೋಷಕರನ್ನು ಇದೇ ವೇಳೆ ಪ್ರಶಂಸಿಸಿದರು. "ನೀವು ಒಲಿಂಪಿಕ್ಸ್ನಿಂದ ಹಿಂತಿರುಗಿದ ನಂತರ ನಾನು ನಿಮ್ಮೊಂದಿಗೆ ಐಸ್ಕ್ರೀಮ್ ಸವಿಯುತ್ತೇನೆ" ಎಂದು ಪಿ.ವಿ ಸಿಂಧು ಅವರಿಗೆ ನರೇಂದ್ರ ಮೋದಿ ಭರವಸೆ ನೀಡಿದರು.
Advertisement