ಭುವನೇಶ್ವರ್: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೂನಿಯರ್ ಹಾಕಿ ವಿಶ್ವಕಪ್ನಲ್ಲಿ ಭಾರತ ಮೂರನೇ ಪಂದ್ಯದಲ್ಲಿ ಪೋಲೆಂಡ್ ಅನ್ನು 8-2 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ಸಂಜಯ್, ಅರಿಜಿತ್ ಸಿಂಗ್ ಹುಂಡಲ್ ಮತ್ತು ಸುದೀಪ್ ಚಿರ್ಮಾಕೊ ತಲಾ 2 ಗೋಲು ಗಳಿಸಿದರೆ, ಉತ್ತಮ್ ಸಿಂಗ್ ಮತ್ತು ಶಾರದಾನಂದ್ ತಿವಾರಿ 1-1 ಗೋಲು ಗಳಿಸಿದರು. ಪೋಲೆಂಡ್ ಪರ ವೊಜ್ಸಿಚ್ ರುಟ್ಕೊವ್ಸ್ಕಿ ಮತ್ತು ರಾಬರ್ಟ್ ಪೊವ್ಲಾಕ್ 1-1 ಗೋಲು ಗಳಿಸಿದರು. ಭಾರತದ ಮೊದಲ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ನಂತರ, ಉಪನಾಯಕ ಸಂಜಯ್ ತಮ್ಮ ಅಮೋಘ ಫಾರ್ಮ್ ಅನ್ನು ಮುಂದುವರೆಸಿದರು. ಕೆನಡಾ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿದ ಹುಂಡಾಲ್ ಈ ಪಂದ್ಯದಲ್ಲಿ ಎರಡು ಗೋಲುಗಳನ್ನು ದಾಖಲಿಸಿದರು. ಭಾರತೀಯ ಜೂನಿಯರ್ ಹಾಕಿ ತಂಡವು ಡಿಸೆಂಬರ್ 1 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಸೆಣಸಲಿದೆ.
ಭಾರತಕ್ಕೆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು
ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತವು ಫ್ರಾನ್ಸ್ ವಿರುದ್ಧ ಸೋತಿತು. ಇಂತಹ ಪರಿಸ್ಥಿತಿಯಲ್ಲಿ ಭಾರತ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಡಲು ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದಕ್ಕೂ ಮೊದಲು ಕೆನಡಾವನ್ನು 13-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಕ್ವಾರ್ಟರ್ಫೈನಲ್ನಲ್ಲಿ ತನ್ನ ಭರವಸೆ ಮೂಡಿಸಿತು. ಮತ್ತೊಂದೆಡೆ, ಪೋಲೆಂಡ್ ವಿರುದ್ಧದ ಪಂದ್ಯವು ಅವರಿಗೆ ಮಾಡು ಇಲ್ಲವೇ ಮಡಿ ಆಗಿತ್ತು. ಈ ಎರಡೂ ತಂಡಗಳ ವಿರುದ್ಧದ ಗೆಲುವಿನಿಂದಾಗಿ ಭಾರತ ಕ್ವಾರ್ಟರ್ ಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು.
ಕ್ವಾರ್ಟರ್ ಫೈನಲ್ನಲ್ಲಿ ಬೆಲ್ಜಿಯಂ ಎದುರಾಳಿ
ತಾನಾಡಿರುವ ಫ್ರಾನ್ಸ್ ವಿರುದ್ಧದ ಪಂಧ್ಯದಲ್ಲಿ ಸೋಲು ಕಂಡಿದ್ದ ಭಾರತ ತದನಂತರ ಕೆನಡಾ ವಿರುದ್ಧದ ಪಂದ್ಯದಲ್ಲಿ 13-1 ಅಂತರದಿಂದ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡಿ, ಕ್ವಾರ್ಟರ್ಫೈನಲ್ಗೆ ಲಗ್ಗೆ ಹಾಕಿದೆ. ಇದೀಗ ಮುಂದಿನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಹೋರಾಟ ನಡೆಸಲಿದೆ. ಗೆಲುವಿನ ನಗೆ ಬೀರುವ ಉತ್ಸಾಹದಲ್ಲಿದೆ. ಈ ಪಂದ್ಯ ಡಿಸೆಂಬರ್ 1ರಂದು ನಡೆಯಲಿದೆ.
Advertisement