ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಮತದಾನ ರಂಗೇರಿರುವಂತೆಯೇ ರಾಜ್ಯದ ಹಲವು ಜನಪ್ರತಿನಿಧಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ.
ಪತ್ರಕರ್ತರಿಗೆ ಹಣ ತೋರಿಸಿ ಉದ್ಧಟತನ ತೋರಿಸಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ಇಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಖೇಣಿ ಅವರಿಗೆ ಮತ ಹಾಕುತ್ತಿದ್ದೇನೆ ಎಂದು ಹೇಳುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಜಯ್ ಖೇಣಿ ಶಾಸಕ ಅಶೋಕ್ ಖೇಣಿಯವರ ಹಿರಿಯ ಸಹೋದರರಾಗಿದ್ದು, ಸಹೋದರನಿಗೆ ಮತದಾನ ಮಾಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿ ಅಶೋಕ್ ಖೇಣಿ ಮತದಾನ ಮಾಡಿದ್ದಾರೆ. ಬೀದರ್ ನಗರದ ನಗರಸಭೆ ಆವರಣದ ಮತಗಟ್ಟೆ ಸಂಖ್ಯೆ 001ರಲ್ಲಿ ಈ ಘಟನೆ ನಡೆದಿದೆ.
ಕಾಂಗ್ರೆಸ್ ಗೆ ಮತ ಹಾಕಿದ ಜೆಡಿಎಸ್ ಮುಖಂಡರು..?
ಇನ್ನು ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಕೂಡ ಇಂತದ್ದೇ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ. ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ಅಹ್ಮದ್ ಅವರು ನಾವು ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣ ಮೂರ್ತಿ ಅವರಿಗೆ ಮತ ಹಾಕಿದ್ದೇವೆ. ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂದು ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ಸೂಚನೆ ಕೊಟ್ಟಿಲ್ಲ. ಹಾಗಾಗಿ ನಾವು ಮೂವರು ಮತ್ತು ಬಿಬಿಎಂಪಿ ಸದಸ್ಯರು ಚರ್ಚೆ ಮಾಡಿ ಕಾಂಗ್ರೆಸ್ ಗೆ ಮತ ಹಾಕಿದ್ದೇವೆ ಎಂದು ತಿಳಿಸಿದರು. ಜೆಡಿಎಸ್ ನ ಅಖಂಡ ಶ್ರೀನಿವಾಸ ಮೂರ್ತಿ, ಟಿಎ ಶರವಣ ಹಾಗೂ ಜಮೀರ್ ಅಹ್ಮದ್ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಜೆಡಿಎಸ್ ನೊಳಗಿನ ಭಿನ್ನಮತ ಮತ್ತೆ ಸ್ಫೋಟಗೊಂಡಂತಾಗಿದೆ.
ಮತಗಟ್ಟೆಯ ಪಕ್ಕದಲ್ಲೇ ಸಭೆ ನಡೆಸಿದ ಸಂಸದ ಡಿಕೆ ಸುರೇಶ್
ಈ ನಡುವೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಕೂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ರಾಮನಗರ ವಿಧಾನ ಪರಿಷತ್ ಕ್ಷೇತ್ರದ ಕನಕಪುರ ಟೌನ್ ಬೂತ್`ನಲ್ಲಿ ಮತದಾನ ಮಾಡಿದ ಸಂಸದ ಡಿ.ಕೆ.ಸುರೇಶ್ ಅವರು ಬಳಿಕ ಅದೇ ಮತಗಟ್ಟೆಯ ಪಕ್ಕದ ಕೊಠಡಿಯಲ್ಲೇ ಪಕ್ಷದ ಕಾರ್ಯಕರ್ತರು ಹಾಗೂ ಮತಹಾಕಲು ಬಂದಿದ್ದ ಸ್ಥಳೀಯ ಸಂಸ್ಥೆ ಸದಸ್ಯರೊಂದಿಗೆ ಸಭೆ ನಡೆಸಿದರು. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
Advertisement